ಬೆಂಗಳೂರು: ಪ್ರೀತಿ, ಪ್ರೇಮ ಹುಡುಗಾಟಿಕೆ ವಿಷಯವಲ್ಲ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ನನ್ನ ಪ್ರೀತಿ, ಪ್ರೇಮದ ಬಗ್ಗೆ ‘ಹಳ್ಳಿಹಕ್ಕಿ’ ಪುಸ್ತಕದಲ್ಲಿ ದಾಖಲಿಸಿದ್ದೇನೆ ಎಂದು ಬಿಜೆಪಿಯ ಎಚ್.ವಿಶ್ವನಾಥ್ ಹೇಳಿದರು.
ಮರ್ಯಾದಾ ಹತ್ಯೆ ತಡೆ ಮಸೂದೆ ಚರ್ಚೆ ವೇಳೆ ಮಾತನಾಡಿದ ಅವರು, ನಮ್ಮ ದಲಿತ ಐಎಎಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಹೆಣ್ಣುಮಕ್ಕಳನ್ನು ಮದುವೆಯಾಗಿದ್ದಾರೆ. ಆ ವಿಚಾರದಲ್ಲಿ ಮೇಲ್ಜಾತಿಯರ ವರ್ತನೆಗಳನ್ನು ಮೆಚ್ಚಲೇಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಸ್ವಂತ ಮಗಳನ್ನೇ ಕೊಲ್ಲುವ ಸ್ಥಿತಿಗೆ ಬಂದು ತಲುಪಿದ್ದೇವೆ. ಇಂತಹ ಘಟನೆಗಳನ್ನು ತಪ್ಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉತ್ತಮವಾದ ಕಾನೂನು ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂತರ್ಜಾತೀಯ ವಿವಾಹ ಸಮಾಜದಲ್ಲಿ ಒಂದು ಅಂತರ್ಯುದ್ಧವನ್ನು ಸೃಷ್ಟಿಸುತ್ತದೆ. ನಾವು ರಾಜಕಾರಣಿಗಳಿಗೆ ಇದೊಂದು ಭಾಷಣದ ಸರಕಾಗಿದೆ. ವೇದಿಕೆ ಮೇಲಿರುವವರೆಗೆ ಇವ ನಮ್ಮವ ಇವ ನಮ್ಮವ ಎಂದು ಹೇಳುತ್ತೇವೆ. ಭಾಷಣ ಮಾಡಿ ವೇದಿಕೆಯಿಂದ ಕೆಳಗಿಳಿದ ಬಳಿಕ ನಮ್ಮವರು ಯಾರಿದ್ದಾರೆ ನೋಡ್ರಪ್ಪ ಎಂದು ಹೇಳುತ್ತೇವೆ. ದಲಿತರನ್ನು ನಾವು ಇನ್ನೂ ಹಿಂದುಗಳೆಂದು ಒಪ್ಪಿಕೊಂಡಿಲ್ಲ, ಯಾರು ಅವರನ್ನು ಸೇರಿಸ್ತಿದ್ದಾರೆ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು ಸೇರಿದಂತೆ ಕೆಲವರು ಪೋಕ್ಸೋ ಕಾಯ್ದೆಯಲ್ಲಿ ಸಿಲುಕಿಕೊಂಡಿದ್ದಾರೆ. ಪೋಕ್ಸೋ ಕಾಯ್ದೆ ಈಗ ದುರ್ಬಲವಾಗುತ್ತಿದೆ. ಅದನ್ನು ನಾವುಗಳೇ ದುರ್ಬಲಗೊಳಿಸಿದ್ದೇವೆ. ಆ ರೀತಿಯಲ್ಲಿ ಮರ್ಯಾದಾ ಹತ್ಯೆ ಕಾಯ್ದೆ ಆಗಬಾರದು ಎಂದರು. ಈ ಕಾಯ್ದೆಯನ್ನು ಒಳ್ಳೇಯ ಉದ್ದೇಶಕ್ಕಾಗಿ ಜಾರಿ ತಂದಿದೆ. ಆದರೆ ಕಾಯ್ದೆಯ ಪಾಲನೆ ಆಗಬೇಕಾಗಿದೆ ಎಂದು ಹೇಳಿದರು.