ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ಡಿಕೆ.ಸುರೇಶ್ ಹಾಗೂ ಡಿಕೆ.ಶಿವಕುಮಾರ್ 
ರಾಜಕೀಯ

ಚನ್ನಪಟ್ಟಣ ಉಪ ಚುನಾವಣೆ: ಗೆದ್ದರೆ ಡಿಕೆಶಿ ಸಿಎಂ; ಒಕ್ಕಲಿಗರ ಮತ ಸೆಳೆಯಲು 'ಕೈ' ಕಸರತ್ತು!

ಈ ಮೊದಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಶಿವಕುಮಾರ್ ಅವರ ಕಿರಿಯ ಸಬಹೋದರ ಡಿಕೆ.ಸುರೇಶ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿತ್ತು. ಒಂದು ವೇಳೆ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಸುರೇಶ್ ಸೋತಿದ್ದರೆ ಶಿವಕುಮಾರ್ ಅವರ ಇಮೇಜ್ ಗೆ ಧಕ್ಕೆಯಾಗುವ ಸಾಧ್ಯತೆಗಳಿತ್ತು.

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಪೈಕಿ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರವನ್ನು ಹೇಗಾದರೂ ಮಾಡಿ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್​ ತಂತ್ರಗಾರಿಕೆ ರೂಪಿಸುತ್ತಿದೆ.

ಇದರಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ ಒಕ್ಕಲಿಗ ನಾಯಕ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿದ್ದಾರೆಂದು ಹೇಳಲಾಗುತ್ತಿದ್ದು, ಈ ಮೂಲಕ ಒಕ್ಕಲಿಗ ಮತಗಳನ್ನು ಸೆಳೆಯಲು ತಂತ್ರಗಳನ್ನು ರೂಪಿಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ಮೊದಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ.ಶಿವಕುಮಾರ್ ಅವರ ಕಿರಿಯ ಸಬಹೋದರ ಡಿ.ಕೆ ಸುರೇಶ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿತ್ತು. ಒಂದು ವೇಳೆ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಸುರೇಶ್ ಸೋತಿದ್ದರೆ ಶಿವಕುಮಾರ್ ಅವರ ಇಮೇಜ್ ಗೆ ಧಕ್ಕೆಯಾಗುವ ಸಾಧ್ಯತೆಗಳಿತ್ತು. ಹೀಗಾಗಿ ಒಕ್ಕಲಿಗ ಹೃದಯ ಭಾಗದಲ್ಲಿ ಪ್ರಬಲವಾಗಿರುವ ದೇವೇಗೌಡರ ಕುಟುಂಬವನ್ನು ಟಾರ್ಗೆಟ್ ಮಾಡಿ, ಯೋಗೇಶ್ವರ್ ಜೊತೆ ಶಾಂತಿ ಸಂಧಾನ ನಡೆಸಿ, ಕಾಂಗ್ರೆಸ್ ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾದರು.

ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಪಕ್ಷದ ಈ ನಿರ್ಧಾರವು ಈ ಭಾಗದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಪ್ರಾಬಲ್ಯಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿರುವ ಮಾಜಿ ಶಾಸಕ ಎಂ.ಸಿ.ಅಶ್ವಥ್ ಅವರು, ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆದ್ದು,. ನಮ್ಮ ಜಿಲ್ಲೆಯ ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು, ಯೋಗೇಶ್ವರ್ ಅವರನ್ನು ಗೆಲ್ಲಿಸಿದರೆ ಶಿವಕುಮಾರ್ ಅವರನ್ನು ಈ ಅವಧಿಯಲ್ಲೇ ಸಿಎಂ ಮಾಡಬಹುದು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಗುರುವಾರ ಸಂಜೆ ಬೆಂಗಳೂರಿನಲ್ಲಿ ಮೂಲ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಕರೆದ ಡಿ.ಕೆ ಶಿವಕುಮಾರ್ ಅವರು, ಉಪ ಚುನಾಣೆಯಲ್ಲಿನ ಗೆಲುವು ಎಷ್ಟು ಮುಖ್ಯ, ಎಂಬುದನ್ನು ವಿವರಿಸಿ, ಹಳೆಯ ಕಹಿ ಘಟನೆಗಳನ್ನು ಮರೆತು ಜತೆ ಸಾಗುವಂತೆ ಸೂಚನೆ ನೀಡಿದರು.

