ಬೆಂಗಳೂರು: ಸುರಂಗ ರಸ್ತೆ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ಲಾಲ್ಬಾಗ್ಗೆ ಸಮಾಧಿ ಅಗೆಯುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ರಕ್ಷಿಸಿ - ಟನಲ್ ರೋಡ್ ನಿಲ್ಲಿಸಿ” ಎಂಬ ಘೋಷಣೆಯಡಿ ಲಾಲ್ ಬಾಗ್ ಪೂರ್ವದ್ವಾರದ ಡಬ್ಬಲ್ ರೋಡ್ ಬಳಿ ಸಂಸದ ತೇಜಸ್ವಿ ಸೂರ್ಯ ಮತ್ತು ಇತರ ಬಿಜೆಪಿ ನಾಯಕರು ಭಾನುವಾರ ಪ್ರತಿಭಟನೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಇದು ಟನಲ್ ರಸ್ತೆ ಅಲ್ಲ ವಿಐಪಿ ಕಾರಿಡಾರ್ ಆಗುತ್ತದೆ. ಶೇ.90ರಷ್ಟು ಬಡವರು, ಮಧ್ಯಮ ವರ್ಗದವರು ಬಳಸುವ ಬೈಕ್, ಸೈಕಲ್ಗೆ ಪ್ರವೇಶವಿಲ್ಲ. ಕೇವಲ ಕಾರಿಗೆ ಮಾತ್ರ ಪ್ರವೇಶವಿದೆ. ಹಾಗಾಗಿ ಇದು ವಿಐಪಿ ರಸ್ತೆ ಎಂದು ಆಕ್ಷೇಪಿಸಿದರು.
ಬೆಂಗಳೂರಿನ ಆರ್ಥಿಕತೆಯನ್ನು ಮುಳುಗಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರವು ಭಾರಿ ಸಾಲ ಮಾಡುತ್ತಿದೆ. ಈ ಯೋಜನೆಗೆ 8 ಸಾವಿರ ಕೋಟಿ ಟೆಂಟರ್ ಕರೆದಿದ್ದಾರೆ. 4 ಸಾವಿರ ಕೋಟಿ ಪಾವತಿ ಮಾಡಬೇಕು. ಇದಕ್ಕಾಗಿ ಸಾಲ ಮಾಡಲು ಹೊರಟಿದ್ದಾರೆ. ಅದಕ್ಕೆ ಬಡ್ಡಿ ಎಲ್ಲಿಂದ ಕೊಡುತ್ತಾರೆ? ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳುವ ಯೋಜನೆ ಇದಾಗಿದೆ. ಭೂಮಿಯ ಆಳದಲ್ಲಿ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದರು.
ನಗರದಲ್ಲಿ ಗುಂಡಿಗಳನ್ನು ಮುಚ್ಚಲು ಯೋಗ್ಯತೆ ಇಲ್ಲದ ಸರ್ಕಾರ, ಟನಲ್ ನಿರ್ಮಾಣ ಮಾಡುತ್ತೇನೆಂದು ಬೊಗಳೆ ಬಿಡುತ್ತಿದೆ. ಒಂದು ಕಾಲದಲ್ಲಿ ಬೆಂಗಳೂರು ನಗರವನ್ನು ವಿಶ್ವವೇ ನೋಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉದ್ಯಮಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದು ಕರ್ನಾಟಕದ ಮತ್ತು ಕನ್ನಡಿಗರ ದೌರ್ಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಗುಂಡಿಗಳನ್ನು ಮುಚ್ಚಿ ಪ್ರತಿದಿನ ಆಗುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸಿ. ಅಕ್ಟೋಬರ್ 30ರೊಳಗೆ ಗುಂಡಿಗಳನ್ನು ಮುಚ್ಚಬೇಕೆಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಗಡುವು ಮುಗಿದಿದ್ದರೂ ಡೆತ್ಗಳು ಮಾತ್ರ ಸಂಭವಿಸುತ್ತಲೇ ಇವೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು.
ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಬಿಜೆಪಿ ಧ್ವನಿ ಎತ್ತಿದೆ. ಸಾಕಷ್ಟು ಜನ ಇಲ್ಲಿಗೆ ಬಂದಿದ್ದಾರೆ. ನಾವು ಮೌನವಾಗಿ ಪ್ರತಿಭಟನೆ ಮಾಡಿದ್ದೇವೆ. ಸುರಂಗ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತದೆ. ಬೆಂಗಳೂರಿನ ಜನರು ನಿದ್ದೆಗೆಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತೇಜಸ್ವಿ ಸೂರ್ಯ ಅವರು ಮಾತನಾಡಿ, ಸುರಂಗ ರಸ್ತೆ ಯೋಜನೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಲ್ಲ. ಸುರಂಗ ರಸ್ತೆಗಳು ನಗರಗಳಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದಿಲ್ಲ. ಬದಲಾಗಿ ಖಾಸಗಿ ಸಾರಿಗೆಯ ಮೇಲೆ ಹೆಚ್ಚು ಅವಲಂಬನೆ ಮತ್ತು ಸಾರ್ವಜನಿಕ ಸಾರಿಗೆಯ ಕೊರತೆ ಎಂಬ ಮೂಲ ಕಾರಣವನ್ನು ಪರಿಹರಿಸದೆ, ಕೇವಲ ಒಂದು ಜಂಕ್ಷನ್ನಿಂದ ಇನ್ನೊಂದಕ್ಕೆ ಸಂಚಾರವನ್ನು ಸ್ಥಳಾಂತರಿಸುತ್ತವೆ ಎಂದು ಹೇಳಿದ್ದಾರೆ.
ಅಲ್ಲದೆ, ಈ ಯೋಜನೆಯು ಸೂಕ್ತವಾದ ಪರಿಸರ ಅಥವಾ ಭೂವೈಜ್ಞಾನಿಕ ಪರಿಣಾಮಗಳ ಅಧ್ಯಯನವಿಲ್ಲದೆ ಮುಂದುವರೆದಿರುವುದರಿಂದ, ಲಾಲ್ಬಾಗ್ನ ಪರಿಸರ ಮತ್ತು 3,000 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪೆನಿನ್ಸುಲಾರ್ ಬಂಡೆ ಎಂಬ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಕ್ಕೆ ಶಾಶ್ವತ ಹಾನಿ ಉಂಟುಮಾಡುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದ್ದಾರೆ. ಬೆಂಗಳೂರಿಗೆ ದೂರದೃಷ್ಟಿಯ ಮೂಲಸೌಕರ್ಯ ಬೇಕೇ ಹೊರತು, ಅದರ ಪರಂಪರೆ ಮತ್ತು ಪರಿಸರವನ್ನು ನಾಶಪಡಿಸುವ ಇಂತಹ ಅವಿವೇಕದ ಯೋಜನೆಗಳಲ್ಲ ಎಂದು ಖಂಡಿಸಿದ್ದಾರೆ.
ಈ ಯೋಜನೆಗೆ ಸಾವಿರಾರು ಕೋಟಿಗಳನ್ನು ಖರ್ಚು ಮಾಡುವ ಬದಲು, ರಾಜ್ಯ ಸರ್ಕಾರವು ಸುಸ್ಥಿರವಾದ, ದೀರ್ಘಕಾಲೀನ ಸಾರಿಗೆ ಪರಿಹಾರಗಳಲ್ಲಿ ಹೂಡಿಕೆ ಮಾಡಿ. ಈ ಮೂಲಕ ಎಲ್ಲರಿಗೂ ಸುಲಭವಾಗಿ ಮತ್ತು ಸಮರ್ಥವಾಗಿ ಲಭ್ಯವಿರುವ ಸಾರ್ವಜನಿಕ ಸಂಚಾರಕ್ಕಾಗಿ ಮೆಟ್ರೋ, ಉಪನಗರ ರೈಲು ಮತ್ತು ಬಿಎಂಟಿಸಿ ಜಾಲಗಳನ್ನು ಬಲಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.