ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವದ ಗೊಂದಲದ ನಡುವೆ ರಾಜ್ಯ ಗುಪ್ತಚರ ಮುಖ್ಯಸ್ಥರ ಬದಲಾವಣೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಅಧಿಕಾರದ ತಮ್ಮ ಕೈಯಲ್ಲೇ ಇದೆ ಎಂಬ ಬಲವಾದ ಸಂದೇಶ ನೀಡಲು ಈ ಕ್ರಮ ಕೈಗೊಂಡಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.
ಎಡಿಜಿಪಿ ರವಿ ಎಸ್ ಬದಲಿಗೆ ಕೇಂದ್ರ ವಲಯ ಐಜಿಪಿ ಲಾಭು ರಾಮ್ ಅವರನ್ನು ಗುಪ್ತಚರ ವಿಭಾಗದ ಐಜಿಪಿಯಾಗಿ ನೇಮಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ರಾಜಕೀಯ ಮಾಹಿತಿಯ ಸಂಗ್ರಹಣದಲ್ಲಿ ‘ಇಂಟೆಲಿಜೆನ್ಸ್ ವೈಫಲ್ಯ’ ಕಂಡುಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಸಮಾಧಾನಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿಯಲ್ಲಿ ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬ್ಯಾನರ್ಗಳು, ಪೋಸ್ಟರ್ಗಳನ್ನು ಸುಟ್ಟ ಘಟನೆ ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದು ಈ ಘಟನೆ ಬಗ್ಗೆ ಮುಂಚಿತವಾಗಿ ಸೂಕ್ತ ಮಾಹಿತಿ ಲಭ್ಯವಾಗದಿರುವುದು ಗುಪ್ತಚರ ಇಲಾಖೆಯ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.
ಇದಕ್ಕೂ ಹೊರತಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಣದ ಚಟುವಟಿಕೆಗಳ ಬಗ್ಗೆ ಸಮರ್ಪಕ ಮಾಹಿತಿ ಸಿಗದಿರುವುದೂ ಮುಖ್ಯಮಂತ್ರಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಅವರ ಬೆಂಬಲಿಗರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾದ ವಿಚಾರಗಳು ಕೂಡ ಮುಂಚಿತವಾಗಿ ತಿಳಿದಿರಲಿಲ್ಲ ಎಂದು ಹೇಳಲಾಗುತ್ತಿದೆ.
ಮುಡಾ ಹಗರಣವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು. ಪಕ್ಷದ ಒಳಗಾಗಲಿ ಹೊರಗಾಗಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಳ್ಳಲು ಗುಪ್ತಚರ ಇಲಾಖೆ ವಿಫಲವಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಈಗಾಗಲೇ ನಾಲ್ವರು ಐಪಿಎಸ್ ಅಧಿಕಾರಿಗಳು ಗುಪ್ತಚರ ಮುಖ್ಯಸ್ಥರಾಗಿ ನೇಮಕವಾಗಿರುವುದು ಗಮನಾರ್ಹ. ಕೆ.ವಿ. ಶರತ್ ಚಂದ್ರ, ಹೇಮಂತ್ ನಿಂಬಾಳ್ಕರ್, ರವಿ ಎಸ್ ನಂತರ ಇದೀಗ ಲಭು ರಾಮ್ ನೇಮಕಗೊಂಡಿದ್ದಾರೆ. ಇದು ಸರ್ಕಾರದೊಳಗಿನ ವಿಶ್ವಾಸದ ಕೊರತೆಯ ಸೂಚಕ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಕಾರ್ಯನಿರ್ವಹಿಸಿದ ಹಾಗೂ ಕಾರ್ಯನಿರ್ವಹಿಸುತ್ತಿರುವ ಗುಪ್ತಚರ ಮುಖ್ಯಸ್ಥರು...
ಕೆ ವಿ ಶರತ್ ಚಂದ್ರ: ಮೇ 21, 2023 ರಿಂದ 13 ಸೆಪ್ಟೆಂಬರ್ 2024.
ಹೇಮಂತ್ ನಿಂಬಾಳ್ಕರ್: ಸೆಪ್ಟೆಂಬರ್ 14, 2024 ರಿಂದ ಜೂನ್ 6, 2025 ರವರೆಗೆ.
ರವಿ ಎಸ್: ಜೂನ್ 6, 2025, ಏಪ್ರಿಲ್ 28, 2026
ಲಾಭು ರಾಮ್: ಏಪ್ರಿಲ್ 29, 2026 ರಿಂದ