ದಾವಣಗೆರೆ: ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು ಮತ್ತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಬೀಸಿದ್ದು, ಎರಡೂವರೆ ವರ್ಷ ಅಧಿಕಾರ ಹಂಚಿಕೆಗೆ ಒಪ್ಪಂದ ಆಗಿರೋದು ಸತ್ಯ. ಈ ಬಗ್ಗೆ ನನಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 139 ಶಾಸಕರ ಬೆಂಬಲ ಡಿಸಿಎಂ ಡಿ ಕೆ ಶಿವಕುಮಾರ್ ಇದೆ. 40 ರಿಂದ 50 ಜನ ನಮ್ಮಂತ ಯುವ ಶಾಸಕರು ಡಿಕೆಶಿ ಏನೇ ಹೇಳಿದರೂ ಮಾಡಲು ಸಿದ್ಧರಿದ್ದೇವೆ. ಅವರು ಪ್ರಾಣ ಕೇಳಿದರೂ ಕೊಡೋಕೆ ನಾವುಗಳು ಸಿದ್ಧರಿದ್ದೇವೆಂದು ಹೇಳಿದ್ದಾರೆ.
ನನಗಿರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ. ಸಿಎಂ ಸಿದ್ದರಾಮಯ್ಯ ಐದು ವರ್ಷದ ತನಕ ಸಿಎಂ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಪದೇ ಪದೆ ಹೇಳಿಕೆ ನೀಡುತ್ತಲೇ ಇದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಪಕ್ಷದ ಹೈಕಮಾಂಡ್ ಗಮನಿಸಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಾ ಗಾಂಧಿ ಇದ್ದಾರೆ. ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆಯಾ? ಇಲ್ಲವಾ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ತಿಳಿಸಿದ್ದಾರೆ.
ಡಿಕೆಶಿ ಸಾಹೇಬರು ಹೇಳಿದಂತೆ ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್. ಪದೇ ಪದೆ ಮಾಧ್ಯಮಗಳ ಮುಂದೆ ಬಂದು ಪಕ್ಷಕ್ಕೆ ಡ್ಯಾಮೇಜ್ ಆಗುವ ಕೆಲಸ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಅವರ ಹೈಕಮಾಂಡ್ ಯತೀಂದ್ರ ಅವರಿರಬಹುದು. ನಮ್ಮ ಹೈಕಮಾಂಡ್ ಬೇರೆ ಇದೆ. ಖರ್ಗೆ ಸಾಹೇಬರು, ರಾಹುಲ್ ಗಾಂಧಿಯವರು ಇದ್ದಾರೆ.
ಹೈಕಮಾಂಡ್ ಕೂಡಲೇ ಒಪ್ಪಂದದ ಬಗ್ಗೆ ಸ್ಪಷ್ಟಪಡಿಸಲಿ. ನಾನು ಯಾವುದೇ ಮಾತು ಕೊಟ್ಟಿಲ್ಲ ಎಂದು ಸಿದ್ದರಾಮಯ್ಯನವರು ಕ್ಲಿಯರ್ ಮಾಡಲಿ. ಆಗ ಈ ಸಮಸ್ಯೆಯೇ ಮುಗಿದು ಹೋಗುತ್ತಲ್ಲ. ಆಗ ನಾವು ಎಲ್ಲರೂ ಯಾವುದೇ ಪ್ರಶ್ನೆ ಎತ್ತೋದಿಲ್ಲ ಎಂದರು.
ಸಿಎಂ ಬದಲಾವಣೆ ವಿಚಾರವಾಗಿ ನನ್ನ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳಿ. ಯಾಕಂದ್ರೆ ನಂದು ಒಂದು ವೋಟ್ ಇದೆ. ಆದರೆ, ಯತೀಂದ್ರ ಸಿದ್ದರಾಮಯ್ಯನವರದ್ದು ವೋಟ್ ಇಲ್ಲ. ಅವರ ಹೇಳಿಕೆ ಏಕೆ ಗಣನೆಗೆ ತೆಗೆದುಕೊಳ್ಳುತ್ತೀರಿ? ಎನ್ನುವ ಮೂಲಕ ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.