ಪ್ರಿಯಾಂಕ್ ಖರ್ಗೆ 
ರಾಜಕೀಯ

RSS ನೋಂದಾಯಿತ ಸಂಸ್ಥೆಯಲ್ಲ, ಕಾನೂನು ಅಸ್ತಿತ್ವವೇ ಇಲ್ಲ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ನೋಂದಣಿ ಇಲ್ಲ ಎಂದರೆ ನೋಂದಾಯಿತ ಕಾನೂನುಬದ್ಧ ಸಂಸ್ಥೆಯೂ ಇಲ್ಲ. ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕರಣಗಳು ಎದುರಾದಾಗ, ಪ್ರಕರಣಗಳು ಸಂಘಟನೆಯ ವಿರುದ್ಧವಲ್ಲ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧವೇ ದಾಖಲಾಗುತ್ತವೆ.

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಒಂದು ನೋಂದಾಯಿತ ಸಂಸ್ಥೆಯಲ್ಲ ಹಾಗೂ ಅದಕ್ಕೆ ಯಾವುದೇ ಕಾನೂನು ಅಸ್ತಿತ್ವವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದು, ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವರು, ಆರ್‌ಎಸ್‌ಎಸ್ ಹೆಸರಿನಲ್ಲಿ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಕಾರಣ, ಸಂಘಟನೆಯ ವಿರುದ್ಧ ನೇರವಾಗಿ ದಾಖಲೆಗಳನ್ನು ಹುಡುಕುವುದು ಮೂರ್ಖತನ ಎಂದಿದ್ದಾರೆ.

ನೋಂದಣಿ ಇಲ್ಲ ಎಂದರೆ ನೋಂದಾಯಿತ ಕಾನೂನುಬದ್ಧ ಸಂಸ್ಥೆಯೂ ಇಲ್ಲ. ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಪ್ರಕರಣಗಳು ಎದುರಾದಾಗ, ಪ್ರಕರಣಗಳು ಸಂಘಟನೆಯ ವಿರುದ್ಧವಲ್ಲ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧವೇ ದಾಖಲಾಗುತ್ತವೆ ಎಂದು ಹೇಳಿದ್ದಾರೆ.

ಇದೇ ವೇಳೆ ಬೆಂಗಳೂರಿನ ಕೇಶವ ಕೃಪಾ ಮತ್ತು ದೆಹಲಿಯ ಕೇಶವ ಕುಂಜ್ ಸೇರಿದಂತೆ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಆಸ್ತಿಗಳು ಸಂಘಟನೆಯ ಹೆಸರಿನಲ್ಲಿ ಏಕೆ ನೋಂದಣಿಯಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನು ಅವರು “ಹೊಣೆಗಾರಿಕೆಯಿಲ್ಲದ ಪ್ರಭಾವ” ಮತ್ತು “ಹೊಣೆಗಾರಿಕೆಯಿಲ್ಲದ ಅಧಿಕಾರ” ಎಂದು ಬಣ್ಣಿಸಿದ್ದಾರೆ.

ಆರ್‌ಎಸ್‌ಎಸ್‌ ತನ್ನನ್ನು ನೋಂದಾಯಿಸಿಕೊಂಡು, ತನ್ನ ಖಾತೆಗಳು, ಆಸ್ತಿಗಳು, ಹಣಕಾಸಿನ ಮೂಲಗಳು ಹಾಗೂ ಹೊಣೆಗಾರಿಕೆಗಳನ್ನು ಬಹಿರಂಗಪಡಿಸಬೇಕು ಎಂಬ ತಮ್ಮ ಆಗ್ರಹವನ್ನೂ ಅವರು ಪುನರುಚ್ಚರಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ವಿಧಾನ ಪರಿಷತ್‌ನ ಪ್ರಶ್ನೆ ಸಂಖ್ಯೆ 524ಕ್ಕೆ ಉತ್ತರಿಸುವ ಸಂದರ್ಭದಲ್ಲಿ ಖರ್ಗೆ ಅವರು ಸಹಿ ಮಾಡಿರುವ ಅಧಿಕೃತ ದಾಖಲೆಗಳಲ್ಲಿ ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ಅಥವಾ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಹೇಳಲಾಗಿದೆ ಎಂದು ಆರೋಪಿಸಿದೆ. ಇದು ಖರ್ಗೆ ಅವರ ಸಾರ್ವಜನಿಕ ಹೇಳಿಕೆಗಳಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್‌ ಖರ್ಗೆ ಅವರು, “ಕಾನೂನುಬದ್ಧ ಅಸ್ತಿತ್ವವೇ ಇಲ್ಲದ ಸಂಘಟನೆಯ ಕುರಿತು ನೀವು ಸರಿಯಾದ ಪ್ರಶ್ನೆಗಳನ್ನು ಕೇಳುವ ಮೂಲಕ ಆರ್‌ಎಸ್‌ಎಸ್‌ ಅನ್ನು ಮುಜುಗರಕ್ಕೀಡು ಮಾಡುತ್ತಿದ್ದೀರಿ” ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ನೋಂದಾಯಿತ ಸಂಘಟನೆಯಲ್ಲ ಹಾಗೂ ಅದು ಅಧಿಕೃತ ಸದಸ್ಯತ್ವ ಕಾರ್ಡ್‌ಗಳನ್ನೂ ನೀಡುವುದಿಲ್ಲ. ಹೀಗಾಗಿ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಆರೋಪಗಳು ಕೇಳಿಬಂದರೆ, ಪ್ರಕರಣಗಳು ಆ ವ್ಯಕ್ತಿಗಳ ವಿರುದ್ಧವೇ ದಾಖಲಾಗುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿ ನಾಥೂರಾಮ್‌ ಗೋಡ್ಸೆಯನ್ನು ಉಲ್ಲೇಖಿಸಿರುವ ಖರ್ಗೆ, “ಗೋಡ್ಸೆಯನ್ನು ನೀವು ಹೇಗೆ ದೂರವಿಟ್ಟಿದ್ದೀರಿ ಎಂಬುದನ್ನು ನೆನಪಿಸಿಕೊಳ್ಳಿ” ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?