ಬೆಂಗಳೂರು: ಭಾರತೀಯ ಮುಸ್ಲಿಮರನ್ನು ವಿರೋಧಿಸುವ ನೀವು, ಅರಬ್ ಶೇಕ್ ಗಳನ್ನು ತಬ್ಬಿಕೊಳ್ಳುತ್ತೀರಿ... ಈ ನಿಲುವು ಏಕೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಸದಸ್ಯ ರಿಜ್ವಾನ್ ಹರ್ಷದ್ ಅವರು ಸೋಮವಾರ ವಾಗ್ದಾಳಿ ನಡೆಸಿದರು.
ಪ್ರಸಕ್ತ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟನ್ನು ಬಿಜೆಪಿ ‘ಬ್ರದರ್ಸ್ ಬಜೆಟ್’ ಎಂದು ವ್ಯಂಗ್ಯ ಮಾಡಿರುವ ಬಗ್ಗೆ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಬಡ ಮುಸ್ಲಿಮರು ಕಲ್ಯಾಣ ಯೋಜನೆಗಳಲ್ಲಿ ತಮ್ಮ ಪಾಲನ್ನು ಪಡೆಯುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದೊಳಗೆ ಬಡ ಮುಸ್ಲಿಮರಿಗೆ ಕಲ್ಯಾಣ ಯೋಜನೆಗಳ ಲಾಭ ಸಿಗುವುದನ್ನು ಸಹಿಸದವರು, ವಿದೇಶಗಳಲ್ಲಿ ಗಲ್ಫ್ ರಾಷ್ಟ್ರಗಳ ‘ಶೇಖ್’ಗಳೊಂದಿಗೆ ಸ್ನೇಹ ಬೆಳೆಸುತ್ತಾರೆ ಎಂದು ವ್ಯಂಗ್ಯವಾಡಿದರು.
ಭಾರತದಲ್ಲಿ ದಾಡಿ ಬಿಟ್ಟ ಮುಸ್ಲಿಮರನ್ನು ‘ತಾಲಿಬಾನ್’ ಎಂದು ಟೀಕಿಸುತ್ತಾರೆ. ಆದರೆ, ಈಗ ಪ್ರಧಾನಮಂತ್ರಿ ಹಾಗೂ ತಾಲಿಬಾನ್ ‘ಭಾಯಿ-ಭಾಯಿ’ ಆಗಿದ್ದಾರೆ. ಅಫ್ಘಾನಿಸ್ತಾನಕ್ಕೂ ದೊಡ್ಡ ಮೊತ್ತದ ನೆರವು ನೀಡಲಾಗಿದೆ. ಇರಾನ್ ದೇಶವು ಭಾರತದ ಹಳೆಯ ಸ್ನೇಹಿತ ರಾಷ್ಟ್ರವಾಗಿದ್ದು, ಸಾಂಸ್ಕೃತಿಕ ಬಾಂಧವ್ಯವೂ ಇದೆ. ಆದರೂ, ಪ್ರಧಾನಿ ಮೋದಿ ಅಮೆರಿಕದ ಪರ ನಿಂತಿದ್ದಾರೆ ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಲ್ಲಿ ಈ ಬಾರಿ ಅಲ್ಪಸಂಖ್ಯಾತ ಸಮುದಾಯಕ್ಕೆ ರೂ.4790 ಕೋಟಿ ಅನುದಾನ ಕೊಡಲಾಗಿದೆ. ಆದರೆ, ಇದು ಬಿಜೆಪಿಗೆ ಇಷ್ಟವಾಗಿಲ್ಲ. ಇದನ್ನು ಬ್ರದರ್ಸ್ ಬಜೆಟ್ ಎಂದು ಟೀಕೆ ಮಾಡಲಾಗಿದೆ.
