ಹಾಸನ: 113 ಸ್ಥಾನ ಗೆದ್ದು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಲು ಅಭ್ಯಂತರವಿಲ್ಲ. ಅದೇ ರೀತಿ ಬಿಜೆಪಿ 113 ಸ್ಥಾನ ಗೆದ್ದರೆ ನಮ್ಮವರು ಸಿಎಂ ಆಗುತ್ತಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಹಾಸನದಲ್ಲಿ ಮಾತನಾಡಿದ ಅವರು, ಜೆಡಿಎಸ್ ನಮ್ಮ ಬಗ್ಗೆಯಾಗಲಿ, ನಾವು ಅವರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ನಾವು ಅವರನ್ನು ಎಷ್ಟು ಗೌರವಿಸುತ್ತೇವೋ ಅವರು ನಮ್ಮನ್ನು ಅಷ್ಟೇ ಗೌರವಿಸಬೇಕು ಎಂದು ಹೇಳಿದರು.
ಬಿಜೆಪಿಯ ಎಲ್ಲ ತೀರ್ಮಾನ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತದೆ. ಜೆಡಿಎಸ್ ತೀರ್ಮಾನವನ್ನು ದೇವೇಗೌಡರು, ಕುಮಾರಸ್ವಾಮಿ ಮಾಡುತ್ತಾರೆ. ಸ್ಥಳೀಯ ಸಂಸ್ಥೆ ಮೈತ್ರಿ ವಿಚಾರ ಕೇಂದ್ರದ ಮಟ್ಟದಲ್ಲಿ ನಿರ್ಧಾರ ಆಗುತ್ತದೆ. ತಳಮಟ್ಟದಲ್ಲಿ ಯಾರು ಏನೇ ಮಾತನಾಡಿದರೂ ಪ್ರಯೋಜನವಿಲ್ಲ ಎಂದರು.
ಶಾಸಕ ಎಚ್.ಡಿ.ರೇವಣ್ಣ ಸೇರಿದಂತೆ ಯಾರು ಏನೇ ಹೇಳಿಕೆ ನೀಡಿದರೂ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ. ನಮ್ಮ ವಿರೋಧವಿಲ್ಲ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಅವರಿಗೆ ಟಿಕೆಟ್ ನೀಡುವುದು ವರಿಷ್ಠರು. ಈ ಹಿಂದೆ ಅವರು ಇಲ್ಲಿ ಶಾಸಕರಾಗಿದ್ದವರು, ಪಕ್ಷಕ್ಕೆ ಜಿಲ್ಲೆಯಲ್ಲಿ ಬಲವಿದೆ ಎಂದರು. ಬಿಜೆಪಿ- ಜೆಡಿಎಸ್ ನಡುವಿನ ಮೈತ್ರಿ , ಸೀಟು ಹಂಚಿಕೆ ಒಪ್ಪಂದ ಎಲ್ಲವೂ ಕೇಂದ್ರದ ನಾಯಕರು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.