ಬೆಂಗಳೂರು: ನಾಯಕತ್ವ ಬದಲಾವಣೆ ಸಂಬಂಧ ಕೆಲ ಶಾಸಕರ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ಈ ನಡುವಲ್ಲೇ ಸಚಿವ ಹೆಚ್.ಸಿ.ಮಹದೇವಪ್ಪ ನೀಡಿದ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ನಾಯಕತ್ವ ಬದಲಾವಣೆ ಸಂಬಂಧ ಶಾಸಕರ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಇಲ್ಲಿ ನಾಯಕತ್ವದ ಚರ್ಚೆ ಎಲ್ಲಿದೆ..?. ಹೈಕೋರ್ಟ್ ಬೀದಿ ನಾಯಿಗಳನ್ನೆಲ್ಲ ಹಿಡಿದು ಒಳಗೆ ಹಾಕಿ ಅಂತ ಪದೇ ಪದೆ ಹೇಳುತ್ತಿದೆ ಇದೆ. ಇಲ್ಲಿ ರಾಜಕೀಯ ನಾಯಕತ್ವ ಗಟ್ಟಿಯಾಗಿದೆ ಎಂದು ಹೇಳಿದರು.
ಬಳಿಕ ಮಾಧ್ಯಮಗಳು ಮರು ಪ್ರಶ್ನೆ ಹಾಕಿದ್ದಕ್ಕೆ ಉತ್ತರಿಸಿ, ಹೈಕೋರ್ಟ್ ಹೇಳಿದ್ದನ್ನು ನಾನು ಹೇಳಿದೆ ಅಷ್ಟೇ. ನಾಯಕರು ನಾಯಿಗಳು ಅಂತ ನಾನು ಹೇಳಿದ್ದೀನಾ? ಹೈಕಮಾಂಡ್ಗೆ ನಿರ್ದೇಶನ ಕೊಡುವವರು ಯಾರು? ನಾನಾ ನೀವಾ? ನಾಯಿ ಬಾಲವನ್ನು ಅಲ್ಲಾಡಿಸಬಹುದು, ಬಾಲವೇ ನಾಯಿಯನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಎಸ್ಸಿ, ಎಸ್ಟಿ ಶಾಸಕರ ಜೊತೆ ಸಿಎಂ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಜೆ ಎಸ್ಸಿ, ಎಸ್ಟಿ ಸಚಿವರು, ಶಾಸಕರನ್ನು ಕರೆದಿದ್ದಾರೆ. ಸಿಎಂ ನಮ್ಮನ್ನು ಕರೆದಿದ್ದಾರೆ. ದಲಿತರ ಬದುಕಿಗೆ ಪೂರಕವಾದ ಬೇಡಿಕೆ ಇಡಲಿದ್ದೇವೆ. ಎಲ್ಲವನ್ನು ಸಿಎಂ ಮುಂದೆ ಕೇಳೋಣ ಅಂತಿದ್ದೇವೆ ಎಂದರು.
ಎಸ್ಸಿಪಿಟಿಎಸ್ಪಿ ಹಣ ಬೇರೆಯದಕ್ಕೆ ಬಳಕೆಗೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಅದನ್ನೆಲ್ಲ ಸಮುದಾಯಕ್ಕೆ ಬಳಸಬೇಕೆಂಬುದಿದೆ. ಡೈವರ್ಟ್ ಆಗುತ್ತಿದೆ ಅಂತ ಸೆಕ್ಷನ್ 7 ಡಿ ತೆಗೆದು ಹಾಕಿದ್ದೇವೆ. ಫಲಾನುಭವಿಗಳಿಗೆ ನೀಡೋಕೆ ಪ್ರಾವಿಜನ್ ಇದೆ. ಗ್ಯಾರಂಟಿಗೆ ಕೊಡಬಾರದು ಅಂತ ನಿಯಮ ಇಲ್ಲ. ಸರ್ಕಾರ ಮಾಡುವ ಯೋಜನೆ ಎಸ್ಸಿ, ಎಸ್ಸಿಗೆ ಬಳಸಲು 7ಸಿ ನಿಯಮ ಇದೆ?. ಹಾಗಾಗಿ ಎಸ್ಸಿ, ಎಸ್ಟಿಗೆ ಹೋಗುತ್ತಲ್ಲ ಎಂದು ಸಮರ್ಥಿಸಿಕೊಂಡರು.
ಶಾಸಕರ ಅಧ್ಯಯನ ಪ್ರವಾಸದ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕರು ಜನಜೀವನ ಅಧ್ಯಯನಕ್ಕೆ ಹೋಗುತ್ತಿದ್ದಾರೆ. ಯಾರು ಹೇಳಿದ್ದು ತಡೆಯುತ್ತಿದ್ದಾರೆ ಎಂದು, ಶಾಸಕರು, ಮಂತ್ರಿ ಪ್ರವಾಸ ಹೋಗೋದು ಸೀರಿಯಸ್ ಅಲ್ಲ. ಅದರ ಇಂಪಾರ್ಟೆಂಟ್ ಮುಖ್ಯ. ಟೂರಿಸಂ ಡೆವಲಪ್ಮೆಂಟ್ ಆಗುತ್ತದೆ. ಉತ್ತಮ ನಾಲೆಡ್ಜ್ ಅವರಿಗೆ ಬರುತ್ತೆ. ಹಾಗಾಗಿ ಅವರು ಪ್ರವಾಸ ಹೋಗ್ತಿದ್ದಾರೆ. ಜಾತಿ ಪದ್ಧತಿ ಇದ್ಯಾ, ವರ್ಣಾಶ್ರಮ ಇದ್ಯಾ, ಇದೆಲ್ಲವನ್ನೂ ಅಧ್ಯಯನ ಮಾಡಬಹುದು. ನ್ಯೂಜಿಲೆಂಡ್ಗೆ ನಾನು ಒಮ್ಮೆ ಹೋಗಿದ್ದೆ. ಅಲ್ಲಿ ಜಾತಿಯೇ ಇಲ್ಲ, ಶೇ.40 ಜಾತಿಯನ್ನೇ ಹೇಳಲ್ಲ ಎಂದರು.
ನಾನು ಅಂಬೇಡ್ಕರ್ ಸಿದ್ಧಾಂತ ಇಟ್ಟುಕೊಂಡವನು. ವ್ಯಕ್ತಿ ಪೂಜೆ ಮಾಡಬೇಡಿ ಅಂತ ಹೇಳಿದ್ದರು. ವ್ಯಕ್ತಿ ಪೂಜೆ ಸರ್ವಾಧಿಕಾರಿಯನ್ನ ಸೃಷ್ಠಿಸುತ್ತದೆ. ನಾನು ಸಿದ್ದರಾಮಯ್ಯ ಪೂಜೆ ಮಾಡಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ಪೂಜೆ ಮಾಡೋದು. ನಾನು ನೊಂದೂ ಇಲ್ಲ, ಬೆಂದೂ ಇಲ್ಲ. ಸದಾಶಿವನಗರದವರು ಎಲ್ಲೆಲ್ಲಿ ನೊಂದಿದ್ದಾರೆ ನೀವೇ ಕೇಳಿ ಎಂದು ತಿಳಿಸಿದರು.