ಬೆಂಗಳೂರು: ಮೋದಿ ಪ್ರಧಾನಿ ಆದ ಬಳಿಕ ಎಲ್ಲ ಸಾಂವಿಧಾನದ ಸಂಸ್ಥೆಗಳ ಮೌಲ್ಯ ಹಾಳು ಮಾಡಿ, ಚುನಾವಣಾ ಆಯೋಗ-ಸಿಬಿಐ ಸೇರಿ ಕೇಂದ್ರ ಸರ್ಕಾರದ ಅಡಿಯಾಳಾಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ನಡೆದಿರುವ ಮತಗಳ್ಳತನದ ದಾಖಲೆಗಳನ್ನು, ಮತಗಳ್ಳತನದ ವ್ಯವಸ್ಥಿತ ಷಡ್ಯಂತ್ರ ಮತ್ತು ವ್ಯವಸ್ಥಿತ ಕಾರ್ಯತಂತ್ರದ ದಾಖಲೆಗಳನ್ನು ವಿವರಿಸಿ ಮಾತನಾಡಿದರು.
ಬಿಜೆಪಿಯವರು ಕೇವಲ ಸುಳ್ಳಿನಲ್ಲಿ ಮಾತ್ರವಲ್ಲ ಮತಗಳ್ಳತನದಲ್ಲೂ ನಿಸ್ಸೀಮರು ಎನ್ನುವುದು ಸಾಬೀತಾಗಿದೆ. ನಾವು ಇದನ್ನು ಸಹಿಸಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟದ ಮಾರ್ಗ ಹಿಡಿಯುತ್ತೇವೆ ಎಂದರು.ಕರ್ನಾಟಕ, ಬಿಹಾರ, ಮಹಾರಾಷ್ಟ್ರ ಹರಿಯಾಣದಲ್ಲಿ ಮತಗಳ್ಳತನವಾಗಿದೆ. ಇಷ್ಟೆಲ್ಲಾ ನಡೆದರೂ ಚುನಾವಣಾ ಆಯೋಗ ತನಿಖೆ ಮಾಡಿಲ್ಲ ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ.
ಕೇಂದ್ರ ಸರ್ಕಾರ ಸೂಚನೆಯಂತೆ ಕೆಲಸ ಮಾಡುತ್ತಿದೆ ಕೇಂದ್ರ ಹೇಳಿದ ಹಾಗೆ ಇವರು ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರ ಸಂಸ್ಥೆಗಳನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಡಿ ಐಟಿ ಈಗ ಚುನಾವಣಾ ಆಯೋಗ ದುರ್ಬಳಕೆಯಾಗುತ್ತಿದೆ ಕೇಂದ್ರದ ಅಡಿಯಾಳಾಗಿ ಕೇಂದ್ರ ಚುನಾವಣಾ ಆಯೋಗ ಕೆಲಸ ಮಾಡುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಮತಗಳ್ಳತನದ ಮೂಲಕ ಅನೇಕ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಅಧಿಕಾರಕ್ಕೆ ಬಂದಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಲೋಕಸಭೆ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ನಿರಂತರ ಅಧ್ಯಯನ, ತಪಸಣೆ ಬಳಿಕ ದಾಖಲೆ ಸಮೇತ ಮತಗಳ್ಳತನವನ್ನು ದೇಶದ ಜನರಿಗೆ ಮನವರಿಕೆ ಮಾಡಿಸಿದ್ದಾರೆ ಎಂದು ವಿವರಿಸಿದರು.
ಸಂವಿಧಾನಬಾಹಿರವಾಗಿ ಅಧಿಕಾರ ಹಿಡಿಯುವುದು ಸಂವಿಧಾನಕ್ಕೆ ಎಸಗುವ ದ್ರೋಹ. ಪ್ರಜಾಪ್ರಭುತ್ವಕ್ಕೆ ಎಸಗಿದ ವಂಚನೆ. ರಾಹುಲ್ ಗಾಂಧಿಯವರು, ಬೆಂಗಳೂರು ಕೇಂದ್ರ ಲೋಕಸಭೆ ಚುನಾವಣೆಯಲ್ಲಿ ನಡೆದ ಮತಗಳ್ಳತನವನ್ನು ಸ್ಪಷ್ಟವಾಗಿ, ದಾಖಲೆ ಸಮೇತ ಬಯಲಿಗೆ ಎಳೆದು ದಾಖಲೆಗಳನ್ನು ದೇಶದ ಜನರ ಮುಂದೆ ಇಟ್ಟಿದ್ದಾರೆ. ಇಷ್ಟಾದರೂ ಚುನಾವಣಾ ಆಯೋಗ ನಾವು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ದೇಶದ ಜನರ ಮುಂದೆ ಇರಿಸಿದ ದಾಖಲೆಗಳಿಗೂ ಉತ್ತರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.