ಬೆಂಗಳೂರು: ಕೆಲವರು ನನ್ನ ಕಥೆ ಮುಗಿದಿದೆ ಎಂದು ಭಾವಿಸುತ್ತಿದ್ದಾರೆ. ಆದರೆ, 2028 ಬಂದಾಗ ನನ್ನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರು ಗುಡುಗಿದ್ದಾರೆ.
ಸದನದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ರೇವಣ್ಣ ಮುಗಿದೇ ಹೋದ ಅಂದ್ಕೊಂಡಿದ್ದಾರೆ. ನೀವು ಡಿಸಿಎಂ ಆಗಿದ್ದಿರಿ, ನಾನು ಮಂತ್ರಿ ಆಗಿದ್ದೆ. ಅವಾಗ ರೇವಣ್ಣನ ಮುಗಿಸಬೇಕೆಂದು ದೆಹಲಿಯಲ್ಲಿ ಏನು ನಡೆದಿತ್ತು ಎಂಬುದು ಗೊತ್ತಿದೆ. ನಾನು ಏನು ಕ್ಯಾರ್ ಮಾಡಲ್ಲ, 2028ಕ್ಕೆ ನೋಡೋಣ. ಅಲ್ಲಿವರೆಗೆ ಇದ್ದು ಚಾಲೆಂಜ್ ಮಾಡುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.
ಪ್ರತಿಪಕ್ಷಗಳನ್ನು ಉದ್ದೇಶಪೂರ್ವಕವಾಗಿ ದಮನ ಮಾಡಲಾಗುತ್ತಿದೆ. ನೀವೇ ನಮಗೆ ದಾರಿ ತೋರಿದ್ದೀರಿ. ಯಾವುದೇ ಆಧಾರವಿಲ್ಲದೆ ನನ್ನ ಮೇಲೆ ಎಫ್ಐಆರ್ ಹಾಕಲಾಯಿತು. ನನ್ನ ವಿರುದ್ಧ ಎಫ್ಐಆರ್ ದಾಖಲಿಸಲು ನನ್ನ ಒಂದು ಫೋಟೋ ಇತ್ತಾ?, ಆಡಿಯೋ ಇತ್ತಾ? ಬೆಂಗಳೂರಿನಲ್ಲಿ ಎಫ್ಐಆರ್ ಹಾಕಿಸಿದರು.
ಗೃಹ ಸಚಿವರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇರುವುದು ಎರಡೇ ಪಕ್ಷ. ಒಂದು ದೇವೇಗೌಡರದ್ದು ಮತ್ತು ಅವರ ವಿರೋಧಿಗಳ ಪಕ್ಷ. 30 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಏನಾದರೂ ಮಾಡಿ ರೇವಣ್ಣರನ್ನು ಮುಗಿಸಬೇಕೆಂಬ ಹುನ್ನಾರ ಮಾಡಲಾಗುತ್ತಿದೆ. ಇನ್ನೂ 10 ಕೇಸುಗಳನ್ನು ಹಾಕಲಿ ಎದುರಿಸುತ್ತೇನೆ. ನಮಗೂ ಎಲ್ಲವೂ ಗೊತ್ತಿದೆ, ಮುಂದೆ ನಾವು ಅಧಿಕಾರಕ್ಕೆ ಬಂದಾಗ ಏನು ಮಾಡಬೇಕೆಂದು ತೋರಿಸಿ ಕೊಡುತ್ತಿದ್ದಾರೆ. ಹಾಸನದಲ್ಲಿ ರೇವಣ್ಣ ನಾಲ್ಕೈದು ಶಾಸಕರನ್ನು ಗೆಲ್ಲಿಸುತ್ತಾನೆಂದು ನನ್ನ ವಿರುದ್ದ ಪಿತೂರಿ ನಡೆಯಿತು ಎಂದು ಆರೋಪಿಸಿದರು.
ಇದೇ ವೇಳೆ ದೇವೇಗೌಡರ ಕುಟುಂಬ ಯಾವತ್ತಿಗೂ ಪಾಪದ ಕೆಲಸ ಮಾಡಿಲ್ಲ ಎಂದು ಹೇಳಿದ ಅವರು, ಕುಮಾರಸ್ವಾಮಿ ಮೇಲಿನ ಒತ್ತುವರಿ ಆರೋಪ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಗುಡುಗಿದರು.
ಕಂದಾಯ ಸಚಿವರು ಬಹಳ ಪ್ರಮಾಣಿಕರು, ನಾನು ಅವರ ಬಗ್ಗೆ ಮಾತಾಡಲ್ಲ. ಕುಮಾರಸ್ವಾಮಿಯವರಿಗೆ 40 ವರ್ಷಗಳ ಅನುಭವ. ಅವರು ಏನೋ ಒತ್ತುವರಿ ಮಾಡ್ಕೊಬಿಟ್ಟಿದ್ದಾರೆ ಅಂತಾ ಅದಕ್ಕೆ ಒಂದು ವಿಶೇಷ ತನಿಖಾ ತಂಡ ರಚನೆ ಮಾಡಲಾಯಿತು. ಅದಕ್ಕೆ ಸುಪ್ರೀಂಕೋರ್ಟ್, ಹೈಕೋರ್ಟ್ ಲಾಯರ್, ಎಜಿ ನೇಮಕ ಮಾಡಲಾಗಿತ್ತು. ನಾಲ್ಕು ಎಕರೆ ಏನೋ ಒತ್ತುವರಿ ಮಾಡ್ಕೊಬಿಟ್ಟಿದ್ಸಾರೆ ಅಂತಾ. ಲ್ಯಾಂಡ್ ಮಾಫೀಯ ನಡೆಸ್ತಿದ್ದೀರಲ್ಲ ತಹಶಿಲ್ದಾರ್, ಅವರ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿಸ್ತೀರಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿಗಾದ್ರೆ ವಿಶೇಷ ತನಿಖೆ. 40 ವರ್ಷಗಳಿಂದ ನಾಲ್ಕು ಎಕರೆ ಉಳುಮೆ ಮಾಡ್ತಾ ಬಂದಿದ್ದಾರೆ. ಇವತ್ತು ಯಾವ ರೀತಿ ರಾಜಕೀಯ ದ್ವೇಷ ನಡೀತ್ತಿದೆ ಎಂದು ಕಂದಾಯ ಇಲಾಖೆಯಲ್ಲಿ ದಾಖಲೆ ಕೊಡ್ತೀನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡ್ರೀಮ್ಡ್ ಫಾರೆಸ್ಟ್ ನಲ್ಲೇ ಗಣಿ ಲೂಟಿ ನಡೀತ್ತಿದೆ. ಡಿಸಿ, ತಹಶಿಲ್ದಾರ್ ಕೆಲ ಪೊಲೀಸ್ ಅಧಿಕಾರಿಗಳೇ ಸೇರಿಕೊಂಡಿದ್ದಾರೆ. ಹಾಸನದ ಸುತ್ತಾ ಮುತ್ತಲೇ ಪರವಾನಗಿ ಇಲ್ಲದೇ ಗಣಿಗಾರಿಕೆ ನಡೆಯುತ್ತಿದೆ. ಇದರ ಬಗ್ಗೆ ತನಿಖೆ ಮಾಡಿಸುವ ತಾಕತ್ ಇದೆಯಾ ಈ ಸರ್ಕಾರಕ್ಕೆ ಇದೆ? ಎಂದು ಸದನದಲ್ಲಿ ರೇವಣ್ಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.