

ನವದೆಹಲಿ: ಜಮ್ಮು-ಕಾಶ್ಮೀರ ವಿಚಾರವನ್ನು ಮತ್ತೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ.
‘ಭದ್ರತಾ ಮಂಡಳಿ ತೀರ್ಮಾನಗಳ ಜಾರಿಗೆ ಇರುವ ಅಂತರವನ್ನು ಹೇಗೆ ನಿವಾರಿಸಬೇಕು ಹಾಗೂ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಹೇಗೆ ಕಾಪಾಡಬೇಕು’ ಎಂಬ ವಿಷಯದ ಮೇಲೆ ನಡೆದ ಅರಿಯಾ-ಫಾರ್ಮುಲಾ ಸಭೆಯನ್ನು ಪಾಕಿಸ್ತಾನ ಮತ್ತು ಚೀನಾ ಸಂಯುಕ್ತವಾಗಿ ಆಯೋಜಿಸಿದ್ದವು.
ಈ ಸಭೆಯಲ್ಲಿ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಅಸೀಂ ಇಫ್ತಿಖಾರ್ ಅಹ್ಮದ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ.
ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್, ಪಾಕಿಸ್ತಾನದ ಪ್ರತಿನಿಧಿಯ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು.
ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಜಕೀಯಗೊಳಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳನ್ನು ಅವರು ಟೀಕಿಸಿದರು.
“ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದು ಎಂದಿಗೂ ಭಾರತದ್ದೇ, ಈಗಲೂ ಭಾರತದ್ದೇ ಆಗಿದೆ. ಮುಂದೆಯೂ ಭಾರತದ್ದಾಗಿಯೇ ಉಳಿಯಲಿದೆ ಎಂದು ಭಾರತ ಸ್ಪಷ್ಟ ಸಂದೇಶ ರವಾನಿಸಿದರು.
ಸಭೆಯ ಸಹಾಧ್ಯಕ್ಷ ಸ್ಥಾನದಲ್ಲಿರುವ ದೇಶವು ಸಮತೋಲನ ಮತ್ತು ತಟಸ್ಥತೆಯನ್ನು ಪಾಲಿಸಬೇಕಾದ ಸಂದರ್ಭದಲ್ಲಿ, ವೇದಿಕೆಯನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದರು.
“ಪಾಕಿಸ್ತಾನ ಪ್ರಸ್ತಾಪಿಸಿದ ಅನಗತ್ಯ ಹೇಳಿಕೆಗಳನ್ನು ನಾನು ಉಲ್ಲೇಖಿಸಲು ಬಯಸುತ್ತೇನೆ. ಸಮತೋಲನದಿಂದ ಮತ್ತು ಪಕ್ಷಪಾತರಹಿತವಾಗಿ ವರ್ತಿಸಬೇಕಾದ ಸಹಾಧ್ಯಕ್ಷ ದೇಶವೇ ಈ ವೇದಿಕೆಯನ್ನು ರಾಜಕೀಯಗೊಳಿಸಿರುವುದು ಅಚ್ಚರಿಯ ಸಂಗತಿ” ಎಂದು ಹೇಳಿದರು.
ಈ ಮೂಲಕ ಪಾಕಿಸ್ತಾನ ಮತ್ತು ಚೀನಾದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಮ್ಮು-ಕಾಶ್ಮೀರ ಪ್ರಶ್ನೆಯಲ್ಲಿ ಭಾರತದ ನಿಲುವು ಬಹಳ ಸ್ಪಷ್ಟವಾಗಿದ್ದು, ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಅಥವಾ ಅಂತರರಾಷ್ಟ್ರೀಯ ಹಸ್ತಕ್ಷೇಪವನ್ನು ಭಾರತ ಸದಾ ತಿರಸ್ಕರಿಸುತ್ತಾ ಬಂದಿದೆ.
ಸಭೆಯ ಪ್ರಮುಖ ವಿಷಯವಾದ ಯುಎನ್ ಭದ್ರತಾ ಮಂಡಳಿಯ ಪಾತ್ರ ಮತ್ತು ಅದರ ನಿರ್ಣಯಗಳ ಜಾರಿ ಕುರಿತು ಮಾತನಾಡಿದ ಹರೀಶ್ ಅವರು, ಯುಎನ್ ಚಾರ್ಟರ್ನ ಅಧ್ಯಾಯ VI ಮತ್ತು ಅಧ್ಯಾಯ VII ನಡುವಿನ ವ್ಯತ್ಯಾಸವನ್ನು ವಿವರಿಸಿದರು.
