ಬೆಂಗಳೂರು: ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಯಾವಾಗ ತೆರೆಯಬೇಕೆಂದು ತಿಳಿಯದ ವ್ಯಕ್ತಿ,ಈಗ ಬೆಂಗಳೂರಿನ "ದಟ್ಟಣೆಯನ್ನು ಕಡಿಮೆ ಮಾಡುವುದು" ಹೇಗೆ ಎಂಬುದರ ಕುರಿತು ಉಪನ್ಯಾಸ ನೀಡುತ್ತಿರುವುದು ವಿಪರ್ಯಾಸವೇ ಸರಿ ಎಂದು ಸಂಸದ ತೇಜಸ್ವಿ ಸೂರ್ಯ ಕುರಿತು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು, ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಯಾವಾಗ ತೆರೆಯಬೇಕೆಂದು ಸಾಮಾನ್ಯ ಜ್ಞಾನ ಇಲ್ಲದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ಈಗ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹೇಗೆ ಎಂಬುದರ ಕುರಿತು ಉಪನ್ಯಾಸ ನೀಡುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಈ ಬುದ್ಧಿವಂತಿಕೆ ಎಲ್ಲಿತ್ತು? ತಮ್ಮ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಅವರಿಗೆ ಇದ್ದಕ್ಕಿದ್ದಂತೆ ಬೆಂಗಳೂರಿನ ಸಂಚಾರ ಅವ್ಯವಸ್ಥೆಯ ಅರಿವಾಯಿತೇ? ದಟ್ಟಣೆ ಕಡಿಮೆ ಮಾಡುವುದು ಪ್ರಮುಖ ಆದ್ಯತೆಯಾಗಿದ್ದರೆ, ಅವರ ಪಕ್ಷವು ಜನಾದೇಶ ಹೊಂದಿದ್ದಾಗ ಅವರು ಪವರ್ಪಾಯಿಂಟ್ ಮೂಲಕ ಸಲಹೆ ನೀಡಲಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಭಾರತದ ಐಟಿ ಹಬ್ ಆಯಿತು. ತೇಜಸ್ವಿ ಅವರಂತಹ ಸ್ವಯಂಘೋಷಿತ ನಗರ ಯೋಜನೆ ತಜ್ಞರ‘ ಶಬ್ದ ಮಾಲಿನ್ಯದ ಹೊರತಾಗಿಯೂ ನಗರ ಮತ್ತಷ್ಟು ಪ್ರಗತಿ ಸಾಧಿಸುತ್ತಿದೆ. ಇಂತಹ ಚಿಲ್ಲರೆ ರಾಜಕಾರಣ ಮಾಡಿ ಪುಕ್ಕಟೆ ಸಲಹೆ ನೀಡುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲಿ ಎಂದು ಸವಾಲು ಹಾಕಿದ್ದಾರೆ.