ದಾವಣಗೆರೆ: ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದಾಗಿ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಇದೀಗ ಕಾಂಗ್ರೆಸ್ ಗೆ ಸಂಕಷ್ಟ ಎದುರಾಗಿದ್ದು ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ್ ಶಾಮನೂರು ವಿರುದ್ಧ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ತೊಡೆತಟ್ಟಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು ನಾಮಪತ್ರ ವಾಪಸ್ ಪಡೆಯಲು ಗುರುವಾರ ಮಧ್ಯಾಹ್ನ 3 ಗಂಟೆ ತನಕ ಅವಕಾಶವಿತ್ತು. ಆದರೆ ನಾಮಪತ್ರ ವಾಪಸ್ ಪಡೆಯದೇ ಸಾದಿಕ್ ಪೈಲ್ವಾನ್ ಕಣದಲ್ಲಿ ಉಳಿದಿದ್ದಾರೆ. ಇನ್ನು SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಸೇರಿದಂತೆ 22 ಅಲ್ಪಸಂಖ್ಯಾತರು ಕಣದಲ್ಲಿರುವುದು ಕಾಂಗ್ರೆಸ್ನ ನಿದ್ದೆಗೆಡಿಸಿದೆ.
ಮುಸ್ಲಿಂ ಸಮುದಾಯದ ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಕೆಲ ಮುಖಂಡರು ಸಾದಿಕ್ ಪೈಲ್ವಾನ್ ಜೊತೆ ಮಾತುಕತೆ ನಡೆಸಿದ್ದರು. ಆದರೆ ಸಂಧಾನ ಫಲ ಕೊಟ್ಟಿಲ್ಲ. ನಾಮಪತ್ರ ವಾಪಸ್ ತೆಗೆದುಕೊಳ್ಳದೇ ಅವರು ಕಣದಲ್ಲಿ ಉಳಿದಿದ್ದಾರೆ. ದಾವಣಗೆರೆ ದಕ್ಷಿಣ ಉಪ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನ. ಸಮರ್ಥ್ ಶಾಮನೂರು ಸೇರಿ 23 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ 21 ಅಭ್ಯರ್ಥಿಗಳು ಮುಸ್ಲಿಂ ಸಮುದಾಯದವರು. ಸಾದಿಕ್ ಪೈಲ್ವಾನ್ ಪಕ್ಷೇತರ, ಎಸ್ಡಿಪಿಐ ಪಕ್ಷದ ಅಫ್ಸರ್ ಕೂಡ್ಲಿಪೇಟೆ ಪ್ರಮುಖ ಅಭ್ಯರ್ಥಿಗಳು. ಕ್ಷೇತ್ರದಲ್ಲಿ ಸುಮಾರು 80 ಸಾವಿರ ಮುಸ್ಲಿಂ ಮತಗಳಿವೆ. ಇವು ಈಗ ಹರಿದು ಹಂಚಿ ಹೋಗುವ ಆತಂಕದಲ್ಲಿ ಕಾಂಗ್ರೆಸ್ ಇದೆ.