ಅಧ್ಯಾಯ VII ಅಡಿಯಲ್ಲಿ ಶಾಂತಿಗೆ ಧಕ್ಕೆ, ಶಾಂತಿ ಉಲ್ಲಂಘನೆ ಅಥವಾ ದಾಳಿ ನಡೆದ ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ಶಾಂತಿ ಪುನಃಸ್ಥಾಪನೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಅವರು ಹೇಳಿದರು. ಇಂತಹ ನಿರ್ಣಯಗಳನ್ನು ಪಾಲಿಸದಿದ್ದರೆ ಗಂಭೀರ ಪರಿಣಾಮಗಳೂ ಉಂಟಾಗಬಹುದು ಎಂದು ತಿಳಿಸಿದರು.
ಇನ್ನೊಂದೆಡೆ, ಅಧ್ಯಾಯ VI ಸಂಪೂರ್ಣ ವಿಭಿನ್ನ ಸ್ವರೂಪದ್ದಾಗಿದ್ದು, ಇದರಲ್ಲಿ ಸಂಧಾನ, ಮಾತುಕತೆ, ಮಧ್ಯಸ್ಥಿಕೆ, ವಿಚಾರಣೆ, ಸೌಹಾರ್ದಯುತ ಪರಿಹಾರ, ತೀರ್ಪುಗಾರಿಕೆ ಮುಂತಾದ ರಾಜತಾಂತ್ರಿಕ ಮಾರ್ಗಗಳ ಮೂಲಕ ವಿವಾದಗಳನ್ನು ಬಗೆಹರಿಸುವ ಅವಕಾಶಗಳಿರುತ್ತವೆ ಎಂದು ಹರೀಶ್ ವಿವರಿಸಿದರು.
ಇದೇ ವೇಳೆ, ಇಂತಹ ಮಧ್ಯಸ್ಥಿಕೆ ಕ್ರಮಗಳು ಯಾವತ್ತಿಗೂ ಶಾಶ್ವತವಾಗಿರುವುದಿಲ್ಲ; ಪರಿಸ್ಥಿತಿಗಳು ಬದಲಾಗುವಂತೆ ಅವುಗಳ ಪ್ರಸ್ತುತತೆಯನ್ನೂ ಮರುಪರಿಶೀಲಿಸಬೇಕಾಗುತ್ತದೆ ಎಂಬ ಅಂಶವನ್ನು ಅವರು ಒತ್ತಿಹೇಳಿದರು. ಇದು ಕಾಶ್ಮೀರ ಪ್ರಶ್ನೆಗೆ ಸಂಬಂಧಿಸಿದ ಹಳೆಯ ವಿಶ್ವಸಂಸ್ಥೆ ಚರ್ಚಾ ಚೌಕಟ್ಟುಗಳನ್ನೂ ಪರೋಕ್ಷವಾಗಿ ಪ್ರಶ್ನಿಸುವಂತೆಯೇ ಕಂಡುಬಂದಿತು.
ಭದ್ರತಾ ಮಂಡಳಿಯ ಕಾರ್ಯಪದ್ದತಿ ಮತ್ತು ಹಳೆಯ ಚೌಕಟ್ಟುಗಳ ಬಗ್ಗೆ ಮಾತನಾಡಿದ ಹರೀಶ್, ದಶಕಗಳ ಕಾಲ ಭದ್ರತಾ ಮಂಡಳಿಯ ಅಜೆಂಡಾದಲ್ಲೇ ಉಳಿದಿರುವ ಕೆಲವು ವಿಚಾರಗಳು ಈಗ ಮರುಪರಿಶೀಲನೆಗೆ ಒಳಪಡಬೇಕಾಗಿದೆ ಎಂದರು.
