ಮೈಸೂರು: ಯಾರೂ ಕೂಡ ಹಿಂದೂ ದೇಶ ಮಾಡಲು ಹೊರಟಿಲ್ಲ, ನಮ್ಮದು ಹಿಂದೂ ರಾಷ್ಟ್ರ, ಇಲ್ಲಿನ ನೆಲ ಜಲ ಸಂಸ್ಕೃತಿಗಳಿಗೆ ಆದ್ಯತೆ ನೀಡುವುದು ಪ್ರಮುಖವಾಗಿದೆ. ಹಿಂದೂ ರಾಷ್ಟ್ರ ಮಾಡಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ನಿಮ್ಮ ಅಪ್ಪನ ರೀತಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ನಾಯಕ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮುಸಲ್ಮಾನರು ಬಂದು ಯಾರು ಕೂಡ ಟಿಪ್ಪು ಜಯಂತಿ ಮಾಡಿ ಎಂದು ಹೇಳಿರಲಿಲ್ಲ, ಅವರನ್ನು ಓಲೈಸುವ ಸಲುವಾಗಿ ನೀವೇ ಆಚರಣೆಗೆ ತಂದಿರಿ. ಹಿಂದೂಗಳು ಕೇಸರಿ ಪೇಟ ಹಾಕಿದರೆ ಕಿತ್ತು ಎಸೆಯುತೀರಿ ಎಂದು ಸಿದ್ದರಾಮಯಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮುಸ್ಲಿಮರ ವೋಟ್ ಮಾತ್ರ ಬೇಕು, ಅವರಿಗೆ ರಾಜಕೀಯ ಪ್ರಾತಿನಿಧ್ಯ ಕೊಡುವುದು ಬೇಕಿಲ್ಲ, ಅದಕ್ಕೆಂದೆ ಅವರನ್ನು ಮೊಹಲ್ಲಾಗಳಲ್ಲಿ ಸ್ಲಂ ಗಳಲ್ಲಿ ಇಟ್ಟಿದ್ದೀರಿ, ನಿಮ್ಮ ನಾಟಕ ನಿಮ್ಮ 8 ವರ್ಷಗಳ ಆಡಳಿತಾವಧಿಯಲ್ಲಿ ಸಾಬೀತಾಗಿದೆ ಎಂದಿದ್ದಾರೆ. ನಿಮ್ಮ ಮಗ ಕೂಡ ಅಷ್ಟೇ, ಮುಸ್ಲಿಮರನ್ನು ಓಲೈಸುವ ಸಲುವಾಗಿ ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಗುರೂ, ಯತೀಂದ್ರ ನಿಮಗೆ ಮಂತ್ರಿ ಸ್ಥಾನ ಸಿಕ್ಕಿರುವುದು ಜಾತಿ ವ್ಯವಸ್ಥೆಯ ಕುರುಬ ಕೋಟಾದಲ್ಲಿ, ಮೆರಿಟ್ ನಿಂದ ನಿಮಗೆ ಯಾರೂ ಸಚಿವ ಸ್ಥಾನ ನೀಡಿಲ್ಲ, ಕುರುಬ ಕೋಟಾ ನಿಮ್ಮಪ್ಪನ ಕೋಟಾದಿಂದ ಸಿಕ್ಕಿದೆ. ನೀವು ಕರುಬ ಆಗಿಲ್ಲದಿದ್ದರೇ, ಸಿದ್ದರಾಮಯ್ಯ ಅವರ ಮಗ ಆಗದಿದ್ದರೇ ನಿಮಗೆ ಮಂತ್ರಿ ಸ್ಥಾನ ಕೊಡುತ್ತಿರಲಿಲ್ಲ. ಅಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡಿ ಕಾಂಟ್ರವರ್ಸಿ ಕ್ರಿಯೇಟ್ ಮಾಡಬೇಡಿ, ನಿಮ್ಮ ಮಾತಿಗೆ ಮುಸ್ಲಿಮರು ಮರುಳಾಗುವುದಿಲ್ಲ ಎಂದಿದ್ದಾರೆ.
ನೀವು ಸಮಾಜವಾದಿ ಹಿನ್ನೆಲೆಯಿಂದ ಬಂದ ನೀವು ಅದೆಷ್ಟು ಬೇಗ ಕಾಂಗ್ರೆಸ್ ರಕ್ತವನ್ನು ಮೈಯೊಳಗೆ ಇಳಿಸಿಕೊಂಡಿದ್ದೀರಿ. ಪಾಪ ನಿಮ್ಮದೆ ಸಮಾಜದ ಗಾಯತ್ರಿ ಶಾಂತೇಗೌಡ ಏನು ಅನ್ಯಾಯ ಮಾಡಿದ್ದರು, ಅವರಿಗೇಕೆ ಸಚಿವ ಸ್ಥಾನ ತಪ್ಪಿಸಿದ್ದೀರಿ.
ಇಡೀ ಸಂಪುಟದಲ್ಲಿ ಒಬ್ಬರೇ ಒಬ್ಬ ಮಹಿಳೆ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಗೂ ಕೂಡ ನೀವೇ ಕಲ್ಲು ಹಾಕಿದ್ದೀರಿ. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದು ಗಾಯತ್ರಿ ಶಾಂತೇಗೌಡ, ಅವರನ್ನೇ ನೀವು ವಿರೋದಿಸಿದ್ದೀರಿ. ರಾಜಕೀಯವನ್ನು ಹೊಲಸು ಮಾಡಿದ್ದೇ ನೀವು ಎಂದು ಹರಿಹಾಯ್ದಿದ್ದಾರೆ.
ತನ್ವೀರ್ ಸೇಠ್, ವೆಂಕಟೇಶ್ ಮತ್ತು ಮಹಾದೇವಪ್ಪ ಅವರನ್ನೆಲ್ಲಾ ಮುಗಿಸಿ, ಮಗನನ್ನು ಸೇಫ್ ಮಾಡುತ್ತಿದ್ದೀರಿ. ಮೈಸೂರು ಭಾಗದಲ್ಲಿ ಕುಟುಂಬ ರಾಜಕೀಯ ಮಾಡುತ್ತಿದ್ದೀರಿ ಎಂದಿದ್ದಾರೆ. ಹೊಲಸಾಗಿರುವ ರಾಜಕೀಯವನ್ನು ತಿಳಿಗೊಳಿಸುವ ಅವಕಾಶವಿತ್ತು. ಆದರೆ ಅದನ್ನು ಮಾಡದೇ ಮತ್ತಷ್ಟು ಹಾಳು ಮಾಡಿದ್ದೀರಿ ಎಂದು ಹೇಳಿದ್ದಾರೆ.