ಬೆಂಗಳೂರು: ದಸರಾ ಹಬ್ಬದ ರಜೆಯನ್ನು ವಿಸ್ತರಿಸಿ, ಶಾಲಾ ಶಿಕ್ಷಕರನ್ನು ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕರ್ತವ್ಯಕ್ಕೆ ನಿಯೋಜಿಸಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಜಾತಿಗಣತಿಗೆ ಸರ್ಕಾರ ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿಲ್ಲ. ಸ್ಪಷ್ಟವಾದ ಉದ್ದೇಶ ಕೂಡ ಇಲ್ಲ. ಅದು ಕೂಡ ರಾಹುಲ್ ಗಾಂಧಿಯಂತೆಯೇ ಎಂದು ವ್ಯಂಗ್ಯವಾಡಿದ್ದಾರೆ.
ಸರ್ಕಾರವು ದಸರಾ ಜಾತಿ ಗಣತಿಗಾಗಿ ಶಾಲೆಗಳ ರಜೆಯನ್ನು ವಿಸ್ತರಿಸಿದೆ. ಇದರಿಂದಾಗಿ ಶಿಕ್ಷಕರು ಗೊಂದಲಮದಿಂದಿರುವ ಜಾತಿ ಗಣತಿಯನ್ನು ನಿಭಾಯಿಸುವಂತಾಗಿದೆ. ಆದರೆ, ಜನರ ಬಳಿ ಏನು ಕೇಳಬೇಕೆಂಬುದೇ ಗಣತಿದಾರರಿಗೆ ತಿಳಿಯುತ್ತಿಲ್ಲ. ಶಿಕ್ಷಕರನ್ನು ತರಗತಿಗಳಿಂದ ಹೊರಗೆಳೆದು ವಿದ್ಯಾರ್ಥಿಗಳ ಬಾಳಿನಲ್ಲಿ ಕತ್ತಲೆ ಆವರಿಸುವಂತೆ ಮಾಡಲಾಗುತ್ತಿದೆ. ಕಾಂಗ್ರೆಸ್ಸಿನ ವಿಭಜನೆಯ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇವುಗಳನ್ನೆಲ್ಲ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಇದು ಸಮೀಕ್ಷೆ ಅಲ್ಲ, ಇದು ದೋಷಗಳಿಂದ ಕೂಡಿದ ಸರ್ಕಸ್. ಅಧಿಕಾರಕ್ಕೆ ಅಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಗೆ ಕರ್ನಾಟಕದ ಮಕ್ಕಳು ಬೆಲೆ ತೆರುವಂತಾಗಿದೆ ಎಂದು ಕಿಡಿಕಾರಿದ್ದಾರೆ.