ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ 
ರಾಜಕೀಯ

'vote chori': ರಾಜ್ಯದ 1.12 ಕೋಟಿ ಜನರಿಂದ 'ಕೈ' ಸಹಿ ಸಂಗ್ರಹ, ನ.10ಕ್ಕೆ ಹೈಕಮಾಂಡ್'ಗೆ ಸಲ್ಲಿಕೆ

ರಾಜ್ಯದ ಹಲವು ಜಿಲ್ಲೆಗಳಿಂದ ನಾವು ಸಹಿ ಸಂಗ್ರಹಿಸಿದ್ದೇವೆ. ಅಭಿಯಾನ ಯಶಸ್ವಿಯಾಗಿದೆ. 1,12,40,000 ಸಹಿಗಳನ್ನು ಸಂಗ್ರಹಿಸಿದ್ದೇವೆ.ನವೆಂಬರ್ 10 ರಂದು ಹೈಕಮಾಂಡ್'ಗೆ ಸಲ್ಲಿಸಲು ನಾವು ನಿರ್ಧರಿಸಿದ್ದೇವೆ.

ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಮತಗಳ್ಳತನ ನಡೆದಿದ್ದು, ಅದರ ವಿರುದ್ಧ ಜನಜಾಗೃತಿ ಮಾಡುವ ಉದ್ದೇಶದೊಂದಿಗೆ ರಾಜ್ಯದಲ್ಲಿ ಈ ವರೆಗೆ 1.12 ಕೋಟಿ ಜನರಿಂದ ಕಾಂಗ್ರೆಸ್ ಸಹಿ ಸಂಗ್ರಹ ಮಾಡಿದ್ದು. ನ.10ರಂದು ಎಐಸಿಸಿ ಕಚೇರಿಗೆ ಸಲ್ಲಿಕೆ ಮಾಡಲಿದೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ವೋಟ್ ಚೋರಿ' ವಿರುದ್ಧದ ಸಹಿ ಅಭಿಯಾನದ ಭಾಗವಾಗಿ ಕರ್ನಾಟಕದಿಂದ ಪಕ್ಷವು 1.12 ಕೋಟಿ ಸಹಿಗಳನ್ನು ಸಂಗ್ರಹಿಸಿದೆ. ಈ ಸಹಿಗಳನ್ನು ನ.10 ರಂದು ಹೈಕಮಾಂಡ್'ಗೆ ಸಲ್ಲಿಸಲಿದ್ದು, ಅಲ್ಲಿಂದ ರಾಷ್ಟ್ರಪತಿ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಲೋಕಸಭೆಯಲ್ಲಿ 'ವೋಟ್ ಕಳ್ಳತನ'ದ ಕುರಿತು ಕಾಂಗ್ರೆಸ್ ನಡೆಸಿದ ಅಭಿಯಾನವು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ ಪ್ರತಿಫಲಿಸುತ್ತದೆ. ಈ ಚುನಾವಣೆಯಲ್ಲಿ ಮಹಾಘಟಬಂಧನ್ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಹಲವು ಜಿಲ್ಲೆಗಳಿಂದ ನಾವು ಸಹಿ ಸಂಗ್ರಹಿಸಿದ್ದೇವೆ. ಅಭಿಯಾನ ಯಶಸ್ವಿಯಾಗಿದೆ. 1,12,40,000 ಸಹಿಗಳನ್ನು ಸಂಗ್ರಹಿಸಿದ್ದೇವೆ.ನವೆಂಬರ್ 10 ರಂದು ಹೈಕಮಾಂಡ್'ಗೆ ಸಲ್ಲಿಸಲು ನಾವು ನಿರ್ಧರಿಸಿದ್ದೇವೆ. ನವೆಂಬರ್ 25 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿಯನ್ನು ಯೋಜಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ಪಾಲಿಕೆಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗದ ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಬಳಿಕ ಆಳಂದ್ ವಿಧಾನಸಭಾ ಕ್ಷೇತ್ರದ 6,000 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಗಳು ನಡೆದಿವೆ ಎಂದು ಪುನರುಚ್ಚರಿಸಿದರು.

ಇತರ ರಾಜ್ಯಗಳ ಮೊಬೈಲ್ ಫೋನ್ ಸಂಖ್ಯೆಗಳನ್ನು ಬಳಸಿಕೊಂಡು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಗಳು ನಡೆದಿವೆ. ಈ ಸಂಬಂಧ ಎಸ್‌ಐಟಿ ತನಿಖೆ ಪ್ರಗತಿಯಲ್ಲಿದೆ. ಮತದಾರರ ಪಟ್ಟಿಯಿಂದ ಅಳಿಸಲಾದ ಪ್ರತಿ ಹೆಸರಿಗೆ 80 ರೂ.ಗಳನ್ನು ನೀಡಲಾಗಿದೆ. ಈ ಕುರಿತ ಎಸ್‌ಐಟಿ ವರದಿ ಶೀಘ್ರದಲ್ಲೇ ಹೊರಬರಲಿದೆ ಎಂದು ಹೇಳಿದರು.

