ನೀಟ್ (NEET) ಪರೀಕ್ಷೆ ನಡೆದ ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಸಮಾವೇಶ ಆಯೋಜಿಸಿದ್ದನ್ನು ಟೀಕಿಸಿದ ಬಿಜೆಪಿ ನಾಯಕ ಸಂಸದ ತೇಜಸ್ವಿ ಸೂರ್ಯ ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಸಮಾವೇಶದಿಂದ ಉಂಟಾದ ಭಾರೀ ಸಂಚಾರ ದಟ್ಟಣೆಯಿಂದ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ತಲುಪಲು ತೊಂದರೆ ಅನುಭವಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.
ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ ತೇಜಸ್ವಿ ಸೂರ್ಯ, “ಕಾಂಗ್ರೆಸ್ ಪಕ್ಷವು ತನ್ನ ಸಮಾವೇಶಕ್ಕೆ ಬೇರೆ ಯಾವುದೇ ದಿನವನ್ನು ಆಯ್ಕೆ ಮಾಡಬಹುದಾಗಿತ್ತು. ಆದರೆ ಸಾವಿರಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದ ದಿನವನ್ನೇ ಆಯ್ಕೆ ಮಾಡಿಕೊಂಡಿದೆ. ಭಾರೀ ಟ್ರಾಫಿಕ್ ಜಾಮ್ನಿಂದ ಅನೇಕ ವಿದ್ಯಾರ್ಥಿಗಳು ತಡವಾಗಿ ಬಂದರು. ಕೆಲವರು ಆತಂಕದ ಸ್ಥಿತಿಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಲುಪಿ ಒಳಗೆ ಬಿಡುವಂತೆ ಅಧಿಕಾರಿಗಳನ್ನು ಮನವಿ ಮಾಡಬೇಕಾಯಿತು ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳ ಬಗ್ಗೆ “ಮೊಸಳೆ ಕಣ್ಣೀರು” ಸುರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಅವರ ಕಾಳಜಿ ನಿಜವಾಗಿದ್ದರೆ, ದೇಶದ ಪ್ರಮುಖ ಪ್ರವೇಶ ಪರೀಕ್ಷೆಗಳಲ್ಲಿ ಒಂದಾದ ನೀಟ್ ನಡೆಯುವ ಸಮಯದಲ್ಲೇ ನಗರದ ಮಧ್ಯಭಾಗದಲ್ಲಿ ರಾಜಕೀಯ ಸಮಾವೇಶ ನಡೆಸುತ್ತಿರಲಿಲ್ಲ ಎಂದರು.
ವಿದ್ಯಾರ್ಥಿಗಳಿಗೆ ರಾಜಕೀಯ ಪ್ರದರ್ಶನವಲ್ಲ, ಸಂವೇದನಾಶೀಲತೆ ಬೇಕು. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ದೆಹಲಿಯಲ್ಲಿ ಘೋಷಣೆಯಾಗಿದ್ದು, ಬೆಂಗಳೂರಿನಲ್ಲಿ ತೊಂದರೆಯಾಗಬಾರದು ಎಂದು ಬರೆದಿದ್ದಾರೆ.
ತೇಜಸ್ವಿ ಸೂರ್ಯರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ಅವರನ್ನು “ಸರಣಿ ಸುಳ್ಳುಮಾಹಿತಿ ಹರಡುವ ಸಂಸದ” ಎಂದು ಕರೆಯುತ್ತಾ, ಪ್ರಿಯಾಂಕ್ ಖರ್ಗೆ ಅವರ ಆರೋಪಗಳನ್ನು ಅರ್ಧಸತ್ಯ ಮತ್ತು ಕೃತಕ ಆಕ್ರೋಶ ಎಂದು ಬಣ್ಣಿಸಿದರು.
ಈ ಸಮಾವೇಶವು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ಕಾಂಗ್ರೆಸ್ ಪಕ್ಷದ ಹೊಸ ರಾಜ್ಯಾಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿತ್ತು.
