ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಮುಡಾ ಸೈಟ್ ನಲ್ಲಿ ಹಗರಣವಾಗಿದೆ ಎಂದು ಆರೋಪ ಮಾಡಿದ್ದಾರೆ. ಇದರಲ್ಲಿ ಯಾವುದೇ ಹಗರಣವಾಗಿಲ್ಲ ಎಂದು ಆರಂಭದಿಂದಲೂ ನಾನು ಹೇಳಿಕೊಂಡು ಬರುತ್ತಿದ್ದೇನೆ, ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಸು ಇನ್ನೂ ಮುಗಿದಿಲ್ಲ, ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಬಿ ರಿಪೋರ್ಟ್ ಒಪ್ಪಿಕೊಂಡಿದ್ದಾರೆ. ಮೇಲ್ಮನವಿ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ, ನೋಡೋಣ ಏನಾಗುತ್ತದೆ ಎಂದರು.
5 ವರ್ಷ ಸಿಎಂ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಮಾಡುತ್ತಿದ್ದಾರೆ, ರಾಜಕೀಯ ವಲಯದಲ್ಲಿ ಯಾವುದೇ ಚರ್ಚೆಗಳು ಆಗುತ್ತಿಲ್ಲ, ಅದು ಇತ್ಯರ್ಥವಾದ ವಿಷಯ, ಈಗ ಬೇರೆ ಗಮನಹರಿಸಬೇಕಾದ ವಿಷಯಗಳು ಸಾಕಷ್ಟಿವೆ, ಬಜೆಟ್ ಹತ್ತಿರವಿದೆ, ಹಣಕಾಸು ಆದಾಯ ಕೂಡ ಮೊದಲಿನಷ್ಟು ಬರುತ್ತಿಲ್ಲ, ಕೇಂದ್ರ ಸರ್ಕಾರ ನೀಡಬೇಕಾದ ಹಣವನ್ನು ರಾಜ್ಯಕ್ಕೆ ನೀಡುತ್ತಿಲ್ಲ, ಅದರ ಬಗ್ಗೆ ನಾಯಕರು ಗಮನ ಹರಿಸುತ್ತಿದ್ದಾರೆ ಎಂದರು.
ಸದ್ಯಕ್ಕಂತೂ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬೇಕೆಂದು ಯಾರೂ ಹೇಳುತ್ತಿಲ್ಲ, ಹೈಕಮಾಂಡ್ ಕೂಡ ಕೆಲವರ ಬೇಡಿಕೆಗೆ ಮನ್ನಣೆ ಕೊಟ್ಟಿಲ್ಲ, ಹಾಗಾಗಿ ನನ್ನ ಪ್ರಕಾರ ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿ ಇರುತ್ತಾರೆ ಎಂದರು.
ಯಾವುದೇ ಗೊಂದಲ ಇಲ್ಲ
ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ನನ್ನ ಪ್ರಕಾರ ಯಾವುದೇ ಗೊಂದಲ ಇಲ್ಲ, ಏನಾದರೂ ಇದೆಯೇ ಎಂದು ನೀವು ಸಿಎಂ-ಡಿಸಿಎಂ ಅವರನ್ನು ಕೇಳಿ. ಬಾಯಿಬಿಟ್ಟು ಹೇಳದೇ ಇದ್ದರೂ ಸ್ಪಷ್ಟವಾಗಿ ಹೈಕಮಾಂಡ್ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದಾರೆ. ಆದ್ದರಿಂದ 5 ವರ್ಷ ತಂದೆಯವರೇ ಇರುತ್ತಾರೆ ಎಂದು ನಾನು ನಂಬಿದ್ದೇನೆ ಎಂದರು.