ಹುಬ್ಬಳ್ಳಿ: ಮಲತಾಯಿ ಧೋರಣೆ ತೋರದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೀಡದೇ ಬಾಕಿ ಉಳಿಸಿಕೊಂಡಿರುವ 303 ಕೋಟಿ ರೂ. ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಒತ್ತಾಯಿಸಿದ್ದಾರೆ.
ಇಲ್ಲಿಯ ಪಾಲಿಕೆಯ ಸಭಾಭವನದಲ್ಲಿ 24ನೇ ಅವಧಿಯ ನೂತನ ಮೇಯರ್ ಜ್ಯೋತಿ ಪಾಟೀಲ ಹಾಗೂ ಸಂತೋಷ ಚವ್ಹಾಣ ಅವರಿಗೆ ಸೋಮವಾರ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ತಡೆಹಿಡಿದಿರುವ ಹಣವು ನಿಗಮದ ಸಿಬ್ಬಂದಿಯ ವೇತನ ಮತ್ತು ಪಿಂಚಣಿ ವಿತರಣೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾಗಿತ್ತು. ಅದರೆ, ಅನುದಾನಕ್ಕೆ ಸರ್ಕಾರ ತಡೆಹಿಡಿದಿರುವುದರಿಂದ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಕೆಲಸಗಳ ಕೈಗೆತ್ತಿಕೊಳ್ಳುವುದನ್ನು ಕುಂಠಿತಗೊಳಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಬಿಜೆಪಿ ಆಡಳಿತದ ನಿಗಮಗಳನ್ನು ಗುರಿಯಾಗಿಸಿಕೊಂಡಿದೆ, ರಾಜ್ಯ ಸರ್ಕಾರವು ನೌಕರರ ವೇತನ ಮತ್ತು ಪಿಂಚಣಿಗಳನ್ನು ಸಮಯಕ್ಕೆ ಸರಿಯಾಗಿ ನೀಡುವಲ್ಲಿ ವಿಫಲವಾಗಿದೆ. ಇದು ಪುರಸಭೆಯ ಮೇಲೆ ಹೊರೆಯನ್ನು ಹೆಚ್ಚಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತ ಇರುವ ಬೆಳಗಾವಿ ಹಾಗೂ ಹು-ಧಾ ಮಹಾನಗರ ಪಾಲಿಕೆಗೆ ತೊಂದರೆಕೊಡುವ ಪ್ರಯತ್ನ ಸರ್ಕಾರದಿಂದ ಆಗುತ್ತಿದೆ. ಈ ಮಧ್ಯೆಯೂ ಸ್ಥಳೀಯವಾಗಿ ಆದಾಯ ಕ್ರೋಢಿಕರಿಸಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಬಾಕಿ ಹಣ ಬಂದರೆ ಹೆಚ್ಚು ಅಭಿವೃದ್ಧಿ ಮಾಡಲು ಸಾಧ್ಯವಾಗಲಿದ್ದು, ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು ಎಂದರು.
ಇಂದಿರಾ ಕ್ಯಾಂಟೀನ್ನ್ನು ಪಾಲಿಕೆಯಿಂದ ನಿರ್ವಹಿಸಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಇದರ ಪ್ರಚಾರ ಪಡೆಯುತ್ತಿದೆ. ಹು-ಧಾ ನಗರ ಪಾಲಿಕೆಯ ಸಭಾಭವನ ನಿರ್ಮಾಣಕ್ಕೆ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದನ್ನು ಸಾಕ್ಷಿಕರಿಸುತ್ತದೆ. ಇದೇ ಪರಿಸ್ಥಿತಿ ಮುಂದುವರಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಮಹಾನಗರದ ಜನತೆ ಮತ್ತೇ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ಈ ಹಿಂದಿನ ಮೇಯರ್ ರಾಮಪ್ಪ ಬಡಿಗೇರ ರಾಜ್ಯ ಸರ್ಕಾರದ ಸ್ಪಂದನೆ ಕೊರತೆ ಮಧ್ಯೆಯೂ ಉತ್ತಮ ಕೆಲಸ ಮಾಡಿದ್ದಾರೆ. ಅದರಂತೆ ನೂತನ ಮೇಯರ್ಹಾಗೂ ಉಪಮೇಯರ್ ಮೂಲಭೂತ ಸೌಕರ್ಯ ವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಅಲ್ಲದೇ, ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಅವುಗಳ ಸುಧಾರಣೆಗೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಜಿಲ್ಲಾ ಸಚಿವ ಸಂತೋಷ್ ಲಾಡ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿಯವರ ಬಗ್ಗೆ ಹೇಳಿಕೆ ನೀಡುವ ಮೂಲಕ ಅಂತರರಾಷ್ಟ್ರೀಯ ವಿಷಯಗಳ ಮೇಲೆ ಅವರು ಗಮನಹರಿಸಿದ್ದಾರೆ. ಆದರೆ, ಸ್ಥಳೀಯ ವಿಷಯಗಳನ್ನು ನಿರ್ಲಕ್ಷಿಸಿದ್ದಾರೆಂದು ಟೀಕಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರವು ಸಾಕಷ್ಟು ಹಣವನ್ನು ಬಿಡುಗಡೆ ಮಾಡದ ಕಾರಣ ರಾಜ್ಯವು ಆರ್ಥಿಕವಾಗಿ ಸಂಕಷ್ಟಕ್ಕೆ ಎಂಬ ಕಾಂಗ್ರೆಸ್ ನಾಯಕರ ಆರೋಪವನ್ನೂ ಅವರು ತಳ್ಳಿಹಾಕಿದರು.
ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನದಲ್ಲಿ ಅನ್ಯಾಯ ಮಾಡಿಲ್ಲ ಮಾಡುವುದೂ ಇಲ್ಲ. ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ . ಬೆಂಗಳೂರು ಅಭಿವೃದ್ಧಿ, ಮೆಟ್ರೋ ರೈಲು, ಉಪನಗರ ರೈಲು ಯೋಜನೆ, ರಾಜ್ಯದ ರೈಲ್ವೆ ಯೋಜನೆ ಗಳಿಗೆಲ್ಲ ಹೆಚ್ಚಿನ ಅನುದಾನ ನೀಡಿದೆ. ಇದಲ್ಲದೇ ಅನುದಾನ ಹಂಚಿಕೆ ವಿಷಯದಲ್ಲಿ ಯಾವುದೇ ಬಗೆಯ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆರ್ಥಿಕ ಸ್ಥಿತಿಗತಿ ಸರಿಯಿಲ್ಲ. ಇದನ್ನು ಅವರದೇ ಶಾಸಕರು ಹೇಳುತ್ತಿದ್ದಾರೆ. ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದರು.
ರಾಜ್ಯ ಬಿಜೆಪಿ ನಾಯಕತ್ವದ ವಿಷಯದ ಕುರಿತು ಮಾತನಾಡಿ, ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ರಾಷ್ಟ್ರೀಯ ಅಧ್ಯಕ್ಷರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ದೃಢಪಡಿಸಿದರು.