ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ದೆಹಲಿಗೆ ಭೇಟಿ ನೀಡಿದ್ದು, ತಮ್ಮ ಬೆಂಬಲಿಗರೊಂದಿಗೆ ಖಾಸಗಿ ಹೋಟೆಲ್ನಲ್ಲಿ ಭೋಜನಕೂಟದ ಸಭೆ ನಡೆಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮತ್ತೆ ಚರ್ಚೆಗಳು ಆರಂಭವಾಗಿವೆ.
ಸಿದ್ಧರಾಮಯ್ಯ ಅವರು ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಂತರ ರಾಜೀನಾಮೆ ನೀಡಬೇಕು ಎಂಬ ಹೈಕಮಾಂಡ್ ಮಟ್ಟದಲ್ಲಿ ಆದ ಒಪ್ಪಂದಕ್ಕೆ ಅನುಗುಣವಾಗಿ, ಮುಖ್ಯಮಂತ್ರಿ ಹುದ್ದೆಯಲ್ಲಿ ಬದಲಾವಣೆಗಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುವ ಕುರಿತು ಸಭೆಯಲ್ಲಿ ಮಾತುಕತೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.
ಸಭೆಯಲ್ಲಿ ಚರ್ಚೆಯಾಗಿರುವ ಮತ್ತೊಂದು ಪ್ರಮುಖ ವಿಚಾರವೆಂದರೆ, ವಿವಿಧ ಮಂಡಳಿ ಮತ್ತು ನಿಗಮಗಳಲ್ಲಿ ಅವಧಿ ವಿಸ್ತರಣೆ ಪಡೆದಿರುವ ಸದಸ್ಯರನ್ನು ಬದಲಾಯಿಸುವ ಬೇಡಿಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಳಯದ ಪ್ರಭಾವ ಕಡಿಮೆ ಮಾಡುವ ಉದ್ದೇಶದಿಂದ ಈ ಚರ್ಚೆ ನಡೆದಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಇದರ ನಡುವೆ, ಮೂರು ಬಾರಿ ಅಥವಾ ಅದಕ್ಕಿಂತ ಹೆಚ್ಚು ಗೆದ್ದಿರುವ ಸುಮಾರು 40 ಶಾಸಕರು – ಸಿದ್ದರಾಮಯ್ಯ ಬೆಂಬಲಿಗರು – ಏಪ್ರಿಲ್ 12ರಂದು ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ನ್ನು ಭೇಟಿ ಮಾಡುವ ಯೋಜನೆ ರೂಪಿಸಿದ್ದಾರೆಂದು ತಿಳಿದುಬಂದಿದೆ.
ಇವರ ಪ್ರಮುಖ ಬೇಡಿಕೆ, ಮುಂದಿನ ಸಚಿವ ಸಂಪುಟ ಪುನರ್ರಚನೆಯಲ್ಲಿ ತಮ್ಮವರಿಗೆ ಸ್ಥಾನ ಕಲ್ಪಿಸುವುದಾಗಿದೆ. ಇದಕ್ಕೆ ಪ್ರತಿಯಾಗಿ ಡಿಕೆ.ಶಿವಕುಮಾರ್ ಆಪ್ತ ನಾಯಕರು ಕೂಡ ತಮ್ಮ ಶಕ್ತಿಯನ್ನು ತೋರಿಸಲು ಮುಂದಾಗಿದ್ದು, ಕನಿಷ್ಠ ಐದು ಮಂದಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಲು ಸಿದ್ಧರಾಗಿದ್ದಾರೆ.
ಒಟ್ಟಾರೆ, ಕಾಂಗ್ರೆಸ್ ಪಕ್ಷದ ಒಳರಾಜಕೀಯದಲ್ಲಿ ಮತ್ತೆ ಗುಂಪಾಗಾರಿಕೆ ನಡೆಯುತ್ತಿರುವು ಸ್ಪಷ್ಟವಾಗುತ್ತಿದ್ದು, ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ನಡೆಯುವ ಹೈಕಮಾಂಡ್ ಮಟ್ಟದ ಮಾತುಕತೆಗಳು ಕರ್ನಾಟಕ ರಾಜಕೀಯದ ದಿಕ್ಕು ನಿರ್ಧರಿಸುವ ಸಾಧ್ಯತೆ ಇದೆ.