ಬೆಂಗಳೂರು: ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ರೌಡಿ ನಿಗ್ರಹ ದಳ ರಚಿಸಲು ಕೈಗೊಂಡಿರುವ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದು, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಮರೆಮಾಚುವ ಪ್ರಯತ್ನವೇ ಈ ಕ್ರಮ ಎಂದು ಆರೋಪಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, 'ರಾಜ್ಯದಲ್ಲಿ ಈಗಾಗಲೇ ಸಮರ್ಥ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿರುವಾಗ ಹೊಸದಾಗಿ ವಿಶೇಷ ದಳ ರಚಿಸುವ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಹೊಸ ವ್ಯವಸ್ಥೆಗಳನ್ನು ರೂಪಿಸುವ ಬದಲು, ಈಗಿರುವ ಕಾನೂನು ಜಾರಿ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಿ, ಅಪರಾಧ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು
ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಮತ್ತು ರೌಡಿಶೀಟರ್ಗಳ ಪ್ರಭಾವ ಹೆಚ್ಚಾಗಿದೆ ಎಂದು ಅಶೋಕ್ ಆರೋಪಿಸಿದರು. ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ವಿಶ್ವಾಸ ಕುಗ್ಗಿದ್ದು, ಆ್ಯಂಟಿ ರೌಡಿ ಸ್ಕ್ವಾಡ್ ಘೋಷಣೆ ನಿಜವಾದ ಅಪರಾಧ ನಿಯಂತ್ರಣಕ್ಕಿಂತಲೂ ರಾಜಕೀಯ ಪ್ರೇರಿತ ಕ್ರಮವಾಗಿದೆ ಎಂದು ಅವರು ಟೀಕಿಸಿದರು.
ಆರ್ ಅಶೋಕ್ ಹೇಳಿದ್ದೇನು?
ರೌಡಿ ನಿಗ್ರಹ ದಳ ಮಾಡ್ತಾರಂತೆ. ಇದನ್ನು ಕೇಳಿ ರಾಜ್ಯಾದ್ಯಂತ ಜನ ನಗ್ತಿದ್ದಾರೆ. ಅದೂ ಯಾರಿಂದ, ಡಿಕೆಶಿಕುಮಾರ್ ಮತ್ತು ಹರಿಪ್ರಸಾದ್ ಅವರಿಂದ ಅಂತೆ. ಇದೆಲ್ಲ ಸಾಕಾರ ಆಗಲ್ಲ. ರಾಹುಲ್ ಗಾಂಧಿ ವಸೂಲಿಗೆ ಬಂದಿದ್ದಾರೆ ಅಷ್ಟೇ. ಅವರು ವಸೂಲಿ ಮಾಡಿ ಹೋಗ್ತಾರೆ. ಇವರು ಹೇಳೋದೆಲ್ಲಾ ಬೊಗಳೆ. ಇದು ಸಾಕಾರವಾಗಲ್ಲ ಎಂದು ಆರ್ ಅಶೋಕ್ ದೂರಿದರು.
ಇದರ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಘಟಿತ ಅಪರಾಧ, ದಬ್ಬಾಳಿಕೆ ಮತ್ತು ಸಮಾಜಘಾತುಕ ಚಟುವಟಿಕೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಉದ್ದೇಶದಿಂದ ವಿಶೇಷ ಆ್ಯಂಟಿ ರೌಡಿ ಸ್ಕ್ವಾಡ್ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಚಿರಪರಿಚಿತ ಅಪರಾಧಿಗಳ ವಿರುದ್ಧ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸುವುದೇ ಈ ದಳದ ಮುಖ್ಯ ಉದ್ದೇಶ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಬೆಳವಣಿಗೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ರಾಜಕೀಯ ವಾಕ್ಸಮರಕ್ಕೆ ಮತ್ತೊಂದು ಆಯಾಮವನ್ನು ನೀಡಿದ್ದು, ಕರ್ನಾಟಕ ರಾಜಕೀಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರ ಪ್ರಮುಖ ಚರ್ಚೆಯ ವಿಷಯವಾಗಿ ಪರಿಣಮಿಸಿದೆ.