ಪ್ಯಾಲೆಸ್ಟೈನ್ ವಿಚಾರವನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಕಾಲಾನುಗುಣವಾಗಿ ಮಧ್ಯಸ್ಥಿಕೆ ಚೌಕಟ್ಟುಗಳು ಬದಲಾಗುತ್ತಲೇ ಇವೆ; ಹೀಗಾಗಿ ಒಂದೇ ರೀತಿಯ ಹಳೆಯ ಮಧ್ಯಸ್ಥಿಕೆ ವ್ಯವಸ್ಥೆಗಳು ಸದಾಕಾಲಕ್ಕೂ ಅನ್ವಯಿಸುತ್ತವೆ ಎಂದು ಭಾವಿಸುವುದು ತಪ್ಪು ಎಂದು ಹೇಳಿದರು.
ಈ ಹೇಳಿಕೆಯಿಂದ, ಭಾರತವು ಹಳೆಯ ವಿಶ್ವಸಂಸ್ಥೆ ನಿರ್ಣಯಗಳು ಮತ್ತು ಅವುಗಳ ಅನ್ವಯತೆಯ ಕುರಿತಾಗಿ ಹೊಸ ದೃಷ್ಟಿಕೋನವನ್ನು ಮುಂದಿಟ್ಟಿರುವುದು ಸ್ಪಷ್ಟವಾಗಿದೆ.
ಇದೇ ಸಂದರ್ಭದಲ್ಲಿ, ಯುಎನ್ ವ್ಯವಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸಲು ‘ಯುಎನ್80’ ಉಪಕ್ರಮದಡಿ ಸಾಮಾನ್ಯ ಸಭೆಯ ವಿವಿಧ ಆದೇಶಗಳನ್ನು ಮರುಪರಿಶೀಲಿಸಲಾಗುತ್ತಿರುವಾಗ, ಭದ್ರತಾ ಮಂಡಳಿಯ ಆದೇಶಗಳೂ ಅದರಿಂದ ಹೊರತಾಗಿರಬಾರದು ಎಂದು ಭಾರತ ಅಭಿಪ್ರಾಯಪಟ್ಟಿತು. ಅಂದರೆ, ಜಾಗತಿಕ ವಾಸ್ತವಿಕತೆಗಳಿಗೆ ಹೊಂದಿಕೆಯಾಗದ ಹಳೆಯ ನಿರ್ಣಯಗಳು ಮತ್ತು ವ್ಯವಸ್ಥೆಗಳನ್ನು ಪುನರ್ವಿಮರ್ಶೆ ಮಾಡುವ ಅವಶ್ಯಕತೆಯನ್ನು ಭಾರತ ಒತ್ತಿ ಹೇಳಿತು.
ಭಾರತವು ಬಹುಕಾಲದಿಂದಲೇ ಭದ್ರತಾ ಮಂಡಳಿಯ ಸುಧಾರಣೆಗಾಗಿ ಆಗ್ರಹಿಸುತ್ತಿದ್ದು, ಇಂದಿನ 15 ಸದಸ್ಯರ ಮಂಡಳಿ ವಿಶ್ವದ ಬದಲಾಗುತ್ತಿರುವ ರಾಜಕೀಯ, ಆರ್ಥಿಕ ಮತ್ತು ಭೌಗೋಳಿಕ ವಾಸ್ತವಿಕತೆಗಳನ್ನು ಸಮರ್ಪಕವಾಗಿ ಪ್ರತಿಬಿಂಬಿಸುವುದಿಲ್ಲ ಎಂಬ ನಿಲುವನ್ನು ಹೊಂದಿದೆ.
ಈ ಕಾರಣದಿಂದಲೇ ವಿಸ್ತೃತ ಮತ್ತು ಸುಧಾರಿತ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ನವದೆಹಲಿ ನಿರಂತರವಾಗಿ ಒತ್ತಾಯಿಸುತ್ತಿದೆ.
ಭಾರತಕ್ಕೆ ಬ್ರೆಜಿಲ್, ಜರ್ಮನಿ, ಜಪಾನ್ ಸೇರಿದಂತೆ ಜಿ-4 ರಾಷ್ಟ್ರಗಳ ಬೆಂಬಲವಿದ್ದು, ಹಲವು ಯುರೋಪಿನ ದೇಶಗಳೂ ಭಾರತದ ಶಾಶ್ವತ ಸದಸ್ಯತ್ವದ ಪರ ನಿಂತಿವೆ.
Advertisement