ಬಿಜಾಪುರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಚೊಚ್ಚಲ ಸಚಿವ ಸಂಪುಟದಲ್ಲಿ ಪ್ರಾದೇಶಿಕ, ಜಾತಿ ಮತ್ತು ರಾಜಕೀಯ ಸಮೀಕರಣಗಳನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿದ್ದರೂ, 13 ಸದಸ್ಯರ ಸಚಿವ ಸಂಪುಟದಲ್ಲಿ ಮಹಿಳೆಯರ ಸಂಪೂರ್ಣ ಅನುಪಸ್ಥಿತಿ ಚರ್ಚೆಗೆ ಕಾರಣವಾಗಿದೆ.
ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಒಂಬತ್ತು ಮಹಿಳಾ ಶಾಸಕರನ್ನು ಹೊಂದಿದೆ. ನಾಲ್ಕು ಶಾಸಕರು ಮತ್ತು ಐದು ಎಂ.ಎಲ್.ಸಿ.ಗಳಿದ್ದರೂ ಒಬ್ಬರಿಗೂ ಸಂಪುಟದಲ್ಲಿ ಸ್ಥಾನ ನೀಡಿಲ್ಲ, ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಬೇಕೆಂದು ಪ್ರತಿಪಾದಿಸುತ್ತಿರುವ ಸಂದರ್ಭದಲ್ಲಿಮಹಿಳೆಯರಿಗೆ ಪ್ರಾತಿನಿಧ್ಯ ನೀಡದದಿರುವುದು ಪಕ್ಷದ ಬದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹಿರಿಯ ಎಂ.ಎಲ್.ಸಿ. ಉಮಾಶ್ರೀ ಮತ್ತು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕಡೆಗಣಿಸಲಾಗಿದೆ, ಇಬ್ಬರೂ ಹಿಂದಿನ ಕ್ಯಾಬಿನೆಟ್ ಅನುಭವವನ್ನು ಹೊಂದಿದ್ದಾರೆ ಮತ್ತು ಸಚಿವ ಸ್ಥಾನಗಳಿಗೆ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ. ಅವರನ್ನು ಹೊರಗಿಟ್ಟಿರುವುದು ಪಕ್ಷದೊಳಗಿನ ಅನೇಕರಿಗೆ ಆಶ್ಚರ್ಯವನ್ನುಂಟುಮಾಡಿದೆ.
ಸಂಪುಟ ರಚನೆಗೆ ಮುಂಚಿನ ದಿನಗಳಲ್ಲಿ, ಕನಿಷ್ಠ ಒಬ್ಬ ಮಹಿಳಾ ನಾಯಕಿಗೆ ಅವಕಾಶ ನೀಡಲಾಗುವುದು ಎಂಬ ಊಹಾಪೋಹಗಳು ಹರಡಿದ್ದವು. ರೂಪಕಲಾ ಶಶಿಧರ್ ಅವರ ಹೆಸರು ರಾಜಕೀಯ ಚರ್ಚೆಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದು, ಕೆಜಿಎಫ್ ಶಾಸಕಿಯಾಗಿರುವ ಅವರು ಸಚಿವ ಸಂಪುಟದಲ್ಲಿ ಹೊಸ ಮುಖವಾಗಿ ಹೊರಹೊಮ್ಮುತ್ತಾರೆ ಎಂದು ಹಲವರು ನಿರೀಕ್ಷಿಸಿದ್ದರು. ಆದರೆ ಅವರು ಕೂಡ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಕಾಂಗ್ರೆಸ್ನಲ್ಲಿ ಪ್ರಸ್ತುತ ನಾಲ್ಕು ಮಹಿಳಾ ಶಾಸಕಿಯರಿದ್ದಾರೆ - ಲಕ್ಷ್ಮಿ ಹೆಬ್ಬಾಳ್ಕರ್, ರೂಪಕಲಾ ಶಶಿಧರ್, ನಯನಾ ಮೋಟಮ್ಮ ಮತ್ತು ಕನೀಜ್ ಫಾತಿಮಾ. ವಿಧಾನ ಪರಿಷತ್ತಿನಲ್ಲಿ, ಪಕ್ಷವನ್ನು ಗಾಯತ್ರಿ ಶಾಂತೇಗೌಡ, ಪುಷ್ಪಾ ಅಮರನಾಥ್, ಬಿಲ್ಕಿಸ್ ಬಾನೋ, ಡಾ. ಆರತಿ ಕೃಷ್ಣ ಮತ್ತು ಉಮಾಶ್ರೀ ಪ್ರತಿನಿಧಿಸುತ್ತಾರೆ. ಆದರೆ ಯಾರಿಗೂ ಶಿವಕುಮಾರ್ ನಾಯಕತ್ವದ ಮೊದಲ ಸಂಪುಟಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಮುಖ್ಯಮಂತ್ರಿಗಳು ಪ್ರಾದೇಶಿಕ ನಾಯಕರು, ಪ್ರಭಾವಿ ಸಮುದಾಯಗಳು, ನಿಷ್ಠಾವಂತರು ಮತ್ತು ಮೊದಲ ಬಾರಿಗೆ ಆಕಾಂಕ್ಷಿಗಳಿಗೆ ಅವಕಾಶ ನೀಡುವ ಒತ್ತಡದಲ್ಲಿದ್ದರೂ, ಒಬ್ಬ ಮಹಿಳಾ ಸಚಿವೆಯೂ ಇಲ್ಲದಿರುವುದು ರಾಜಕೀಯ ವಿವಾದವನ್ನು ಸೃಷ್ಟಿಸಿದೆ ಎಂದು ರಾಜಕೀಯ ವಿಶ್ಲೇಷಕರು ಗಮನಸೆಳೆದಿದ್ದಾರೆ.
ಮುಂದಿನ ಹಂತದ ಸಂಪುಟ ವಿಸ್ತರಣೆಯ ಚರ್ಚೆಗಳಲ್ಲಿ ಈ ವಿಷಯವು ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.