ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ನೂರಕ್ಕೆ ನೂರು ಹೆಚ್ ಡಿ ಕುಮಾರಸ್ವಾಮಿಯವರೇ ಕಾರಣ. ಸಿಡಿ ಹೊರತಂದಿದ್ದೇ ಕುಮಾರಸ್ವಾಮಿ. ಎಂತೆಂಥವರೋ ತಪ್ಪು ಮಾಡಿ ಜೈಲಿಗೆ ಹೋಗಿ ಹೊರಬಂದಿದ್ದಾರೆ. ಮನಸ್ಸು ಮಾಡಿದ್ದರೆ ದೇವೇಗೌಡರೇ ತಮ್ಮ ಮೊಮ್ಮಗನ್ನ ಜೈಲಿಂದ ಬಿಡಿಸಿ ಹೊರತರಬಹುದಿತ್ತು, ಷಡ್ಯಂತ್ರ ಮಾಡಿ ಪ್ರಜ್ವಲ್ನ ಜೈಲಿಗೆ ಹಾಕಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಸ್ಫೋಟಕ ಆರೋಪ ಮಾಡಿದ್ದಾರೆ.
ಅಣ್ಣನ ಪುತ್ರನನ್ನು ಜೈಲಿಗೆ ಹಾಕಿಸಿದ್ರು
ಅಣ್ಣನ ಮಗನ (ಪ್ರಜ್ವಲ್ ರೇವಣ್ಣ) ಬೆಳವಣಿಗೆಯನ್ನು ಸಹಿಸಿಕೊಳ್ಳದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ತಮ್ಮ ಮಗನನ್ನು ಬೆಳೆಸಲು ಅಣ್ಣನ ಮಗನನ್ನು ಜೈಲಿಗೆ ಹಾಕಿಸಿದ್ದಾರೆ ಎಂದರು.
ನಿಖಿಲ್ ಕುಮಾರಸ್ವಾಮಿ
ತಮ್ಮ ಮಗ ನಿಖಿಲ್ ಚುನಾವಣೆಯಲ್ಲಿ ಗೆದ್ದಿಲ್ಲ ಎಂದು ಅಣ್ಣನ ಮಗನನ್ನೆ ಜೈಲಿಗೆ ಹಾಕಿಸಿದ್ರು. ಪ್ರಜ್ವಲ್ ಜೈಲಿಗೆ ಹೋಗಲು ನೂರಕ್ಕೆ ನೂರು ಕುಮಾರಸ್ವಾಮಿ ಕಾರಣ. ಸಿಡಿ ಬಿಡಿಸಿದ್ದೆ ಕುಮಾರಸ್ವಾಮಿ ಎಂದರು. ನಗರಸಭೆ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆಯಲ್ಲಿ ಪ್ರತಿಭಟನೆಗೆ ಹೆಚ್.ಡಿ.ಕುಮಾರಸ್ವಾಮಿ ಸಾಥ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಕದಲೂರು ಉದಯ್, ಅಭಿವೃದ್ಧಿ ಆಗ್ತಿರುವ ವಿಚಾರಕ್ಕೆ ಹೋರಾಟ ಮಾಡೋದಾ? ಹೋರಾಟ ಅಂತ ಇಷ್ಟ ಬಂದಾಗೆ ಮಾಡಬಹುದಾ ಎಂದು ಪ್ರಶ್ನೆ ಮಾಡಿದರು.
ರಾಜಕೀಯ ಮಾಡ್ತಾರೆ
50 ಸಾವಿರ ಜನರನ್ನು ಕರೆದುಕೊಂಡು ಬೆಂಗಳೂರಿಗೆ ಪಾದಯಾತ್ರೆ ಮಾಡ್ತಾರಂತೆ. ಬೆಂಗಳೂರು ಇಲ್ಲಿಗೆ ಬಹಳ ಹತ್ತಿರ ಇದೆ. ಇವರು ದೆಹಲಿಗೆ ಪಾದಯಾತ್ರೆ ಹೋಗಲಿ ವ್ಯಾಯಮವಾದ್ರು ಆಗುತ್ತೆ. ಅವರ ಆರೋಗ್ಯ ಇನ್ನು ಸ್ವಲ್ಪ ವೃದ್ಧಿ ಆಗತ್ತೆ. ಇವರು ಇಲ್ಲಿ ಬಂದು ಉಪದೇಶ ಮಾಡೋ ಅವಶ್ಯಕತೆ ಇಲ್ಲ. ಬಡವರ ಮಕ್ಕಳು, ರೈತರ ಮಕ್ಕಳು ಬೆಳೆಯ ಬಾರದು ಅಂತ ಇಲ್ಲಿ ಬಂದು ರಾಜಕೀಯ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹುಟ್ಟಿರುವ ಮೊಮ್ಮಗನಿಗೂ ಒಂದು ಜಾಗ
ಕುಮಾರಸ್ವಾಮಿ ಅವರಿಗೆ ಅವರ ಕುಟುಂಬ ಮಾತ್ರ ಬೆಳೆಯಬೇಕು. ಈಗ ಹುಟ್ಟಿರುವ ಮೊಮ್ಮಗನಿಗೂ ಒಂದು ಜಾಗ ಮಾಡಿಕೊಡಲು ಪ್ರಯತ್ನ ಮಾಡ್ತಿದ್ದಾರೆ. ಕುಟುಂಬದ ಎಲ್ಲರಿಗೂ ಜಾಗ ಮಾಡಿದ್ದು ಆಯ್ತು. ಈಗ ಒಂದು ಪಿಳ್ಳೆ ಹುಟ್ಟಿದೆ ಅದಕ್ಕೆ ಜಾಗ ಮಾಡ್ತಿದ್ದಾರೆ. ಬೇರೆ ಯಾರು ಇವರ ಮುಂದೆ ಬೆಳಿಬಾರದು ಅಂತ ರಾಜಕೀಯ ಮಾಡ್ತಾರೆ. ಇವರ ಜೊತೆ ಇದ್ದ ಬಚ್ಚೆಗೌಡ್ರು, ನಾಗೇಗೌಡರು, ಸಿದ್ದರಾಜುರನ್ನ ಬೆಳೆಯಲು ಬಿಡ್ಲಿಲ್ಲ ಎಂದರು.
ಮ್ಯಾಚ್ ಫಿಕ್ಸಿಂಗ್
2004ರಲ್ಲಿ ಡಬ್ಬಲ್ ಬಿ ಫಾಂ ಕೊಟ್ಟು ಸಿದ್ದರಾಜುನ ಮನೆಲಿ ಕೂರಿಸಿದ್ರು ಇದು ಮದ್ದೂರು ಜನರಿಗೆ ಗೊತ್ತಿದೆ. 2008ರಲ್ಲಿ ಇವರು ಹೇಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡ್ರು ಅಂತ ಗೊತ್ತಿದೆ. ಅವರ ಬೀಗರನ್ನು, ಕುಟುಂಬದವರನ್ನು ಬೆಳಸಿಕೊಳ್ಳಲು ಏನ್ ಬೇಕಾದರೂ ಮಾಡ್ತಾರೆ. ಒಕ್ಕಲಿಗರಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಿಬಿಡ್ತಾರೆ ಅಂತ ಅವರ ಕಾಲನ್ನು ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.
‘ತಾಕತ್ತಿದ್ದರೆ ಮಂಡ್ಯಕ್ಕೆ ಕೈಗಾರಿಕೆ ತರಲಿ’
ಕುಮಾರಸ್ವಾಮಿಗೆ ತಾಕತ್ತಿದ್ದರೆ ಮಂಡ್ಯಕ್ಕೆ ಕೈಗಾರಿಕೆ ತರಲಿ, ನಾನೇ 60-70 ಎಕರೆ ಜಮೀನು ಕೊಡ್ತೀನಿ. ಸರ್ಕಾರದ ಭಾಗವಾಗಿ ನಾವು ಜಾಗ ಕೊಡುತ್ತೇವೆ. ಮೊದಲು ಹೆಚ್ಡಿಕೆ ಯಾವ ಕೈಗಾರಿಕೆ ತರುತ್ತಾರೆ ಅಂತಾ ಹೇಳಲಿ. ಅಭಿವೃದ್ಧಿ ಮಾಡಲು ಛಲ, ಆಸಕ್ತಿ ಬೇಕು. ರೈತರ ಕಷ್ಟ ತಿಳಿದಿರಬೇಕು. ಬರೀ ಭಾಷಣ, ಟಿವಿ ಮುಂದೆ ಹೇಳಿದ್ರೆ ಅಭಿವೃದ್ಧಿ ಆಗುವುದಿಲ್ಲ. ಹೆಚ್ಡಿಕೆ ಮೊದಲು ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸಲಿ ಎಂದು ಕಿಡಿಕಾರಿದ್ದಾರೆ.