ಪ್ರಿಯಾಂಕ್ ಖರ್ಗೆ ಎಕ್ಸ್ನಲ್ಲಿ ಬರೆದು, ಸಾಮಾನ್ಯವಾಗಿ ಮಾಡುವಂತೆ, ಈ ಸುಳ್ಳುಮಾಹಿತಿ ಸಂಸದ ಅರ್ಧಸತ್ಯಗಳನ್ನು ಹರಡಿ ಆಕ್ರೋಶ ಸೃಷ್ಟಿಸುತ್ತಿದ್ದಾರೆ. ಆರ್.ಸಿ. ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಒಟ್ಟು 720 ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು. ಅವರಲ್ಲಿ 142 ಮಂದಿ ಗೈರಾಗಿದ್ದರು. ಕೇವಲ ಮೂರು ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂದರು.
ಒಬ್ಬ ವಿದ್ಯಾರ್ಥಿನಿ ಮಾಗಡಿಯಿಂದ ಪ್ರಯಾಣಿಸುತ್ತಿದ್ದು, ಸಮಯಕ್ಕೆ ಬಸ್ ಸಿಗದ ಕಾರಣ ತಡವಾಗಿ ತಲುಪಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇನ್ನೊಬ್ಬ ಅಭ್ಯರ್ಥಿ ಮೇ 3ರ ಹಳೆಯ ಪ್ರವೇಶ ಪತ್ರ (Hall Ticket) ತೆಗೆದುಕೊಂಡು ಬಂದಿದ್ದರಿಂದ ಪರೀಕ್ಷೆಗೆ ಅವಕಾಶ ನೀಡಲಿಲ್ಲ. ಆರ್.ಟಿ. ನಗರ ಭಾಗದಿಂದ ಬಂದ ಒಬ್ಬ ಅಭ್ಯರ್ಥಿ ಮಾತ್ರ ಪರೀಕ್ಷೆ ತಪ್ಪಿಸಿಕೊಂಡಿದ್ದು, ಅದರ ನಿಖರ ಕಾರಣ ಇನ್ನೂ ಪರಿಶೀಲನೆಯಲ್ಲಿದೆ ಎಂದಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂಚಿತವಾಗಿಯೇ ಸಾರ್ವಜನಿಕರಿಗೆ ಸಂಚಾರ ಸಲಹೆಗಳು ಮತ್ತು ಮಾರ್ಗದರ್ಶನಗಳನ್ನು ಪ್ರಕಟಿಸಿದ್ದರು. ಇಂದು ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡಿದ್ದಕ್ಕೆ ಕಾಂಗ್ರೆಸ್ ಸಮಾವೇಶವನ್ನೇ ಕಾರಣವೆಂದು ಹೇಳುವ ತೇಜಸ್ವಿ ಸೂರ್ಯರ ತರ್ಕವನ್ನು ಒಪ್ಪುವುದಾದರೆ, ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಸಂಕಷ್ಟ ಮತ್ತು ಸಾವುಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ನೇರ ಹೊಣೆಗಾರರಾಗಬೇಕು ಮತ್ತು ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು,” ಎಂದು ವ್ಯಂಗ್ಯವಾಡಿದರು.
ಖಾಲಿ ಡಬ್ಬಿಯಂತಿರುವ ಈ ಸಂಸದರಿಗೆ ಇಲ್ಲಿ ತಮ್ಮ ಆಧಾರರಹಿತ ಆರೋಪಗಳಿಂದ ತಪ್ಪಿಸಿಕೊಳ್ಳಲು ತುರ್ತು ನಿರ್ಗಮನ ದ್ವಾರಗಳೇ ಇಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.
ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿದ್ದು, ವಿದ್ಯಾರ್ಥಿಗಳ ಪರೀಕ್ಷಾ ದಿನದ ವ್ಯವಸ್ಥಾಪನೆ ಕುರಿತು ರಾಜಕೀಯ ಚರ್ಚೆ ಮುಂದುವರಿದಿದೆ.