ಬೆಂಗಳೂರು: ಜೆಡಿಎಸ್ ಗೆ ಒಂದು ಸಲ ಅಧಿಕಾರ ಕೊಟ್ಟು ನೋಡಿ, ರಾಜ್ಯಕ್ಕೆ ಹಿಡಿದಿರೋ ಗ್ರಹಣವನ್ನು ಬಿಡಿಸುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ಜೆಡಿಎಸ್ ಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕೊಮ್ಮಘಟ್ಟದ ಬಳಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ 1 ಲಕ್ಷ ಹೆಚ್ಚು ಜನ ಭಾಗಿಯಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಪಕ್ಷ ಹಾಲಿ, ಮಾಜಿ, ಶಾಸಕರು, ಸಂಸದರು ಭಾಗಿಯಾಗಿದ್ದರು.
ಬೆಳ್ಳಿ ಹಬ್ಬದ ಸಮಾವೇಶ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಕರ್ನಾಟಕಕ್ಕೆ ಹಿಡಿದಿರೋ ಗ್ರಹಣ ಮುಕ್ತಿಗಾಗಿ ಜೆಡಿಎಸ್ ಗೆ ಒಂದು ಬಾರಿ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಬೆಂಗಳೂರಿಗೆ ಮೆಟ್ರೋ ಯೋಜನೆ ಸೇರಿ ಅನೇಕ ಯೋಜನೆ ಕೊಟ್ಟವನು ನಾನು, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚದರ ಅಡಿಗೆ 100 ರೂ. ಫಿಕ್ಸ್ ಮಾಡಿದೆ ಎಂದು ಮಾಜಿ ಸಿಎಂ ಆರೋಪಿಸಿದರು.
ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರೂ ಜನರ ಆಶೀರ್ವಾದದಿಂದ ಸಿಎಂ ಆಗಿಲ್ಲ ಎಂದ ಕುಮಾರಸ್ವಾಮಿ ಒಂದು ಬಾರಿ ಜೆಡಿಎಸ್ ಅಧಿಕಾರ ಕೊಡಿ ಎಂದು ಮನವಿ ಮಾಡಿದರು.
ಕೋಗಿಲು ಬಡಾವಣೆಯಲ್ಲಿ ಮನೆಗಳ ನೆಲಸಮ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಅಕ್ರಮ ಮಾಡಿದ ದೊಡ್ಡ ದೊಡ್ಡ ಕಟ್ಟಡಗಳನ್ನು ಒಡೆಯುವ ಧೈರ್ಯ ಇವರಿಗೆ ಇಲ್ಲ. ಆದರೆ ಬಡವರು ಕಟ್ಟಿಕೊಂಡ ಮನೆಗಳನ್ನು ಮಳೆ-ಚಳಿಯ ನಡುವೆ ಒಡೆದು ಹಾಕಿದ್ದಾರೆ. ಈ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಎಂದು ಕಿಡಿ ಕಾರಿದರು.