ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ 
ರಾಜಕೀಯ

ಸಿದ್ದರಾಮಯ್ಯ ಸರ್ಕಾರ ಭಯೋತ್ಪಾದಕರನ್ನು ಸಬಲೀಕರಣಗೊಳಿಸುತ್ತಿದೆ: ನಳಿನ್ ಕುಮಾರ್ ಕಟೀಲ್ ಆರೋಪ

ಶೆಟ್ಟಿ ವಿರುದ್ಧ ಎರಡು ವರ್ಷಗಳಿಂದ ಯಾವುದೇ ಪ್ರಕರಣಗಳಿರಲಿಲ್ಲ. ಯಾವುದೇ ಘಟನೆಗಳಲ್ಲಿ ಆತ ಭಾಗಿಯಾಗಿಲ್ಲ. ರೌಡಿಶೀಟರ್ ಎಂದು ತೀರ್ಮಾನ ಮಾಡಬೇಕಾಗಿರೋದು ನ್ಯಾಯಾಲಯ, ಗೃಹ ಸಚಿವರಲ್ಲ.

ಉಡುಪಿ: ಸಿದ್ದರಾಮಯ್ಯ ಸರ್ಕಾರ ಭಯೋತ್ಪಾದಕರನ್ನು ಸಬಲೀಕರಣಗೊಳಿಸುತ್ತಿದೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸೋಮವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಪರಿಸ್ಥಿತಿಯನ್ನು ಕಾಶ್ಮೀರದ ಪರಿಸ್ಥಿತಿಗೆ ಹೋಲಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿಸಿದರು.

ಸಿದ್ದರಾಮಯ್ಯ ಅವರ ಆಡಳಿತ ಇದ್ದಾಗ ಹಿಂದೂಗಳ ಸರಣಿ ಕಗ್ಗೊಲೆಗಳು ನಡೆಯುತ್ತದೆ. ಹಿಂದೂಗಳ ಮೇಲೆ ನಿರಂತರ ದಾಳಿ ಆಗುತ್ತಿದೆ. ಪಾಕಿಸ್ತಾನ ಧ್ವಜ ಹಿಡಿದರೆ, ಜಿಂದಾಬಾದ್ ಹೇಳಿದ್ದಕ್ಕೆ ಕೇಸ್ ಆಗಲ್ಲ. ಟ್ವೀಟ್ ಮೂಲಕ ಹಿಂದೂಗಳ ಹತ್ಯೆ ಮಾಡುವ ಎಚ್ಚರಿಕೆ ನಿರಂತರವಾಗಿ ನಡೆಯುತ್ತಿದೆ. ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗೂ, ಮಂಗಳೂರಿನ ಚಟುವಟಿಕೆಗೂ ಯಾವ ವ್ಯತ್ಯಾಸವು ಇಲ್ಲ ಎಂದು ಕಿಡಿಕಾರಿದರು.

ಸುಹಾಸ್ ಶೆಟ್ಟಿ ಹತ್ಯೆಯ ನಂತರ ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ಮುಸ್ಲಿಂ ನಾಯಕರೊಂದಿಗೆ ಸಭೆ ನಡೆಸಿದರು, ಈ ಸಂದರ್ಭದಲ್ಲಿ ಮುಸ್ಲಿಂ ನಾಯಕರು ಗದ್ದಲ ಎಬ್ಬಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಪರವಾಗಿ ಪೋಸ್ಟ್ ಮಾಡಿದ್ದಕ್ಕಾಗಿ ಹಲವನ್ನು ಬಂಧಿಸುವ ಸರ್ಕಾರ, ಸಭೆಯ ಸಮಯದಲ್ಲಿ ಗೃಹ ಸಚಿವರಿಗೆ ಬೆದರಿಕೆ ಹಾಕಿದವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ? ಗೃಹ ಸಚಿವರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಆಕ್ರಮಣ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಇದೇಯೋ ಅಥವಾ ಸತ್ತು ಹೋಗಿದೆಯೋ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಸುಹಾಸ್ ಮನೆಗೆ ಹೋಗಲು ತಡೆಯಿದೆ. ಕಾಂಗ್ರೆಸ್‌ನ ಮುಸ್ಲಿಂ ಮುಖಂಡರೊಬ್ಬರು ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ನೀಡಿದ್ದಾರೆ. ಇಂತಹ ರಾಜಕೀಯಕ್ಕೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ. ಸರ್ಕಾರ ಇರುವುದೇ ಹಿಂದೂ ಸಮಾಜದ ಧಮನಕ್ಕಾಗಿ ಎಂದು ಆಕ್ರೋಶ ಹೊರಹಾಕಿದರು.

