ಬಾಗಲಕೋಟೆ: ಸರ್ಕಾರವು ಕೈಗೊಂಡಿರುವ ಸಾಲಗಳು ಸಂಪೂರ್ಣವಾಗಿ ಬಜೆಟ್ ಮಿತಿಗಳೊಳಗೇ ಇದ್ದು, ಯಾವುದೇ ನಿಯಮ ಉಲ್ಲಂಘನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಸಾಲ ಮಿತಿ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಬಿಜೆಪಿಯ ಆರೋಪಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 2002ರ ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (FRBM Act) ಪ್ರಕಾರ ರಾಜ್ಯ ಸರ್ಕಾರವು ಒಟ್ಟು ಜಿಡಿಪಿಯ 3% ವರೆಗೆ ಮಾತ್ರ ಸಾಲ ಪಡೆಯಲು ಅವಕಾಶವಿದೆ. “ನಮ್ಮ ಬಜೆಟ್ ಈ ಮಿತಿಯೊಳಗೇ ಇದೆ. ಕಾಂಗ್ರೆಸ್ ಸರ್ಕಾರ ಯಾವತ್ತೂ ನಿಯಮ ಉಲ್ಲಂಘಿಸಿಲ್ಲ. ಆದರೆ, ಬಿಜೆಪಿ ನಾಯಕರು ಬಜೆಟ್ ಓದಿಲ್ಲ ಅಥವಾ ಅವರಿಗೆ ನಿಯಮಗಳ ಅರಿವು ಅವರಿಗಿಲ್ಲ, ಹೀಗಾಗಿಯೇ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಸಾಲ ಮಿತಿಯನ್ನು ರಾಜ್ಯ ಸರ್ಕಾರವೇ ನಿಗದಿ ಮಾಡುವುದಿಲ್ಲ, ಅದು ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ನಿಗದಿಯಾಗುತ್ತದೆ ಎಂದು ಹೇಳಿದರು.
ಇದೇ ವೇಳೆ, ರಾಜ್ಯದ ಆರ್ಥಿಕ ಬೆಳವಣಿಗೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕದ ಜಿಡಿಪಿ ಬೆಳವಣಿಗೆ ದೇಶದ ಮಟ್ಟಕ್ಕಿಂತ ಉತ್ತಮವಾಗಿದೆ. “ಭಾರತದ ಜಿಡಿಪಿ 7.14% ಇದ್ದರೆ, ಕರ್ನಾಟಕದದು 8.1% ಇದೆ. ಈಗ ಯಾರದು ಹೆಚ್ಚು ಎಂದು ಬಿಜೆಪಿ ತೀರ್ಮಾನಿಸಲಿ ಎಂದು ಸವಾಲು ಹಾಕಿದರು.
ಹಾಗೆಯೇ, ದೇಶದ ಸಾಲದ ವಿಚಾರವನ್ನೂ ಉಲ್ಲೇಖಿಸಿದ ಅವರು, 2014ರೊಳಗೆ ದೇಶದ ಒಟ್ಟು ಸಾಲ ಸುಮಾರು ₹54 ಲಕ್ಷ ಕೋಟಿ ಇತ್ತು. ಆದರೆ, 2014 ನಂತರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅದು ರೂ.165 ಲಕ್ಷ ಕೋಟಿವರೆಗೆ ಏರಿಕೆಯಾಗಿದೆ ಎಂದು ಆರೋಪಿಸಿದರು.
ಅನ್ನಭಾಗ್ಯ ಯೋಜನೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಗಳನ್ನೂ ಇದೇ ವೇಳೆ ಮುಖ್ಯಮಂತ್ರಿಗಳು ತಳ್ಳಿಹಾಕಿದರು.
ಉಚಿತ ಅಕ್ಕಿ ಯೋಜನೆಯನ್ನು ಮೋದಿ ಸರ್ಕಾರ ಆರಂಭಿಸಿಲ್ಲ. ಇದು ಹಿಂದಿನ ಯುಪಿಎ ಸರ್ಕಾರದ ಕಾಲದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯ್ದೆಯ ಫಲ” ಎಂದು ಹೇಳಿದರು.
ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಬಡವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ 7 ಕೆಜಿ ಅಕ್ಕಿಯನ್ನು ರೂ.1ಕ್ಕೆ ನೀಡುವ ಯೋಜನೆ ಜಾರಿಗೆ ತಂದೆವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದನ್ನು 5 ಕೆಜಿಗೆ ಇಳಿಸಿತು ಎಂದು ಆರೋಪಿಸಿದರು. “ಅಕ್ಕಿ ಪ್ರಮಾಣವನ್ನು ಯಾಕೆ ಕಡಿಮೆ ಮಾಡಿದರು ಎಂದು ಜನರಿಗೆ ಬಿಜೆಪಿ ಹೇಳಬೇಕು” ಎಂದರು.
ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದೇವೆ. “ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುವ ಬದಲು ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಬೇಕು. ಅವರು ಎಷ್ಟು ಚುನಾವಣಾ ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.