ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ನಡೆದಿದೆ. ಬುಧವಾರ ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹತ್ತು ಜನರಿಗೆ ಸಂಪುಟದಲ್ಲಿ ಆರಂಭಿಕ ಅವಕಾಶ ಸಿಗಲಿದೆ.
ಜಮೀರ್ ಅಹ್ಮದ್ ಖಾನ್ ಕೂಡಾ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದಾರೆ. ಈ ಎಲ್ಲಾ ಬೆಳವಣಿಗೆ ನಂತರದಲ್ಲಿ ಇದೀಗ ಜಮೀರ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗುತ್ತಿದೆ.
ಕಾಕ್ರೋಚ್ ಪಾರ್ಟಿ ಹೆಸರಿನ ಎಕ್ಸ್ನಲ್ಲಿ ಆಡಿಯೋ ರಿಲೀಸ್ ಆಗಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡ ಸಿರಾಜ್ ಜೊತೆ ಜಮೀರ್ ಅಹಮ್ಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ.
ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ. ಮುಸ್ಲಿಂ ವೋಟಿಂಗ್ ಕಡಿಮೆ ಇದೆ ಹೊರಗಡೆ ಬಂದ್ರೆ ಅವರನ್ನ ನಂಬೋಕಾಗಲ್ಲ ಕಾಂಗ್ರೆಸ್ಗೆ ವೋಟ್ ಹಾಕುತ್ತಾರೆ ಎಂದು ಜಮೀರ್ ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಈ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ
ಜಮೀರ್ ಅಹ್ಮದ್ ಖಾನ್ರದ್ದು ಎನ್ನಲಾದ ಆಡಿಯೋದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಬದಲಾಗಿ ಮುಸ್ಲಿಮರೆಲ್ಲಾ ಪಕ್ಷೇತರರಿಗೆ ವೋಟ್ ಹಾಕಬೇಕು ಎಂದು ಆಗ್ರಹಿಸುವುದು ತಿಳಿದು ಬಂದಿದೆ. ಒಂದು ವೇಳೆ ಮುಸ್ಲಿಮರು ವೋಟ್ ಹಾಕಿಲ್ಲ ಅಂದ್ರೂ ಓಕೆ, ಅವನಿಗೆ ಕಾಂಗ್ರೆಸ್ ವೋಟ್ಗಳು ಮೈನಸ್ ಆಗಬೇಕು ಎಂದು ತಮ್ಮ ಬಂಟನಿಗೆ ಜಮೀರ್ ಸೂಚನೆ ನೀಡಿರುವುದು ಆಡಿಯೋದಲ್ಲಿದೆ.
ಅಷ್ಟೇ ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗೆ ಜಾಸ್ತಿ ಓಟ್ ಹಾಕಬೇಡಿ. ಬಂಡಾಯ ನಿಂತು ಕಣದಿಂದ ಹಿಂದೆ ಸರಿದಿದ್ದ ಸಾದಿಕ್ ಪೈಲ್ವಾನ್ ವಾರ್ಡ್ ನಲ್ಲಿ ಕಾಂಗ್ರೆಸ್ ಗೆ ಓಟ್ ಕಡಿಮೆ ಬರುವಂತೆ ನೋಡಿಕೊಳ್ಳಿ. ಜಾಸ್ತಿ ಹಾಕದೇ ಇರುವಂತೆ ನೋಡಿ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರಿಗೆ ಮತ ಹಾಕಿಸಿ. ಬಲವಂತವಾಗಿ ಮನೆಯಿಂದ ಕರೆದು ಬಂದು ಓಟ್ ಹಾಕಿಸೇಡಿ ಎಂದು ಆಡಿಯೋದಲ್ಲಿದೆ.
ಇನ್ನೂ ಈ ಸಂಬಂಧ ಜಮೀರ್ ಅಹ್ಮದ್ ಖಾನ್ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.