ಕುಮಾರಸ್ವಾಮಿ ರಾಜೀನಾಮೆ ಬಳಿಕ ಕ್ಷೇತ್ರಕ್ಕೆ ಸಾಕಷ್ಟು ಬಾರಿ ಭೇಟಿ ಕೊಟ್ಟಿರುವ ಡಿಕೆಶಿ ಎಲ್ಲಾ ಸಭೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಇಲ್ಲಿ ನಾನೇ ಅಭ್ಯರ್ಥಿ. ಬೇರೆಯವರ ಹೆಸರು ನೆಪ ಮಾತ್ರ ಎಂದೇಳುತ್ತಿದ್ದರು. ಗುರುವಾರದ ಸಭೆಯಲ್ಲೂ ಇದೇ ಮಾತನ್ನು ಪುನರುಚ್ಚರಿಸಿದ ಅವರು, ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ನೀವು ಮತ ಹಾಕಿಸಿ ಎಂದು ಸೂಚಿಸದ್ದಾರೆಂದು ತಿಳಿದುಬಂದಿದೆ.

ರಾಜಕಾರಣ ಎಂದಾಗ ಇವೆಲ್ಲವೂ ಸಹಜ. ರಾಜಕಾರಣ ಸಾಧ್ಯತೆಗಳ ಕಲೆಯಿದ್ದಂತೆ, ಯಾವಾಗ ಏನು ಬೇಕಾದರೂ ಆಗಬಹುದು, ಇದನ್ನು ನೀವುಗಳ್ಯಾರು ಮರೆಯಬಾರದು, ಯೋಗೇಶ್ವರ್‌ ಮತ್ತವರ ಬೆಂಬಲಿಗರು ಹಾಗೂ ನಿಮ್ಮ ನಡುವೆ ಯಾವುದೇ ರೀತಿಯ ವೈಮನಸ್ಸುಗಳಿದ್ದರೂ ಅದನ್ನು ಬಿಟ್ಟಾಕಿ, ಹಿಂದೆ ಆದಂತಹ ಕಹಿ ಘಟನೆಗಳನ್ನು ಮರೆತು ಎರಡು ಕಡೆಯವರು ಜತೆಯಲ್ಲಿ ಸಾಗುವಂತೆ ಮನವಿ ಮಾಡಿಕೊಂಡರು.

ಮೈತ್ರಿ ಪಕ್ಷವನ್ನು ಗುರಿ ಮಾಡಿಕೊಂಡಿರುವ ಹಾಗೂ ಯೋಗೇಶ್ವರ್ ಅವರ ಗೆಲುವಿನ ಹೊಣೆ ಹೊತ್ತಿರುವ ಡಿಕೆ ಬ್ರದರ್ಸ್ ರಾತ್ರೋರಾತ್ರಿ ಪಕ್ಷದ ಕಾರ್ಯಕರ್ತರು ಹಾಗೂ ಸಮುದಾಯ ಸದಸ್ಯರೊಂದಿಗೆ ಸರಣಿ ಸಭೆ ನಡೆಸುತ್ತಿದ್ದು, ಚುನಾವಣೆಗೆ ಸಜ್ಜುಗೊಳಿಸುತ್ತಿದ್ದಾರೆ.

ಕಾಂಗ್ರೆಸ್ ಸೇರುವ ಕೆಲವೇ ದಿನಗಳ ಹಿಂದೆ ಮಾತನಾಡಿದ್ದ ಯೋಗೇಶ್ವರ್ ಅವರು, ಡಿಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಇನ್ನು ಕೇವಲ ಒಂದು ಹೆಜ್ಜೆಯಷ್ಟೇ ದೂರದಲ್ಲಿದ್ದಾರೆಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT