ಬಿಜೆಪಿ ಪೋಸ್ಟರ್ ಚಿತ್ರ 
ರಾಜಕೀಯ

2ನೇ ವಿಕೆಟ್ ಪತನಕ್ಕೆ ಕ್ಷಣಗಣನೆ! ಸಿದ್ದು ಗೂಗ್ಲಿಗೆ ಕಾಂಗ್ರೆಸ್ ಸರ್ಕಾರವೇ ಅಲ್ಲೋಲ ಕಲ್ಲೋಲ- ರಾಜ್ಯ ಬಿಜೆಪಿ!

ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಳೆದ ಎರಡು ವರ್ಷಗಳಿಂದ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿ, ಇದೀಗ ಆ ಖಾತೆ ದೊರೆಯದೆ ಅಸಮಾಧಾನಗೊಂಡು ಸಚಿವ ಖಾತೆಗೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 'ಖಾತೆ ಕ್ಯಾತೆ' ಹೆಚ್ಚಾಗುತ್ತಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಳೆದ ಎರಡು ವರ್ಷಗಳಿಂದ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿ, ಇದೀಗ ಆ ಖಾತೆ ದೊರೆಯದೆ ಅಸಮಾಧಾನಗೊಂಡು ಸಚಿವ ಖಾತೆಗೆ ರಾಜೀನಾಮೆ ನೀಡಿದ್ದಾರೆ. ಅವರ ಬೆಂಬಲಿಗರು ಕೂಡಾ ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.

ರಾಮಲಿಂಗಾರೆಡ್ಡಿ ಬಳಿಕ ಸಚಿವ ಮುನಿಯಪ್ಪ ಕೂಡಾ ರಾಜೀನಾಮೆಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನಿರ್ವಹಿಸಿದ್ದ ಕೆ. ಹೆಚ್. ಮುನಿಯಪ್ಪ ಅವರಿಗೆ ಈ ಬಾರಿಯೂ ಅದೇ ಖಾತೆ ನೀಡಲಾಗಿದೆ. ಆದರೆ, ಈ ಖಾತೆ ಬೇಡ ಎನ್ನುತ್ತಿರುವ ಮುನಿಯಪ್ಪ, ಇನ್ನೂ ಯಾರಿಗೂ ಹಂಚಿಕೆಯಾಗದ ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಖಾತೆ ಹಂಚಿಕೆಯಲ್ಲಿ ಹಿರಿತನ ಕಾಪಾಡಿಲ್ಲ. ಹಿರಿಯರಿಗೆ ಸರಿಯಾದ ಖಾತೆ ನೀಡಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ನಮಗೆ ತಾಯಿ ರೀತಿ. ಹಾಗಾಗಿ ಪಕ್ಷಕ್ಕೆ ತೊಂದರೆಯಾಗುವಂತೆ ನಾವ್ಯಾರು ನಡೆದುಕೊಳ್ಳಲ್ಲ. ಪಕ್ಷ ಈ ರೀತಿ ಮುಂದುವರೆದರೆ ೨೦೨೮ರ ಚುನಾವಣೆಯಲ್ಲಿ ಕಷ್ಟವಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಸಚಿವ ಮುನಿಯಪ್ಪನವರೂ ಸಹ ನಾನು ಚಾರ್ಜ್ ತೆಗೆದುಕೊಳ್ಳುವುದಿಲ್ಲ ಎನ್ನುವ ಮೂಲಕ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ. ನೆಮ್ಮದಿಯಾಗಿ 48 ಗಂಟೆಯೂ ಆಡಳಿತ ನಡೆಸಲು ಬಿಡದ ತಮ್ಮದೇ ಪಕ್ಷದ ಶಕ್ತಿಗಳ ಕೈವಾಡವೂ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಅರ್ಥವಾಗುತ್ತಿಲ್ಲ. ಸಿದ್ದು ಗೂಗ್ಲಿಗೆ ಕಾಂಗ್ರೆಸ್ ಸರ್ಕಾರವೇ ಅಲ್ಲೋಲ ಕಲ್ಲೋಲವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಕಾಂಗ್ರೆಸ್ಸಿಗರ ಆಂತರಿಕ ಕಚ್ಚಾಟದಲ್ಲಿ ನಾಡಿನ ಜನಸಾಮಾನ್ಯರು ಬಡವಾಗುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದೆ.

ರಾಜೀನಾಮೆ ಎಂಬ ಪದದಿಂದ ಜನ್ಮ ತಾಳಿದ ಡಿಕೆ ಶಿವಕುಮಾರ್ ಅವರ ಸರ್ಕಾರ, ಈಗ ರಾಜೀನಾಮೆಗಳಿಂದಲೇ ಮುನ್ನಡೆಯುತ್ತಿದೆ. ಈ ರಾಜೀನಾಮೆ ಸರ್ಕಾರ ಕನ್ನಡಿಗರ ಬದುಕನ್ನು ಮತ್ತಷ್ಟು ಹಾಳು ಮಾಡುವುದು ಖಚಿತ-ನಿಶ್ಚಿತ-ಖಂಡಿತ ಎಂದು ಹೇಳಿದೆ.ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟಿದ್ದೆ ಕೊಟ್ಟಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ರಾಜೀನಾಮೆ ಪರ್ವ ತುಂಬಿ ತುಳುಕುತ್ತಿದೆ ಎಂದು ಲೇವಡಿ ಮಾಡಿದೆ.

ಮತ್ತೊಂದೆಡೆ ಕೋಲಾರದ ಕೈವಾರದ ರೆಸಾರ್ಟ್‌ನಲ್ಲಿ ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಡಿ.ಕೆ.ಶಿವಕುಮಾರ್ ಮಂತ್ರಿ ಮಂಡಲದಲ್ಲಿ ಹೊಸಮುಖಗಳಿಗೆ ಅವಕಾಶವಿಲ್ಲ. ಇರುವುದೆಲ್ಲ ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈಗ ರಚನೆಯಾಗಿರುವ ಸರ್ಕಾರದಲ್ಲಿ ಯಾವುದೇ ಹೊಸತನವಿಲ್ಲ. ಅದೇ ಹಳೆಯ ಲಾರಿಯಾಗಿದ್ದು ಕೇವಲ ನಂಬರ್ ಪ್ಲೇಟ್ ಬದಲಾಗಿದೆ. ಯಾವುದೇ ಅಭಿವೃದ್ಧಿ ಈಗಿನ ಹೊಸ ಮುಖ್ಯಮಂತ್ರಿಗಳಿಂದ ಸಾಧ್ಯವಿಲ್ಲ, ಏಕೆಂದರೆ ಅದೇ ನುಂಗಣ್ಣನವರು, ಅದೇ ಭಷ್ಟಾಚಾರ, ಅದೇ ಲೂಟಿಕೋರರ ಸರ್ಕಾರವಾಗಿದೆ. ಶೇ.50 ರಷ್ಟು ಮಹಿಳೆಯರಿರುವ ರಾಜ್ಯದಲ್ಲಿ ಒಬ್ಬ ಮಹಿಳೆಗೆ ಮಂತ್ರಿಮಂಡಲದಲ್ಲಿ ಸ್ಥಾನ ಕೊಡಲು ಸಾಧ್ಯವಾಗಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಮಲಿಂಗಾರೆಡ್ಡಿಗೆ ಮಾತು ಕೊಟ್ಟಿದ್ದು ನಿಜ, ಆದ್ರೆ...: ಖಾತೆ ಕೈತಪ್ಪಲು ಕಾರಣ ಬಿಚ್ಚಿಟ್ಟ CM ಡಿಕೆ ಶಿವಕುಮಾರ್

ಅಧಿಕಾರ ಹೋದ ನಂತರ ಒಬ್ಬಂಟಿಯಾದ ಸಿದ್ದರಾಮಯ್ಯ: ಎದುರಿಗೆ ಬಂದರೂ DKS-Siddu ನಡುವೆ ಮಾತಿಲ್ಲ, ಕಥೆಯಿಲ್ಲ; Video

Peddi: ಪಾತ್ರಕ್ಕೆ ತಕ್ಕಂತೆ ಜಾನ್ವಿ ಕಪೂರ್ ನಟಿಸಿದ್ರೂ ಎಡಿಟರ್ ಕಣ್ಣು ಮಾತ್ರ ಎದೆ, ಸೊಂಟದ ಮೇಲೆ ಯಾಕೆ? ನೆಟ್ಟಿಗರ ತರಾಟೆ!

ಗಡಿಭದ್ರತೆಗೆ ಹೈಟೆಕ್ ಟಚ್: ಶೀಘ್ರದಲ್ಲೇ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ಬಾರ್ಡರ್; ಅಮಿತ್ ಶಾ

ಮಹಾರಾಜ ಟ್ರೋಫಿ 2026 ಹರಾಜು: IPL ಮುಗಿದ ಬೆನ್ನಲ್ಲೇ ಹೊಸ ಟಿ20 ತಂಡ ಸೇರಿಕೊಂಡ ಪಡಿಕ್ಕಲ್

SCROLL FOR NEXT