ಒಟ್ಟು ಬಜೆಟ್ ಗಾತ್ರ 4 ಲಕ್ಷದ 48 ಸಾವಿರ ಕೋಟಿ ಇದೆ. ರಾಜ್ಯದಲ್ಲಿ ಶೇ 15 ರಷ್ಟಿರುವ ಅಲ್ಪಸಂಖ್ಯಾತರಿಗೆ ಈ ಪೈಕಿ 4790 ಕೋಟಿ ಅನುದಾನ ನೀಡಲಾಗಿದೆ. ಇದು ಒಟ್ಟು ಬಜೆಟ್ ಗಾತ್ರದ ಶೇ 1 ರಷ್ಟು ಆಗುವುದಿಲ್ಲ. ಹೀಗಿದ್ದರೂ ಬಿಜೆಪಿ ಟೀಕೆ ಮಾಡುವ ಉದ್ದೇಶ ಏನು? ಎಂದು ಪ್ರಶ್ನಿಸಿದರು.
ನಾವು ಈ ದೇಶದ ನಾಗರಿಕರು ಅಲ್ವಾ? ನಾವೂ ಶೇ.15ರಷ್ಟು ಇದ್ದೇವೆ ಹಾಗೂ ತೆರಿಗೆ ಕಟ್ಟುತ್ತೇವೆ. ನಮ್ಮ ವಿರುದ್ಧ ಬಿಜೆಪಿ ವಿರೋಧ ಯಾಕೆ? ನಾವು ಬ್ರದರ್ಸ್ ಹೌದು, ನಾವು ನಿಮ್ಮ ಬ್ರದರ್ಸ್ ಎಂದು ತಿರುಗೇಟು ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು, ಬಿಜೆಪಿ ಮುಸ್ಲಿಮರ ಕಲ್ಯಾಣಕ್ಕೆ ವಿರೋಧವಿಲ್ಲ, ಆದರೆ, ಕಾಂಗ್ರೆಸ್ ಸರ್ಕಾರದ ‘ಓಲೈಕೆ’ ರಾಜಕೀಯಕ್ಕೆ ವಿರೋಧವಿದೆ ಎಂದು ಹೇಳಿದರು.
“ಮುಸ್ಲಿಂ ಮಕ್ಕಳಿಗೆ ಪ್ರತ್ಯೇಕ ಶಾಲೆ-ಕಾಲೇಜುಗಳನ್ನು ಸ್ಥಾಪಿಸುವುದು ಸರಿಯೇ? ಅವರು ಇತರ ಸಮುದಾಯದ ಮಕ್ಕಳೊಂದಿಗೆ ಓದಿ, ಆಟವಾಡಬಾರದೆ?” ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಿಜ್ವಾನ್ ಅರ್ಷದ್, ಎಸ್ಸಿ, ಎಸ್ಟಿ, ಓಬಿಸಿ ವಿದ್ಯಾರ್ಥಿಗಳಿಗೆ ಸರ್ಕಾರ ಪ್ರತ್ಯೇಕ ವಸತಿಗೃಹಗಳನ್ನು ಒದಗಿಸುತ್ತಿದೆ. ಅದೇ ರೀತಿ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳೂ ಸಹ ಅಗತ್ಯವೆಂದು ಹೇಳಿದರು.
ಮುಂದುವರೆದು, ಬಿಜೆಪಿ ಅಧಿಕಾರದಲ್ಲಿದ್ದಾಗ ಮುಸ್ಲಿಮರ ಮೇಲೆ ದೌರ್ಜನ್ಯವನ್ನು ಪ್ರಚೋದಿಸುತ್ತದೆ ಮತ್ತು ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ನ ಕಲ್ಯಾಣ ಯೋಜನೆಗಳನ್ನು ವಿರೋಧಿಸುತ್ತದೆ. ಬಿಜೆಪಿ ಮುಸ್ಲಿಂ ಸಮುದಾಯವನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಜಗತ್ತಿಗೇ ತಿಳಿದಿದೆ ಎಂದು ಟೀಕಿಸಿದರು.