ಬೆಂಗಳೂರು: ಕಾಂಗ್ರೆಸ್ನ ಹಿರಿಯ ಶಾಸಕ ಕೆ ಹೆಚ್ ಮುನಿಯಪ್ಪ, ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಮಾತುಕತೆಯಲ್ಲಿ ತಮಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಅವರು, ಹಿರಿಯ ನಾಯಕರಿಗೆ ಸಲ್ಲಬೇಕಾದ ಗೌರವವನ್ನು ಕಾಂಗ್ರೆಸ್ ನಾಯಕತ್ವ ನೀಡುತ್ತಿಲ್ಲ ಎಂದು ಶುಕ್ರವಾರ ಟೀಕಿಸಿದ್ದರು.
ಆದರೆ ನಂತರ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮುನಿಯಪ್ಪ ಅವರು “ನಾನು ತೃಪ್ತನಾಗಿದ್ದೇನೆ” ಎಂದು ಹೇಳಿದರು.
ತಾವು ಉಪ ಮುಖ್ಯಮಂತ್ರಿಯಾಗಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಇಬ್ಬರಿಗೂ ಮನವಿ ಸಲ್ಲಿಸಿದ್ದೇನೆ. ಅದರ ಬಗ್ಗೆ ತೀರ್ಮಾನಿಸುವುದು ಅವರ ಜವಾಬ್ದಾರಿ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಎಲ್ಲವನ್ನೂ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಪಕ್ಷದ ಕೆಲಸವನ್ನು ಮುಂದುವರಿಸುವಂತೆ ನನಗೆ ಸೂಚಿಸಿದ್ದಾರೆ. ನಾನು ಎಲ್ಲವನ್ನೂ ಅವರ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಹಿರಿಯ ನಾಯಕರಿಗೆ ಹೇಗೆ ಗೌರವ ನೀಡಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅವರು ನಮ್ಮ ಪರಮೋಚ್ಛ ನಾಯಕರು ಎಂದು ಮುನಿಯಪ್ಪ ಹೇಳಿದರು.
ಎಸ್ಸಿ (ಎಡ) ಸಮುದಾಯಕ್ಕೆ ಸೇರಿದ ಮುನಿಯಪ್ಪ ಅವರು, ಎಸ್ಸಿ (ಬಲ) ಸಮುದಾಯದ ಜಿ ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿದೆ ಎಂದು ಕಾಂಗ್ರೆಸ್ ನಾಯಕತ್ವದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಇದು ದಲಿತ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಬಹುದು ಎಂದು ಅವರು ರಾಹುಲ್ ಗಾಂಧಿ ಅವರಿಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಇದರ ಜೊತೆಗೆ, ಸಮಾಜ ಕಲ್ಯಾಣ, ಕೃಷಿ ಅಥವಾ ಜಲಸಂಪನ್ಮೂಲದಂತಹ ಜನಸಂಪರ್ಕ ಹೊಂದಿರುವ ಪ್ರಮುಖ ಖಾತೆಗಳನ್ನು ನೀಡುವಂತೆ ಕೂಡ ಅವರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.