ನೆಲಮಂಗಲ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಲೋಕ ಭವನದಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ.
ಡಿಕೆ ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ನೆಲಮಂಗಲದಲ್ಲಿ ಸಂಭ್ರಮ ಮನೆ ಮಾಡಿದ್ದು, ತಾಲೂಕಿನ ಪ್ರತಿ ಮನೆಗೆ ಲಾಡು ಹಂಚಲು ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ.
ಸುಮಾರು 9 ರಿಂದ 10 ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದ್ದು, ನೆಲಮಂಗಲ ತಾಲೂಕಿನ 80 ರಿಂದ 90 ಸಾವಿರ ಮನೆಗಳಿಗೆ ಲಾಡು ಬಾಕ್ಸ್ ವಿತರಿಸಲು ಯೋಜನೆ ರೂಪಿಸಲಾಗಿದೆ.
ನೆಲಮಂಗಲ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಲಾಡು ತಯಾರಿ ಕಾರ್ಯ ನಡೆಯುತ್ತಿದೆ. ಸುಮಾರು 250 ರಿಂದ 300 ಮಂದಿ ಬಾಣಸಿಗರಿಂದ ಲಾಡು ತಯಾರಿಸಲಾಗುತ್ತಿದೆ.
ಡಿಕೆಶಿ ಅವರು ಮುಖ್ಯಮಂತ್ರಿಯಾಗುತ್ತಿರುವ ಈ ಅದ್ಭುತ ಕ್ಷಣ ನೆನಪಿನಲ್ಲಿರಬೇಕು ಎಂದು ನೆಲಮಂಗಲ ತಾಲೂಕಿನಾದ್ಯಂತ ಇರುವ ಎಲ್ಲಾ ಮನೆಗಳಿಗೆ ತಲಾ ಮುಕ್ಕಾಲು ಕೆಜಿಯಷ್ಟು (750 ಗ್ರಾಂ) ಉನ್ನತ ಗುಣಮಟ್ಟದ ಲಾಡುಗಳ ಸಿಹಿ ಬಾಕ್ಸ್ ಅನ್ನು ಉಚಿತವಾಗಿ ವಿತರಿಸಲು ಶಾಸಕರು ನಿರ್ಧರಿಸಿದ್ದಾರೆ. ನಾಳೆ ಬೆಳಗ್ಗೆಯಿಂದಲೇ ಈ ಬೃಹತ್ ಸಿಹಿ ಹಂಚಿಕೆ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.