ಕಾಂಗ್ರೆಸ್ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್: 
ರಾಜಕೀಯ

MLC ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್; ರಾಹುಲ್ ಅಂಕಿತವೊಂದೇ ಬಾಕಿ!

ಜೂನ್ 13 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಕನಿಷ್ಠ ಏಳು ಎಂಎಲ್‌ಸಿ ಸ್ಥಾನಗಳನ್ನು ಗೆಲ್ಲಬಹುದು. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮಂಗಳವಾರದಿಂದಲೇ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಆಯ್ಕೆಯಾಗುವ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಂತಿಮಗೊಳಿಸಿದ್ದರೂ, ಪಕ್ಷದ ಹೈಕಮಾಂಡ್, ವಿಶೇಷವಾಗಿ ಹಿರಿಯ ನಾಯಕ ರಾಹುಲ್ ಗಾಂಧಿ ಶುಕ್ರವಾರ ಪಟ್ಟಿಗೆ ಅನುಮತಿ ನೀಡುವ ಸಾಧ್ಯತೆಯಿದೆ.

ಜೂನ್ 13 ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಕನಿಷ್ಠ ಏಳು ಎಂಎಲ್‌ಸಿ ಸ್ಥಾನಗಳನ್ನು ಗೆಲ್ಲಬಹುದು. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮಂಗಳವಾರದಿಂದಲೇ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದು, ಪಟ್ಟಿಗೆ ಕಾಂಗ್ರೆಸ್ ಕೇಂದ್ರ ನಾಯಕರ ಒಪ್ಪಿಗೆ ಪಡೆದಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಕರ್ನಾಟಕ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ ಮರುನಾಮಕರಣದ ಬಗ್ಗೆ ಕಾಂಗ್ರೆಸ್ ನಾಯಕತ್ವದಲ್ಲಿ ಭಿನ್ನಾಭಿಪ್ರಾಯವಿದೆ. ಹಿರಿಯ ಎಂಎಲ್‌ಸಿ ಬಿಕೆ ಹರಿಪ್ರಸಾದ್‌ ಅವರನ್ನು ಸಚಿವರನ್ನಾಗಿಸುವ ಮೂಲಕ ಅವರನ್ನು ಕಣಕ್ಕಿಳಿಸಲು ಶಿವಕುಮಾರ್‌ ಬಯಸಿದ್ದಾರೆ. ನಂತರ, ಮೇಲ್ಮನೆಯಿಂದ ಒಬ್ಬರನ್ನು ಮಾತ್ರ ಸಚಿವರನ್ನಾಗಿ ಮಾಡಬೇಕಾಗಿರುವುದರಿಂದ ಬೋಸರಾಜು ತಮ್ಮ ಸ್ಥಾನ ತ್ಯಾಗ ಮಾಡಬೇಕಾಗಬಹುದು ಎಂದು ಕಾಂಗ್ರೆಸ್ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಆದರೆ ಬೋಸರಾಜು ಅವರು ಹೈಕಮಾಂಡ್‌ಗೆ ನಿಷ್ಠರಾಗಿರುವ ಕಾರಣ ಅವರು ನಾಮನಿರ್ದೇಶನಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಸಿದರು.

ಬುಧವಾರ ಸಂಜೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಡಿಶಾದಲ್ಲಿ ಚುನಾವಣಾ ಪ್ರಚಾರದಿಂದ ಹಿಂದಿರುಗಿದ್ದು, ಕರ್ನಾಟಕ ಎಂಎಲ್‌ಸಿ ಚುನಾವಣೆ ಕುರಿತು ಸಭೆ ನಡೆಸಿದರು.ಮೂಲಗಳ ಪ್ರಕಾರ ಏಳು ಸ್ಥಾನಗಳಿಗೆ 300 ಮಂದಿ ಲಾಬಿ ನಡೆಸಿದ್ದು ಅವರಲ್ಲಿ ಕೆಲವರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ.

