ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಆಟೋ ಟಿಪ್ಪರ್ಗಳ ಹಾಜರಾತಿಯಲ್ಲಿ ಭಾರೀ ಅಕ್ರಮ ಪತ್ತೆಯಾಗಿರುವ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಇದು ಬ್ರಾಂಡ್ ಬೆಂಗಳೂರು ಅಲ್ಲ, ಸ್ಕ್ಯಾಮ್ ಬೆಂಗಳೂರು. ಲೂಟಿಯಲ್ಲೂ ಆವಿಷ್ಕಾರ ಮಾಡಿರುವ ಕಾಂಗ್ರೆಸ್ ಸರ್ಕಾರದ ‘ಇನ್ನೋವೇಟಿವ್ ಲೂಟಿ’ ಇದು” ಎಂದು ಟೀಕಿಸಿದ್ದಾರೆ.
ಕಸ ಸಂಗ್ರಹಣೆಗೆ ಬಳಸುವ ಆಟೋಗಳು ಸ್ಥಳದಲ್ಲೇ ಇಲ್ಲದಿದ್ದರೂ, ಮೊಬೈಲ್ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಾಹನಗಳು ಕಾರ್ಯನಿರ್ವಹಿಸುತ್ತಿವೆ ಎಂದು ನಕಲಿ ಹಾಜರಾತಿ ದಾಖಲಿಸಿ. ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದಿಢೀರ್ ಪರಿಶೀಲನೆ ವೇಳೆ ಒಟ್ಟು ಇರಬೇಕಿದ್ದ ವಾಹನಗಳಲ್ಲಿ ಸುಮಾರು ಶೇ.50ರಷ್ಟು ಆಟೋಗಳು ಗೈರಾಗಿದ್ದರೂ, ಆನ್ಲೈನ್ನಲ್ಲಿ ಹಾಜರಾತಿ ತೋರಿಸಿ ಬಿಲ್ ಪಾವತಿಸಲಾಗುತ್ತಿದೆ. “ಈ ಕಳ್ಳಾಟದ ಹಿಂದೆ ಯಾರ ಕೈವಾಡವಿದೆ? ಆಟೋಗಳೇ ಇಲ್ಲದೆ ಸುಳ್ಳು ಲೆಕ್ಕ ತೋರಿಸಿ ಹಣ ಲೂಟಿ ಮಾಡಿದ್ದು ಯಾರಿಗೆ ತಲುಪುತ್ತಿದೆ? ಕಸ ಸಂಗ್ರಹಣೆ ಮಾಡದೆ ಇಡೀ ಬೆಂಗಳೂರನ್ನು ಕಸದ ತೊಟ್ಟಿ ಮಾಡುತ್ತಿರುವವರ ವಿರುದ್ಧ ಕೇವಲ ಮಾರ್ಷಲ್ಗಳ ಅಮಾನತು ನಾಟಕವೇಕೆ? ಇದರ ಹಿಂದಿರುವ ಪ್ರಭಾವಿ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಅಸಲಿ ಮುಖವಾಡ ಕಳಚುವುದು ಯಾವಾಗ? ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಉದ್ದೇಶಿಸಿ, “ಆಡಳಿತ ನಡೆಸುತ್ತಿದ್ದೀರಾ ಅಥವಾ ಕಣ್ಣು ಮುಚ್ಚಿ ಲೂಟಿಗೆ ಲೈಸೆನ್ಸ್ ನೀಡಿದ್ದೀರಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಇಬ್ಬರು ಮಾರ್ಷಲ್ಗಳನ್ನು ವಜಾ ಮಾಡಿ ಕಣ್ಣೊರೆಸುವ ತಂತ್ರ ಬಿಡಿ. ನಿಮ್ಮ ಸರ್ಕಾರದ ಮೂಗಿನ ನೇರಕ್ಕೆ ತಂತ್ರಜ್ಞಾನವನ್ನೇ ದುರುಪಯೋಗಪಡಿಸಿಕೊಂಡು ಕಸದಲ್ಲೂ ರಸ ಹಿಂಡುತ್ತಿರುವ ಈ 'ಗಾರ್ಬೇಜ್ ಮಾಫಿಯಾ' ಹಗರಣದ ಬಗ್ಗೆ ತಕ್ಷಣವೇ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರಿನ ಜನರೇ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದೂ ಎಚ್ಚರಿಕೆ ನೀಡಿದ್ದಾರೆ.