ನವದೆಹಲಿ: ಮುಡಾದಿಂದ ಫೈಲುಗಳನ್ನು ಕದ್ದೊಯ್ದು ಅವುಗಳನ್ನು ಸುಟ್ಟುಹಾಕಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಂದ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಕಳಂಕ ಬಂದಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ಆರೋಪಿಸಿದ್ದಾರೆ.
ಯಡಿಯೂರಪ್ಪ ಅವರ ಪತ್ನಿ ಮೈತ್ರಾ ದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಕೈವಾಡವಿದ್ದು, ಅವರು ಕೇಂದ್ರ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೈರತಿ ಸುರೇಶ್ ಭಾನುವಾರ ಆರೋಪಿಸಿದ್ದರು. ಈ ಕುರಿತು ಇಂದು ರಾಷ್ಟ್ರ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ ಶೋಭಾ ಕರಂದ್ಲಾಜೆ, ಫೈಲ್ ಸುಟ್ಟು ಆರೋಪದಿಂದ ವಿಮುಖರಾಗಲು ನನ್ನ ವಿರುದ್ಧ ಆಧಾರ ರಹಿತ ಆರೋಪ ಹಾಗೂ ಅನಗತ್ಯ ಆರೋಪಗಳನ್ನು ಮಾಡುತ್ತಿರುವ ಸುರೇಶ್, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದರು.
ಬೈರತಿ ಸುರೇಶ್ ಅವರಂತಹ ರಾಜಕಾರಣಿಗಳನ್ನು ಆಪ್ತರನ್ನಾಗಿ ಇಟ್ಟುಕೊಂಡಿರುವುದಕ್ಕೆ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಕರಂದ್ಲಾಜೆ, ಶಕುನಿಯು ಕೌರವರ ಅವನತಿಗೆ ಹೇಗೆ ಬೆಂಬಲಿಸಿದನು ಎಂಬುದನ್ನು ಮುಡಾ ಪರಿಸ್ಥಿಗೆ ಹೋಲಿಸಿದರು. ಮುಖ್ಯಮಂತ್ರಿಗೆ ಆಪ್ತರಾಗಿರುವಂತಹ ಇಂತಹ ರಾಜಕೀಯ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಸುತ್ತುವರೆದಿದ್ದಾರೆ ಎಂದು ಕಿಡಿಕಾರಿದರು. ಫೈಲ್ ಸುಟ್ಟಿರುವುದು ನಿಮ್ಮ ಲಾಭಕ್ಕಾಗಿ ಅಲ್ಲ. ನಿಮ್ಮ ಲಾಭಕ್ಕಾಗಿ ಅಲ್ಲ, ನಿಮ್ಮನ್ನು ಕೆಳಗಿಳಿಸಲು ಮಾಡಲಾಗಿದೆ ಎಂದು ಆರೋಪಿಸಿದರು.
ಸತ್ಯ ಹೇಳಿದಾಗ ಜನ ಕೋಪಗೊಳ್ಳುತ್ತಾರೆ. ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಾರೆ ಎಂದು ಪುನರುಚ್ಚರಿಸಿದ ಕರಂದ್ಲಾಜೆ, ಭಯದಿಂದ ಸಚಿವ ಸುರೇಶ್ ಇಂತಹ ಆರೋಪ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿಗೆ ಸುರೇಶ್ ಕಾರಣವೇ ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ಅವರ ಆಸ್ತಿ ದೋಚಲು ಅವರ ಜೀವನದಲ್ಲಿ ಸುರೇಶ್ ಬಂದಿದ್ದಾರೆ. ರಾಕೇಶ್ ಸಾವಿನ ಹಿಂದೆ ಸುರೇಶ್ ಅವರ ಕೈವಾಡವಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ರಾಜಕೀಯ ವ್ಯಕ್ತಿಗಳು ಮಹಿಳೆಯರ ವಿರುದ್ಧ ಸುಳ್ಳು ಆರೋಪ ಮಾಡದೆ ರಾಜಕೀಯವನ್ನು ಯಥಾಸ್ಥಿತಿಯಲ್ಲಿ ಎದುರಿಸಬೇಕು. ಓಡಿಹೋಗುವ ಅಥವಾ ರಾಜಿ ಮಾಡಿಕೊಳ್ಳುವ ರಾಜಕಾರಣಿ ನಾನಲ್ಲ. ಪ್ರಸ್ತುತ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸುರೇಶ್ ಅವರನ್ನು ಅಲ್ಲಿಂದ ಓಡಿಸುವ ಜವಾಬ್ದಾರಿ ತನ್ನ ಮೇಲಿದೆ ಎಂದು ಪ್ರತಿಜ್ಞೆ ಮಾಡಿದರು.