ಡಾ.ಯತೀಂದ್ರ (ಸಿದ್ದರಾಮಯ್ಯನವರ ಪುತ್ರ), ಎನ್.ಎಸ್.ಬೋಸರಾಜು, ರಮೇಶ್ ಬಾಬು, ಕೆ.ಪಿ.ನಂಜುಂಡಿ, ಬಿ.ವಿ.ಶ್ರೀನಿವಾಸ್, ಎಂ.ವೆಂಕಟೇಶ್, ಕೆ.ಗೋವಿಂದರಾಜು, ವಿನಯ್ ಕಾರ್ತಿಕ್, ಎ.ಎನ್.ನಟರಾಜ್ ಗೌಡ, ನಂಜಯ್ಯಮುತ್ತು, ವೀಣಾ ಕಾಶಪ್ಪನವರ್, ವಸಂತಕುಮಾರ್, ಬಸವರಾಜು, ಪುಷ್ಪಾ ಅಮರನಾಥ್, ಮುದ್ದುರಂಗ, ಮುದ್ದುಧರ ಬಿ.ಸಿ. ಎಸ್.ಎ.ಹುಸೇನ್, ತಮಟಗಾರ, ಐವನ್ ಡಿಸೋಜಾ, ರಮೇಶ್ ಕುಮಾರ್, ಮತ್ತು ವಿಜಯ್ ಮುಳಗುಂದ ಅವರ ಹೆಸರುಗಳಿವೆ ಎಂದು ಮೂಲಗಳು ತಿಳಿಸಿವೆ.

ಎಸ್‌ಸಿ (ಎಡ) ಸಮುದಾಯದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಖರ್ಗೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್ ಅವರನ್ನು ರಾಯಚೂರಿನಿಂದ ನಾಮನಿರ್ದೇಶನ ಮಾಡಲು ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಕಾಂಗ್ರೆಸ್ ವರಿಷ್ಠರು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಕೃಪಾ ಆಳ್ವಾ, ಮಟಿಲ್ಡಾ ಡಿಸೋಜಾ ಮತ್ತು ಕವಿತಾ ರೆಡ್ಡಿ ಸೇರಿದಂತೆ ಇತರ ಆಕಾಂಕ್ಷಿಗಳು ದೆಹಲಿಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದರು. ಅವರನ್ನು ಎಂಎಲ್‌ಸಿಯನ್ನಾಗಿ ಮಾಡದಿದ್ದರೆ, ಅವರು ಮಂಡಳಿಗಳು ಮತ್ತು ನಿಗಮಗಳಿಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಅಭ್ಯರ್ಥಿ ಗೆಲ್ಲಲು 19 ಮತಗಳನ್ನು ಪಡೆಯಬೇಕಾಗಿರುವುದರಿಂದ ಕಾಂಗ್ರೆಸ್ 135 ಶಾಸಕರೊಂದಿಗೆ ಏಳು ಸ್ಥಾನಗಳನ್ನು ಗೆಲ್ಲಬಹುದು. ಪಕ್ಷದ ಶಾಸಕರ ಮತಗಳನ್ನು ಆರು ನಾಮನಿರ್ದೇಶಿತರಿಗೆ ಹಂಚಿಕೆ ಮಾಡಿದ ನಂತರ, ಕಾಂಗ್ರೆಸ್ ನಾಯಕತ್ವವು ಉಳಿದ ಶಾಸಕರು ಮತ್ತು ಮೂವರು ಸ್ವತಂತ್ರರ ಮತಗಳನ್ನು ಏಳನೇ ನಾಮನಿರ್ದೇಶಿತರಿಗೆ ಹಂಚುವ ಸಾಧ್ಯತೆಯಿದೆ ಮತ್ತು ಅದು ಯಾರೆಂಬುದು ಕುತೂಹಲಕಾರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾದ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಎಂಎಲ್ ಸಿ ಚುನಾವಣೆಯಲ್ಲೂ ಅದನ್ನೇ ಪುನರಾವರ್ತಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT