ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಹೇಳಿಕೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅತ್ಯಂತ ಹಿರಿಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಿಕೆ ಹರಿಪ್ರಸಾದ್ ನೀಡಿದ್ದ ಕೆಲ ಹೇಳಿಕೆಗಳು ಭಾರಿ ಸುದ್ದಿಗೆ ಗ್ರಾಸವಾಗಿದ್ದವು. ಪ್ರಮುಖವಾಗಿ ಅಧಿಕಾರ ಬೇಕು ಎಂದವರು ಡಿಕೆ ಶಿವಕುಮಾರ್ ಜೊತೆ ಹೋಗಿ, ಪಕ್ಷ ಕಟ್ಟಬೇಕು ಎನ್ನುವವರು ನನ್ನ ಜೊತೆ ಬನ್ನಿ ಎಂಬ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಇದರ ನಡುವೆಯೇ ಸಿಎಂ ಡಿಕೆ ಶಿವಕುಮಾರ್ ನೂತನ ಕೆಪಿಸಿಸಿ ಅಧ್ಯಕ್ಷರ ಕುರಿತು ಮಾತನಾಡಿದ್ದು, 'ಅವರು ಅತ್ಯಂತ ಹಿರಿಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಪರಿಷತ್ತಿನಲ್ಲೂ ಇದ್ದರು, ಮತ್ತು ನಾಳೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ... ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುತ್ತೇವೆ. ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಕರ್ತವ್ಯ, ಮತ್ತು ನನಗೆ ಸಂಪೂರ್ಣ ವಿಶ್ವಾಸವಿದೆ' ಎಂದು ಹೇಳಿದರು.
ಅಂತೆಯೇ ಕರ್ನಾಟಕದ ಜನತೆಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಆ ಮೂಲಕ ಅವರ ನಂಬಿಕೆ ಉಳಿಸಿಕೊಳ್ಳುತ್ತೇವೆ. 2028ರಲ್ಲಿ ಮತ್ತೆ ಜನರ ವಿಶ್ವಾಸಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಅಂತೆಯೇ ಉಚಿತ ಬಸ್ ಪಾಸ್ಗಳ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, "ಇದು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ. ನಾವು ಹೊರಗಿನವರಿಗೆ ಪಾಸ್ಗಳನ್ನು ನೀಡಲು ಸಾಧ್ಯವಿಲ್ಲ. ಯಾವುದೇ ಕಾರ್ಯಕ್ರಮವು ಸ್ಥಳೀಯರಿಗೆ ಮಾತ್ರ. ನಾವು ಅದನ್ನು ಬೇರೆ ಯಾವುದೇ ರಾಜ್ಯಗಳ ಜನರಿಗೆ ನೀಡಲು ಸಾಧ್ಯವಿಲ್ಲ..." ಎಂದು ಸ್ಪಷ್ಟಪಡಿಸಿದರು.