ಹಿಂದೂ ಸಮಾಜ ಪರ ಇರುವ ಎಲ್ಲರ ಮೇಲೆ ದಾಳಿ ನಡೆಯುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಬೆದರಿಕೆ ಹಾಕಿದರೆ ಬಂಧಿಸುತ್ತಾರೆ. ಗೃಹ ಸಚಿವರ ಸಭೆಯಲ್ಲಿ ಧಮ್ಕಿ ಹಾಕಿದವರನ್ನು ಬಂಧಿಸಲು ತಾಕತ್ತಿಲ್ಲ. ಗುಂಡು ಹೊಡೆಯಿರಿ ಎಂದು ಹೇಳಿಲ್ಲ, ಬಂಧನ ಮಾಡಿ ಅಂತಿದ್ದೇವೆ ಎಂದು ಹೇಳಿದರು.

ಸುಹಾಸ್ ಶೆಟ್ಟಿ ಅವರ ಹತ್ಯೆಯ ನಂತರ, ಇಬ್ಬರು ಹಿಂದೂ ನಾಯಕರಿಗೆ ಜೀವ ಬೆದರಿಕೆ ಬಂದಿದೆ ಇವರಿಗೆ ಪೊಲೀಸ್ ರಕ್ಷಣೆ ನೀಡಬೇಕು ಮತ್ತು ಬೆದರಿಕೆ ಹಾಕುತ್ತಿರುವವರನ್ನು ತಕ್ಷಣ ಬಂಧಿಸಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಸುಹಾಸ್ ಶೆಟ್ಟಿ 'ರೌಡಿಶೀಟರ್' ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸುಹಾಸ್‌ ಕೊಲೆಗೆ ಸರಕಾರ ಕೊಟ್ಟ ಹಣವನ್ನು ಬಳಸಲಾಗಿದೆ ಎಂಬ ಆರೋಪವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹಿತ ಅನೇಕರ ಮೇಲೆ ಪ್ರಕರಣಗಳಿವೆ. ಸರಕಾರದಲ್ಲಿ ಇರುವವರೆಲ್ಲರೂ ರೌಡಿಗಳೇ? ಶೆಟ್ಟಿ ವಿರುದ್ಧ ಎರಡು ವರ್ಷಗಳಿಂದ ಯಾವುದೇ ಪ್ರಕರಣಗಳಿರಲಿಲ್ಲ. ಯಾವುದೇ ಘಟನೆಗಳಲ್ಲಿ ಆತ ಭಾಗಿಯಾಗಿಲ್ಲ. ರೌಡಿಶೀಟರ್ ಎಂದು ತೀರ್ಮಾನ ಮಾಡಬೇಕಾಗಿರೋದು ನ್ಯಾಯಾಲಯ, ಗೃಹ ಸಚಿವರಲ್ಲ. ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಕೊಲೆಯಾಗಿದೆ. ಹಿಂದೂಗಳ ರಕ್ಷಣೆ ಮಾಡಲು ಹೊರಟವರನ್ನು ಹತ್ಯೆ ಮಾಡುತ್ತಿದ್ದಾರೆ. ಈಗಾಗಲೇ ಟಾರ್ಗೆಟ್ ಗ್ರೂಪ್ ರಚನೆಯಾಗಿದೆ. ಟಾರ್ಗೆಟ್ ಗ್ರೂಪಿನ ಒಂದು ಅಂಶದ ಕೆಲಸ ಆರಂಭವಾಗಿದೆ. ಸುಹಾಸ್ ಮೇಲೆ ಗೂಬೆಕೂರಿಸುವ ಕೆಲಸವನ್ನು ಬಿಟ್ಟು, ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT