ಬೆಂಗಳೂರು: ನೀವು ರಾಜ್ಯದ ಎರಡನೇ ಮುಖ್ಯಮಂತ್ರಿ ಇದ್ದ ಹಾಗೆ. ಹಾಗೆ ನೋಡಿದರೆ ಮುಖ್ಯಮಂತ್ರಿಗಿಂತ ನೀವೇ ಪವರ್ಫುಲ್ ಎಂದು ಜೆಡಿಎಸ್ನ ಜಿ.ಟಿ.ದೇವೇಗೌಡ ಅವರು ಸಚಿವ ಬೈರತಿ ಸುರೇಶ್ ಅವರ ಕಾಲೆಳೆದರು.
ವಿಧಾನಸಭೆಯಲ್ಲಿ ಪ್ರಶ್ನೋತರ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಒಳಚರಂಡಿ ಕಾಮಗಾರಿ ಬಗ್ಗೆ ಶಾಸಕ ಜಿ.ಟಿ ದೇವೇಗೌಡ ಪ್ರಸ್ತಾಪಿಸಿದರು. ಇದಕ್ಕೆ ಬೈರತಿ ಸುರೇಶ್ ಉತ್ತರ ನೀಡುವ ಸಂದರ್ಭದಲ್ಲಿ ದೇವೇಗೌಡ ಈ ಮಾತುಗಳನ್ನು ಹೇಳಿದರು. ಮೈಸೂರಿನ ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಯ ಅರಿವು ಮುಖ್ಯಮಂತ್ರಿ ಅವರಿಗಿದೆ. ನಗರಾಭಿವೃದ್ಧಿ ಸಚಿವರು ಹೇಳಿದರೆ ಮುಖ್ಯಮಂತ್ರಿ ಕೇಳಿಯೇ ಕೇಳುತ್ತಾರೆ ಎಂದು ಕಿಚಾಯಿಸಿದರು.
ಈ ವೇಳೆ ಸಮಸ್ಯೆ ಪರಿಹಾರಕ್ಕೆ ಸಿಎಂಗೆ 40 ವರ್ಷದ ಅನುಭವ ಇದೆ. ನಗರಾಭಿವೃದ್ಧಿ ಸಚಿವರು ಹೇಳಿದರೆ ಮುಖ್ಯಮಂತ್ರಿಗಳು ಕೇಳಿಯೇ ಕೇಳ್ತಾರೆ. ಬೈರತಿ ಸುರೇಶ್ ಅಂದ್ರೆ ಎರಡನೇ ಮುಖ್ಯಮಂತ್ರಿ ಇದ್ದಂಗೆ. ಮುಖ್ಯಮಂತ್ರಿ ಗಳಿಗಿಂತ ನೀವೇ ಪವರ್ ಫುಲ್ ಎಂದು ಜಿಟಿ ದೇವೇಗೌಡ ಹೇಳಿದರು.
ಜಿಟಿ ದೇವೇಗೌಡ ಅವರ ಮಾತು ಸದನದ ಗಮನ ಸೆಳೆಯಿತು. ಉತ್ತರ ಕೊಡುವ ಸಂದರ್ಭದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ ಬೈರತಿ ಸುರೇಶ್, 'ಹೇಳಿ ಹೇಳಿ ಇರೋ ಮಂತ್ರಿಸ್ಥಾನವನ್ನೂ ತೆಗೆದುಬಿಟ್ಟಾರು' ಎಂದರು.