ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿ ಜೆಡಿಎಸ್ ಗೃಹ ಸಚಿವ ಪರಮೇಶ್ವರ್ ವಿರುದ್ದ ಕೆಂಡಕಾರಿದೆ.
ಪುಡಿ ರೌಡಿಗಳ ಹಾವಳಿ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಜೆಡಿಎಸ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದಕ್ಕೆ ಹೆಚ್ಚುತ್ತಿರುವ ಇಂತಹ ಘಟನೆಗಳೇ ಸಾಕ್ಷಿ ಎಂದು ಹೇಳಿದೆ.
ಅಲ್ಲದೆ ಪುಡಿ ರೌಡಿಗಳ ಗುಂಪೊಂದು ಮನೆ ಮುಂದೆ ಮಾರಕಾಸ್ತ್ರ ಹಿಡಿದು ದಾಂಧಲೆ ನಡೆಸುತ್ತಿರುವ ವಿಡಿಯೋವೊಂದನ್ನು ಕೂಡ ಪೋಸ್ಟ್ ಮಾಡಿದೆ.
ಪೋಸ್ಟ್ ನಲ್ಲಿ, 'ಮಿಸ್ಟರ್ “ಗೊತ್ತಿಲ್ಲ” ಗೃಹ ಸಚಿವ ಡಾ.ಪರಮೇಶ್ವರ ಅವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎನ್ನುವುದಕ್ಕೆ ಹೆಚ್ಚುತ್ತಿರುವ ಇಂತಹ ಘಟನೆಗಳೇ ಸಾಕ್ಷಿ.
ಕಾನೂನು, ಪೊಲೀಸರ ಭಯವಿಲ್ಲದೆ, ಬೀದಿ ಬೀದಿಯಲ್ಲಿ ರೌಡಿಗಳು, ಪುಂಡರು ಲಾಂಗು, ಮಚ್ಚು ಹಿಡಿದು ರಾಜಾರೋಷವಾಗಿ ಓಡಾಡುವ ಮಟ್ಟಕ್ಕೆ ಪೊಲೀಸ್ ಇಲಾಖೆಯನ್ನು ನಿಷ್ಕ್ರಿಯ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ನಾಚಿಕೆಯಾಗಬೇಕು! ಎಂದು ಹೇಳಿದೆ.
ಅಲ್ಲದೆ ಕಾಂಗ್ರೆಸ್ ದುರಾಡಳಿತದಲ್ಲಿ ಗೃಹ ಇಲಾಖೆಯ ವೈಫಲ್ಯ ಹಾಗೂ ನಿಮ್ಮ ಅಸಮರ್ಥತೆಯಿಂದ ರಾಜ್ಯದ ಜನರಿಗೆ ಸುರಕ್ಷತೆಯ ಭಯ ಇನ್ನಿಲ್ಲದೆ ಕಾಡುತ್ತಿರುವುದಂತು ಸತ್ಯ ಎಂದು ಕಿಡಿಕಾರಿದೆ.