ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷಗಳನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ, ಸರ್ಕಾರದ ನೇತೃತ್ವ ವಹಿಸಲು ತಾನು ಸಿದ್ಧನಿದ್ದೇನೆ ಎಂಬುದಾಗಿ ಪಕ್ಷದ ಉನ್ನತ ನಾಯಕರಿಗೆ ಬಲವಾದ ಸಂದೇಶ ಕಳುಹಿಸುತ್ತಿದ್ದಾರೆಯೇ?
ಈ ಮೈಲಿಗಲ್ಲನ್ನು ಆಚರಿಸಲು ನಿನ್ನೆ ಮಂಗಳವಾರ ಡಿ ಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗವಹಿಸಿದ್ದು, ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದೊಳಗೆ ಹೊಸ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ. ಈ ನಡುವೆ ಬಹುಕಾಲದಿಂದ ಚರ್ಚೆಯಾಗುತ್ತಿರುವ ನಾಯಕತ್ವ ಬದಲಾವಣೆಯ ಪ್ರಶ್ನೆ ಇನ್ನೂ ಬಗೆಹರಿಯದೇ ಉಳಿದಿದೆ.
ಈ ಔತಣ ಕೂಟವು ಪಕ್ಷದೊಳಗಿನ ಹೆಚ್ಚುತ್ತಿರುವ ರಾಜಕೀಯ ಸಂದೇಶಗಳ ನಡುವೆಯೇ ನಡೆಯಿತು. ಕಳೆದ ವಾರ ಡಿ ಕೆ ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಕೆಲವು ಶಾಸಕರು, ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಜನ್ಮದಿನವನ್ನು ಆಚರಿಸಲು ಒಂದು ಹೋಟೆಲ್ನಲ್ಲಿ ಸಭೆ ಸೇರಿದ್ದರು. ರಾಜಕೀಯ ವಲಯದಲ್ಲಿ ಈ ಸಭೆಯನ್ನು ಡಿಸಿಎಂ ಬಣದ ಶಕ್ತಿಪ್ರದರ್ಶನವೆಂದು ವ್ಯಾಪಕವಾಗಿ ವ್ಯಾಖ್ಯಾನಿಸಲಾಯಿತು.
ಬಜೆಟ್ ಅಧಿವೇಶನ ಬಳಿಕ ಡಿಕೆಶಿ ಬಣ ನಾಯಕರು ದೆಹಲಿಗೆ?
ಸಭೆಯಲ್ಲಿ ಭಾಗವಹಿಸಿದ್ದ ಕೆಲ ಶಾಸಕರು, ಈಗ ನಡೆಯುತ್ತಿರುವ ಬಜೆಟ್ ಅಧಿವೇಶನ ಮುಗಿದ ಬಳಿಕ ದೆಹಲಿಗೆ ತೆರಳಿ ರಾಜ್ಯದ ಭವಿಷ್ಯದ ನಾಯಕತ್ವದ ಬಗ್ಗೆ ಪಕ್ಷದ ನಾಯಕತ್ವದಿಂದ ಸ್ಪಷ್ಟತೆ ಪಡೆಯಲು ಯೋಜಿಸಿರುವುದಾಗಿ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಸ್ವತಃ ತಮ್ಮ ಪಾತ್ರದಲ್ಲಿ ಬದಲಾವಣೆ ಸಂಭವಿಸಬಹುದು ಎಂಬ ಸೂಚನೆಯನ್ನು ನೀಡಿದ್ದು, ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ನನಗೆ ನನ್ನ ಮೇಲೆ ವಿಶ್ವಾಸವಿದೆ. ನನ್ನ ಹಣೆಬರಹದಲ್ಲಿರುವುದು ಸರಿಯಾದ ಸಮಯದಲ್ಲಿ ಬರುತ್ತದೆ ಎಂದು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಡಿ ಕೆ ಶಿವಕುಮಾರ್ ಹಲವು ಬಾರಿ ದೆಹಲಿಗೆ ಭೇಟಿ ನೀಡಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿಯ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರೂ ಇದುವರೆಗೆ ಫಲಿತಾಂಶ ದೊರಕಿಲ್ಲ.
ಶಿವಕುಮಾರ್ ಆಯೋಜಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಅವರು, ತಮ್ಮದೇ ನಿಲುವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸ್ಪಷ್ಟಪಡಿಸಿದಂತಿದೆ. ಅವರು ತಕ್ಷಣವೇ ಮುಖ್ಯಮಂತ್ರಿ ಸ್ಥಾನವನ್ನು ತೊರೆಯುವ ಮನಸ್ಸಿಲ್ಲ ಎಂಬ ಸೂಚನೆಯನ್ನು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷಗಳನ್ನು ಪೂರ್ಣಗೊಳಿಸಿದ ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ, ಅವರ ಸಂಘಟನೆ ಸಾಮರ್ಥ್ಯ ಮತ್ತು ಪಕ್ಷದತ್ತ ಬದ್ಧತೆಯನ್ನು ಪ್ರಶಂಸಿಸಿದರು.
ಅವರು ನನಗಿಂತ ಕಿರಿಯರಾದರೂ ಅವರ ಮುಂದಿನ ರಾಜಕೀಯ ಭವಿಷ್ಯ ಪ್ರಕಾಶಮಾನವಾಗಿದೆ. 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಆ ಗುರಿ ಸಾಧಿಸಲು ನಡೆಯುವ ಪಕ್ಷದ ಸಂಘಟನೆ ಕಾರ್ಯಗಳಲ್ಲಿ ಮತ್ತು ಹೋರಾಟಗಳಲ್ಲಿ ನಾನೂ ಅವರ ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಪಕ್ಷದೊಳಗೆ, ಜನಪ್ರಿಯ ನಾಯಕ ಸಿದ್ದರಾಮಯ್ಯ ಅವರ ಪ್ರಭಾವವನ್ನು ಸಮತೋಲನಗೊಳಿಸಲು ಡಿ ಕೆ ಶಿವಕುಮಾರ್ ಅವರು ತಮ್ಮನ್ನು ಸಂಘಟನೆ ತಂತ್ರಜ್ಞನಾಗಿ ಸ್ಥಾಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಪಕ್ಷದ ಮುಖ್ಯಸ್ಥರಾಗಿ ಅವರು ಕಾಂಗ್ರೆಸ್ ಪಕ್ಷವನ್ನು ಕೇವಲ ಜನಾಧಾರಿತ ಸಂಘಟನೆಯಿಂದ ಕಾರ್ಯಕರ್ತ ಆಧಾರಿತ ಪಕ್ಷವಾಗಿ ಪರಿವರ್ತಿಸಲು ಒತ್ತಾಯಿಸಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿ ನೀಡುವುದು ಮತ್ತು ತಳಮಟ್ಟದ ಸಂಘಟನೆಗಳನ್ನು ಬಲಪಡಿಸುವುದರ ಮೇಲೆ ವಿಶೇಷ ಒತ್ತು ನೀಡಿದ್ದು, ಭವಿಷ್ಯದ ಚುನಾವಣಾ ಯಶಸ್ಸನ್ನು ಸಾಧಿಸುವುದೇ ಅವರ ಸದ್ಯದ ಗುರಿಯಾಗಿದೆ.