ಈ ಕುರಿತು ನ್ಯಾಯಾಲಯದ ಮೆಟ್ಟಿಲೇಕೆ ಏರಲಿಲ್ಲ? ಅಥವಾ ಇಸಿಐಗೆ ಅಫಿಡವಿಟ್ ಸಲ್ಲಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಾವು ಇಸಿಐನಿಂದ ಪೂರಕ ದಾಖಲೆಗಳನ್ನು ಕೋರುತ್ತಿದ್ದೇವೆ, ಆದರೆ ಅವರು ನಮಗೆ ಅವುಗಳನ್ನು ಒದಗಿಸುತ್ತಿಲ್ಲ. ಅವರು ದಾಖಲೆಗಳನ್ನು ನೀಡಲಿ, ನಂತರ ನಾವು ಅಫಿಡವಿಟ್ ಸಲ್ಲಿಸುತ್ತೇವೆ. ಮಹದೇವಪುರ ಕ್ಷೇತ್ರದಲ್ಲಿ ನಡೆದ ಮತ ವಂಚನೆಯನ್ನು ಮಾಧ್ಯಮಗಳು ತನಿಖೆ ಮಾಡಿದ್ದು, ಒಂದೇ ವಿಳಾಸದಲ್ಲಿ 84 ಕ್ಕೂ ಹೆಚ್ಚು ಮತದಾರರು ಪತ್ತೆಯಾಗಿದ್ದಾರೆ. ಇಸಿಐ ಅದರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ನಾವು ಮತ ​​ಚೋರಿಯನ್ನು ಬಹಿರಂಗಪಡಿಸಿದ ನಂತರ ಇಸಿಐ ವಿಶೇಷ ತೀವ್ರ ಪರಿಷ್ಕರಣೆಯನ್ನೇಕೆ ಕೈಗೆತ್ತಿಕೊಂಡಿತು? ಹೀಗಾಗಿಯೇ ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲು ನಾವು ನಿರ್ಧರಿಸಿದ್ದೇವೆ ಎಂದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನರೇಂದ್ರ ಮೋದಿ ಪ್ರಧಾನಿಯಾದ ನಂತರ, ನಂತರದವರು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ನಾಶಪಡಿಸಿದರು ಎಂದು ಕಿಡಿಕಾರಿದರು.

ಇಸಿಐ ಮತ್ತು ಸಿಬಿಐ ಅನ್ನು ತಮ್ಮ ಅಧೀನರನ್ನಾಗಿ ಮಾಡಿಕೊಂಡಿದ್ದು, ಕರ್ನಾಟಕದಲ್ಲಿ ನಡೆದಿರುವ 'ಮತ ಕಳ್ಳತನ'ದ ದಾಖಲೆಗಳು ವ್ಯವಸ್ಥಿತ ಪಿತೂರಿಯನ್ನು ಸಾಬೀತುಪಡಿಸುತ್ತಿವೆ. ಇದರಿಂದ ಹಲವು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತ ಕಳ್ಳತನದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಕಠಿಣ ಅಧ್ಯಯನ ಮತ್ತು ತನಿಖೆಯ ನಂತರ ದೇಶದ ಜನರಿಗೆ ದಾಖಲೆಗಳೊಂದಿಗೆ ಮತ ಕಳ್ಳತನದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಮತ ಕಳ್ಳತನವನ್ನು ದಾಖಲೆಗಳೊಂದಿಗೆ ರಾಹುಲ್ ಬಹಿರಂಗಪಡಿಸಿದ್ದಾರೆ. ದಾಖಲೆಗಳನ್ನು ದೇಶದ ಜನರ ಮುಂದೆ ಇಟ್ಟಿದ್ದಾರೆಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಯುದ್ಧ ಭುಗಿಲೆದ್ದರೆ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ': ಆಫ್ಘಾನಿಸ್ತಾನ, ಪಾಕಿಸ್ತಾನ ಜೊತೆ ಶಾಂತಿ ಮಾತುಕತೆ ಮತ್ತೆ ವಿಫಲ

ಕಬ್ಬು ಬೆಳೆಗಾರರ ಹೋರಾಟ ಬೇರೆ ರಾಜ್ಯಗಳಲ್ಲೇಕಿಲ್ಲ?: ರಾಜ್ಯಕ್ಕೆ ಕೇಂದ್ರ ಸರ್ಕಾರ ಪ್ರಶ್ನೆ

ಮೂಲಸೌಕರ್ಯ ಸಮಸ್ಯೆ ಸರಿಪಡಿಸಲಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ: ಡಿಕೆ.ಶಿವಕುಮಾರ್'ಗೆ ಆರ್.ಅಶೋಕ್

ಗದಗ-ಬೆಟಗೇರಿ: ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಉಸಿರಾಡಿ ಅಚ್ಚರಿ ಮೂಡಿಸಿದ ವ್ಯಕ್ತಿ !

ಭದ್ರಾ ಕಾಲುವೆಗೆ ಬಿದ್ದ ಕಾರು: ಇಬ್ಬರು ಜಲಸಮಾಧಿ, ನಾಲ್ವರು ಪಾರು

SCROLL FOR NEXT