ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ 
ರಾಜಕೀಯ

BJP ಶಿಸ್ತು ಸಮಿತಿ ನೋಟಿಸ್: ಅನ್ಯಾಯದಿಂದ ಮೌನ ತಾಳಿದ್ದೇವಷ್ಟೇ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ; ಸೋಮಶೇಖರ್-ಹೆಬ್ಬಾರ್ ಸ್ಪಷ್ಟನೆ

ಬಿಜೆಪಿ ಶಿಸ್ತು ಸಮಿತಿಯು ಇಬ್ಬರೂ ನಾಯಕರಿಗೂ ಶೋಕಾಸ್ ನೋಟಿಸ್ ನೀಡಿದ್ದು, ಇದಕ್ಕೆ ಕಾಲಮಿತಿ ನೀಡಿ, ಉತ್ತರಿಸುವಂತೆ ಸೂಚಿಸಿದೆ.

ಬೆಂಗಳೂರು: ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮುಂದಿನ 6 ವರ್ಷಗಳ ಕಾಲ ಪ್ರಾಥಮಿಕ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಬಿಜೆಪಿಯಲ್ಲಿದ್ದು ಬಂಡಾಯ ಎದ್ದಿರುವ ಇಬ್ಬರು ನಾಯಕರಾದ ಎಸ್‌ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರನ್ನೂ ಪಕ್ಷವು ಉಚ್ಛಾಟಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಬಿಜೆಪಿ ಶಿಸ್ತು ಸಮಿತಿಯು ಇಬ್ಬರೂ ನಾಯಕರಿಗೂ ಶೋಕಾಸ್ ನೋಟಿಸ್ ನೀಡಿದ್ದು, ಇದಕ್ಕೆ ಕಾಲಮಿತಿ ನೀಡಿ, ಉತ್ತರಿಸುವಂತೆ ಸೂಚಿಸಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್.ಟಿ.ಸೋಮಶೇಖರ್ ಅವರು, ನಾವು ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಕೆಪಿಸಿಸಿ ಕಚೇರಿಗೂ ಭೇಟಿ ನೀಡಿಲ್ಲ. ದೇವರು ನನಗೆ ಶಕ್ತಿ ನೀಡಿದ್ದಾನೆಯ ನಾನು ಕಾನೂನುಬದ್ಧವಾಗಿ ಹೋರಾಡುತ್ತೇನೆ, ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗಿನ ಭೇಟಿ ಅಧಿಕೃತವಾಗಿತ್ತು ಎಂದು ಹೇಳಿದ್ದಾರೆ.

ಡಿಕೆ.ಶಿವಕುಮಾರ್ ಕೇವಲ ಕೆಪಿಸಿಸಿ ಅಧ್ಯಕ್ಷರಷ್ಟೇ ಅಲ್ಲ, ಅವರು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದಾರೆ. ನನ್ನ ಕ್ಷೇತ್ರ ಅವರ ಅಡಿಯಲ್ಲಿ ಬರುತ್ತದೆ, ಆದ್ದರಿಂದ ನಾನು ಅವರನ್ನು ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಇತರೆ ಸಚಿವರನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆಯೇ ವಿನಃ ಅವರ ಪಕ್ಷದ ಕಾರ್ಯಕ್ರಮಗಳಲ್ಲಿ ಅಲ್ಲ. ನನ್ನ ಕ್ಷೇತ್ರಕ್ಕೆ ಹಣ ಕೇಳಲು ಸರ್ಕಾರ ಬಳಿ ಹೋಗುವುದರಲ್ಲಿ ತಪ್ಪೇನಿದೆ? ಸರ್ಕಾರ ಬೆಂಗಳೂರು ಶಾಸಕರೊಂದಿಗೆ ಬಜೆಟ್ ಪೂರ್ವ ಸಭೆ ಕರೆದಿತ್ತು, ಆದರೆ, ಉಳಿದವರು ಯಾರೂ ಹಾಜರಾಗಲಿಲ್ಲ. ನನ್ನ ಕ್ಷೇತ್ರಕ್ಕೆ ಅನುದಾನ ಬೇಕೆಂದು ನಾನು ಹೋಗಿದ್ದೆ. ಪಕ್ಷಕ್ಕೆ ಮುಜುಗರ ಉಂಟುಮಾಡಿಲ್ಲ ಅಥವಾ ಯಾವುದೇ ಬಿಜೆಪಿ ನಾಯಕನ ವಿರುದ್ಧ ಹೇಳಿಕೆ ನೀಡಿಲ್ಲ ಪಕ್ಷವನ್ನು ನಿಜಕ್ಕೂ ಮುಜುಗರಕ್ಕೀಡು ಮಾಡುತ್ತಿರುವವರ ವಿರುದ್ಧ ಯಾವುದೇ ಕ್ರಮವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿರೋಧ ಪಕ್ಷವಾಗಿ ಬಿಜೆಪಿ ವಿಫಲವಾಗಿದೆ. ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅಧಿವೇಶವನ್ನು ನಡೆಸಲಾಗುತ್ತದೆಯೇ ವಿನಃ ಬಹಿಷ್ಕರಿಸಲು ಅಥವಾ ಹೊರನಡೆಯಲು ನಡೆಸುವುದಿಲ್ಲ ಹೇಳಿದರು.

