ದಾವಣಗೆರೆ: ಬಿಜೆಪಿ ನಾಯಕ ಸದಾನಂದ ಗೌಡ ಅವರು ಬಿಜೆಪಿ ಪರ ಪ್ರಚಾರಕ್ಕೆ ಬಂದಿದ್ದಾರೋ, ಇಲ್ಲ ನಮ್ಮ ನಾಯಕರ ಸೂಟ್'ಕೇಸ್ ಅಳತೆ ನೋಡಲು ಬಂದಿದ್ದಾರೋ? ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಗುರುವಾರ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸಚಿವರು ಸೂಟ್ಕೇಸ್ನಲ್ಲಿ ಅಲ್ಲ ಗೋಣಿ ಚೀಲದಲ್ಲೇ ಹಣ ತರ್ತಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ, ಆದರೆ ಸದಾನಂದ ಗೌಡ ಇನ್ನೂ ಏಕೆ ದೂರು ನೀಡಿಲ್ಲ? ಎಂದು ಪ್ರಶ್ನಿಸಿದರು.
ಸದಾನಂದ ಗೌಡ ಅವರು ಇಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಬಂದರೋ, ಅಥವಾ ನಮ್ಮ ನಾಯಕರ ಸೂಟ್ಕೇಸ್ ಎಷ್ಟು ದೊಡ್ಡದು, ಎಷ್ಟು ದಪ್ಪವಾಗಿದೆ ಎಂದು ವಿಶ್ಲೇಷಿಸಲು ಬಂದರೋ ಎಂಬುದು ನನಗೆ ಆಶ್ಚರ್ಯ ತರಿಸುತ್ತಿದೆ ಎಂದು ಹೇಳಿದರು.
ಸದಾನಂದ ಗೌಡ ಅವರು ಈ ಬಾರಿ ಅಲ್ಪಸಂಖ್ಯಾತರ ಮತಗಳಲ್ಲಿ 45 ಶೇಕಡಕ್ಕಿಂತ ಹೆಚ್ಚು ಬಿಜೆಪಿ ಪಡೆಯಲಿದೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ಈ ಮಾತು ಕೇಳಿ ತುಂಬ ಸಂತೋಷವಾಗಿದೆ. ಎಲ್ಲರನ್ನೂ ಕರೆಸಿ, 2.30 ಲಕ್ಷ ಮತದಾರರನ್ನು ಬಿಜೆಪಿ ಪರವಾಗಿ ಮತ ಹಾಕುವಂತೆ ಕೇಳಲಿ” ಎಂದು ವ್ಯಂಗ್ಯವಾಗಿ ಹೇಳಿದರು.
ಸಮರ್ಥ್ ಅವರ ಕಚೇರಿಯಿಂದ ಕರೆ ಬಂದಿದ್ದು, ಬಿಜೆಪಿ ಗೆದ್ದರೆ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂಬ ಆಡಿಯೋ ಬಗ್ಗೆ ಕೇಳಿದಾಗ,“ಚುನಾವಣೆ ಸಮಯದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಸಾಮಾನ್ಯ. ಜನರನ್ನು ಗೊಂದಲಕ್ಕೀಡಾಗಿಸಲು ಇಂತಹ ಪ್ರಯತ್ನಗಳು ನಡೆಯುತ್ತವೆ ಎಂದು ಹೇಳಿದರು.