ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೂ ನನಗೂ ಯಾವುದೇ ಮುನಿಸಿಲ್ಲ. ನನಗೆ ಸಚಿವ ಸ್ಥಾನ ನೀಡದಂತೆ ಹೈಕಮಾಂಡ್ಗೆ ಅವರು ಎಂದೂ ಹೇಳಿಲ್ಲ ಎಂದು ಸಚಿವ ಜಮೀರ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.
ವಿಜಯನಗರ ಜಿಲ್ಲೆಯಲ್ಲಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಸಂಪುಟ ಸಭೆ ಮುಗಿದ ಕೂಡಲೇ ಸಿದ್ದರಾಮಯ್ಯನವರಿಗೆ ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿದ್ದೇನೆ.
ಮೈಸೂರಲ್ಲಿ ಯತೀಂದ್ರ ಸಿದ್ದರಾಮಯ್ಯನವರು ಮುಸ್ಲಿಂ ಸಮಾಜದವರಿಗೆ ಕೊಡಿ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದು ಹೇಳಿದ್ದಾರೆ ಆದ್ರೆ ಸಿದ್ದರಾಮಯ್ಯನವರು ನನಗೆ ಸಚಿವ ಸ್ಥಾನ ನೀಡಬೇಡಿ ಎಂದು ಎಲ್ಲೂ ಹೇಳಿಲ್ಲ ಎಂದರು.
ನಮ್ಮದು ಹೈಕಮಾಂಡ್ ಪಕ್ಷ, ನನಗೆ ಸಚಿವ ಸ್ಥಾನ ನೀಡದೆ ಬರುವ ಚುನಾವಣೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿ ಎಂದರೂ ಅದಕ್ಕೆ ಸಿದ್ಧನಿದ್ದೆ ಎಂದ ಅವರು ಸಚಿವ ಸ್ಥಾನ ಪಡೆಯಲು ಹಣ ಕೊಡಲು ನಮ್ಮದು ಬಿಜೆಪಿಯಲ್ಲ, ಯತ್ನಾಳ ಅವರೇ ಬಿಜೆಪಿ ಬಂಡವಾಳ ಬಿಚ್ಚಿ ಇಟ್ಟಿದ್ದಾರೆ.
ನಮ್ಮ ಪಕ್ಷದಲ್ಲಿ ಪೌರ ಕಾರ್ಮಿಕನ ಪುತ್ರನಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದರು. ಇದೇ ನವೆಂಬರ್ನಲ್ಲಿ ಹಂಪಿ ಉತ್ಸವ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸೋಮವಾರ ಖಾತೆ ಹಂಚಿಕೆಯಾಗಬಹುದು. ಈ ಹಿಂದೆ ಯಾರೂ ಕೂಡ ಒಂದು ಮನೆ ಕೊಟ್ಟಿರಲಿಲ್ಲ. ನಾನು ವಸತಿ ಖಾತೆ ಹೊಂದಿದ್ದಾಗ ಮೂರು ವರ್ಷದಲ್ಲಿ 70 ಸಾವಿರಕ್ಕೂ ಹೆಚ್ಚು ಮನೆ ಕೊಟ್ಟಿದ್ದೇನೆ. ಇನ್ನೂ 33 ಸಾವಿರ ಮನೆಗಳನ್ನು ಹಂಚಿಕೆ ಮಾಡಬೇಕಿತ್ತು. ಅಷ್ಟರಲ್ಲಿಯೇ ಸಿಎಂ ಬದಲಾವಣೆಯಾದರು ಎಂದ ಅವರು, ಈಗಲೂ ವಸತಿ ಖಾತೆ ಕೊಟ್ಟರೆ ಒಳಿತು. ಆದಾಗ್ಯೂ ಯಾವ ಖಾತೆ ಕೊಟ್ಟರೂ ನಿಭಾಯಿಸುವೆ, ಅದು ಸಿಎಂಗೆ ಬಿಟ್ಟದ್ದು ಎಂದು ನುಡಿದರು.