ಏತನ್ಮಧ್ಯೆ ಶಾಸಕ ಹೆಬ್ಬಾರ್ ಕೂಡ ಬಿಜೆಪಿಯನ್ನು ಟೀಕಿಸಿದ್ದಾರೆ, ಪಕ್ಷದ ಸದಸ್ಯರ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.

ನಾನು ಪಕ್ಷಕ್ಕಾಗಿ ಏನೂ ಮಾಡಿಲ್ಲದಿರಬಹುದು, ಆದರೆ, ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.

ಶೋಕಾಸ್ ನೋಟಿಸ್‌ನಲ್ಲಿ ಪಕ್ಷದ ಹೈಕಮಾಂಡ್ ತನಗೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ನಿಗದಿತ ಸಮಯದೊಳಗೆ ಉತ್ತರಿಸಬೇಕಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ ಅಥವಾ ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸಿಲ್ಲ. ನನಗೆ ಅನ್ಯಾಯವಾಗಿದೆ. ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದು ಎಲ್ಲವನ್ನೂ ವಿವರಿಸುತ್ತೇನೆ. ವಿವಿಧ ಕಾರಣಗಳಿಂದಾಗಿ ತಾನು ಮೌನವಾಗಿದ್ದೇನೆ. ಪಕ್ಷದಲ್ಲಿನ ಬೆಳವಣಿಗೆಗಳಿಂದ ನನಗೆ ನೋವಾಗಿದೆ ಎಂದು ತಿಳಿಸಿದರು.

ಕೆಲವು ನಾಯಕರು ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ ಯಾರಾದರೂ ಅವರನ್ನು ಪ್ರಚೋದಿಸಿದ್ದಾರೆಯೇ ಅಥವಾ ಅವರು ಯಾರನ್ನಾದರೂ ಉಳಿಸಲು ಪ್ರಯತ್ನಿಸಿದ್ದಾರೆಯೇ ಎಂಬುದು ಇಂದಿಗೂ ನಿಗೂಢವಾಗಿಯೇ ಇದೆ, ಅಂತಹವರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಒಂದು ನಿರ್ದಿಷ್ಟ ವರ್ಗವು ಉನ್ನತ ಹುದ್ದೆಗಳನ್ನು ಪಡೆಯುತ್ತಿದೆ. ಇತರರು ಪಕ್ಷಕ್ಕಾಗಿ ದುಡಿಯುತ್ತಲೇ ಇದ್ದರೂ ಗುರ್ತಿಕೆ ಇಲ್ಲದಂತಾಗಿದೆ ಎಂದು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT