ಬೆಂಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಗಳ ಫಲಿತಾಂಶ ಮೇ 4 ರಂದು ಪ್ರಕಟವಾಗಲಿದೆ. ಆದರೆ ಈ ಫಲಿತಾಂಶ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭವಿಷ್ಯವನ್ನು ನಿರ್ಧರಿಸಲಿದೆ ಎನ್ನಲಾಗುತ್ತಿದೆ.
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ನಡೆದ ಉಪಚುನಾವಣೆ ಕೇವಲ ಸ್ಥಳೀಯ ಸ್ಪರ್ಧೆಗಳಾಗಿರಲಿಲ್ಲ. ಕರ್ನಾಟಕ ಕಾಂಗ್ರೆಸ್ ನಿಜವಾಗಿಯೂ ಎಷ್ಟು ಒಗ್ಗಟ್ಟಿನಿಂದ ಇದೆ ಎಂಬುದರ ಪರೀಕ್ಷೆಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಮುನ್ನಡೆಸುತ್ತಿದ್ದರೂ, ಸದ್ಯ ನಡೆಯುತ್ತಿರುವ ಆಂತರಿಕ ಕಿತ್ತಾಟಗಳ ನಡುವೆ ಪಕ್ಷಕ್ಕೆ ಹೆಚ್ಚಿನ ಹಾನಿಯಾಗದಂತೆ ಸಮರ್ಥ ರೀತಿಯಲ್ಲಿ ಡಿಕೆ ಶಿವಕುಮಾರ್ ನಿಭಾಯಿಸುತ್ತಿದ್ದಾರೆ.
ಒತ್ತಡದಲ್ಲಿ ಟ್ರಬಲ್ಶೂಟರ್: ದಾವಣಗೆರೆ ದಕ್ಷಿಣ ಪ್ರಚಾರದ ವೇಳೆ ಪಕ್ಷದೊಳಗೆ ಬಿರುಕು ಸ್ಪಷ್ಟವಾಗಿ ಕಾಣಿಸಿತು. ಸ್ಥಳೀಯ ನಾಯಕರು ಟಿಕೆಟ್ ಹಂಚಿಕೆಯ ಬಗ್ಗೆ ಕಿಡಿಕಾರಿದರು. ಕೆಲವು ಅಲ್ಪಸಂಖ್ಯಾತ ನಾಯಕರು ಅತೃಪ್ತಿ ವ್ಯಕ್ತಪಡಿಸಿದರು. ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅವರಂತಹ ನಾಯಕರ ವಿರುದ್ಧ ಶಿಸ್ತು ಕ್ರಮ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿತು. ಇಂತಹ ಸಮಯದಲ್ಲಿ ಮಧ್ಯಪ್ರವೇಶಿಸಿದ ಶಿವಕುಮಾರ್ ಯಾರನ್ನೂ ಗುರಿಯಾಗಿಸಿಕೊಂಡಿಲ್ಲ ಮತ್ತು ಆಂತರಿಕ ವರದಿಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.
ಸ್ಪಷ್ಟತೆಗಾಗಿ ಕಾಯುವಿಕೆ: ಪ್ರಮುಖ ಪಾತ್ರ ವಹಿಸುತ್ತಿದ್ದರೂ ಶಿವಕುಮಾರ್ ಅವರ ಸ್ವಂತ ರಾಜಕೀಯ ಭವಿಷ್ಯವು ಅನಿಶ್ಚಿತವಾಗಿದೆ. 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ನಂತರ ನಾಯಕತ್ವ ಬದಲಾವಣೆ ಬಗ್ಗೆ ನಿರಂತರ ಊಹಾಪೋಹಗಳು ಕೇಳಿಬರುತ್ತಿವೆ. ಆದಾಗ್ಯೂ ಪಕ್ಷ ಇದನ್ನು ಎಂದಿಗೂ ಅಧಿಕೃತವಾಗಿ ದೃಢಪಡಿಸಿಲ್ಲ.
ಕೆಲವು ಶಾಸಕರು ರಾಜ್ಯ ಸಚಿವ ಸಂಪುಟ ಬದಲಾವಣೆಯ ಕುರಿತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ರಾಷ್ಟ್ರ ರಾಜಧಾನಿಗೆ ಭೇಟಿ ನೀಡಿದ್ದರೂ, ಹೈಕಮಾಂಡ್ನಿಂದ ಯಾವುದೇ ಸಮಯ ಅಥವಾ ಸ್ಪಷ್ಟ ಸೂಚನೆ ಇಲ್ಲ. ಸಚಿವ ಸಂಪುಟ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಕಡ್ಡಾಯವಾಗಿ ಬದಲಾವಣೆ ಮಾಡಬೇಕಾಗಿದೆ ಎಂದು ಶಾಸಕರ ಒಂದು ಗುಂಪು ಒತ್ತಾಯಿಸಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಡಿಕೆ ಶಿವಕುಮಾರ್ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯಲ್ಲಿ ನಿರ್ಧಾರ ತೆಗೆದುಕೊಂಡಿಲ್ಲ. ಶಿಸ್ತುಬದ್ಧರಾಗಿದ್ದು, ಪಕ್ಷದ ಮೇಲೆ ಗಮನಹರಿಸಿದ್ದಾರೆ. ಆದರೆ ನಾಯಕತ್ವ ಬದಲಾವಣೆಗಾಗಿ ಕಾಯುವಿಕೆ ಎಷ್ಟು ಕಾಲ ಮುಂದುವರಿಯುತ್ತದೆ ಎಂದು ಅವರ ಬೆಂಬಲಿಗರು ಕೇಳುತ್ತಿದ್ದಾರೆ.ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ಸಮರ್ಥಿಸಿಕೊಳ್ಳುತ್ತಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳುತ್ತಾ ಬಂದಿದ್ದಾರೆ.
ಉಪಚುನಾವಣೆ ಫಲಿತಾಂಶ ಯಾಕೆ ಮುಖ್ಯ: ಕರ್ನಾಟಕ ಕಾಂಗ್ರೆಸ್ ಬಹು ಒತ್ತಡಗಳು, ಆಡಳಿತ ಸವಾಲುಗಳು, ಆಂತರಿಕ ಕಿತ್ತಾಟ ಮತ್ತು ನಾಯಕತ್ವದ ಪ್ರಶ್ನೆಗಳನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯಲ್ಲಿ, ಶಿವಕುಮಾರ್ ನಾಯಕತ್ವ ಮತ್ತು ಕಾರ್ಯಕರ್ತರ ನಡುವಿನ ಪ್ರಮುಖ ಕೊಂಡಿಯಾಗಿದ್ದಾರೆ. ಆದರೆ ಮುಖ್ಯಮಂತ್ರಿ ಹುದ್ದೆ ನೀಡದೆ ಇದ್ದಲ್ಲಿ ಭವಿಷ್ಯದಲ್ಲಿ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಗೆ ಉತ್ತಮ ಫಲಿತಾಂಶ ಬಂದರೆ ಡಿಕೆ ಶಿವಕುಮಾರ್
ಸಿಎಂ ಹುದ್ದೆಗೆ ನಿರ್ಣಾಯಕ ನಾಯಕ ಎಂಬುದನ್ನು ಬಲಪಡಿಸುತ್ತದೆ. ಪಕ್ಷ ಕಳಪೆ ಸಾಧನೆ ಮಾಡಿದರೆ ಅಥವಾ ಆಂತರಿಕ ಸಮಸ್ಯೆಗಳು ಮುಂದುವರಿದರೆ ನಾಯಕತ್ವದ ಕುರಿತು ಬೇಡಿಕೆಗಳು ಬಲಗೊಳ್ಳಬಹುದು.