ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ ಮಾಟ ಮಂತ್ರ ಮಾಡಿಸುವ ಶಕ್ತಿ ಇದ್ದರೆ ಅದು ರಾಜಣ್ಣ ಒಬ್ಬರಿಗೇ, ಸಿಎಂ ಆಪ್ತರೇ ಅವರಿಗೆ ಮಾಟ ಮಂತ್ರಿ ಮಾಡಿಸಿರಬೇಕು, ಬೇರೆ ಯಾರಿಗೂ ಆ ಶಕ್ತಿ ಇಲ್ಲ ಎಂದು ಮಾಗಡಿ ಕ್ಷೇತ್ರದ ಶಾಸಕ ಹೆಚ್ ಸಿ ಬಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿ ಕಾಣುತ್ತಿದ್ದಾರೆ. ಅಗಾಧ ಶಕ್ತಿ ಇರುವ ಅವರನ್ನು ಇಂತಹ ಸ್ಥಿತಿಯಲ್ಲಿ ನಾನು ಎಂದಿಗೂ ನೋಡಿರಲಿಲ್ಲ. ಇದೆಲ್ಲವನ್ನು ನೋಡುತ್ತಿದ್ದರೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರಾ ಅನುಮಾನ ಕಾಡುತ್ತಿದೆ ಎಂದು ರಾಜಣ್ಣ ನಿನ್ನೆ ಮಾಧ್ಯಮಗಳ ಮುಂದೆ ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ಬಾಲಕೃಷ್ಣ, ಸಿಎಂ ಸಿದ್ದರಾಮಯ್ಯನವರ ಮೇಲೆ ಮಾಟ ಮಂತ್ರ ಮಾಡಬೇಕೆಂದರೆ ಅವರ ಬಗ್ಗೆ ತಿಳಿದಿರಬೇಕು, ಬೇರೆಯವರು ಮಾಡಿದರೆ ಅವರು ಬಿಡುತ್ತಾರಾ, ರಾಜಣ್ಣ ಅವರೇ ಮಾಡಿರಬೇಕು, ಅವರೆಲ್ಲ ಮಾಡಿದರೆ ಕ್ಷಮೆ ಇರುತ್ತದೆ ಎಂದರು.
ರಾಜಣ್ಣನವರ ಮಾತುಗಳನ್ನು ಅಷ್ಟೊಂದು ಗಂಭೀರವಾಗಿ ನೀವು ಪರಿಗಣಿಸಿದ್ದರೆ ಅದಕ್ಕೆ ಉತ್ತರ ಕೊಡಲು ಸಾಧ್ಯವಿಲ್ಲ, ಮಾಟ-ಮಂತ್ರ ಎಂದು ರಾಜಣ್ಣ ಅವರು ಸಾಮಾನ್ಯವಾಗಿ ಹೇಳಿದ್ದಾರೆ ಎನಿಸುತ್ತದೆ, ಮಾಟ-ಮಂತ್ರ ಮಾಡಿ ಅಧಿಕಾರ ಕಸಿದುಕೊಳ್ಳುವ ಕಾಲ ಹೋಗಿದೆ ಎಂದರು.