ಬೆಂಗಳೂರು: ಶೃಂಗೇರಿಯಲ್ಲಿ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯವರು ಕ್ರಿಮಿನಲ್ ಪಿತೂರಿ ಮಾಡಿ ವೋಟ್ ಚೋರಿ ಮಾಡಿದ್ದಾರೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 'ಇದು ಓಟ್ ಚೋರಿ ಅಲ್ಲ. ಓಟ್ ಡಕಾಯಿತಿ' ಎಂದು ಆರೋಪಿಸಿದರು. ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ ಬಂದಿದ್ದ ಮತಗಳು ಅಮಾನ್ಯ ಆಗಿವೆ. ಇಡೀ ದೇಶದಲ್ಲೇ ಇಂತಹ ಕ್ರಿಮಿನಲ್ ಚಟುವಟಿಕೆ ಎಲ್ಲೂ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆದು ಸತ್ಯ ಹೊರಬರಬೇಕು' ಎಂದು ಅವರು ಆಗ್ರಹಿಸಿದರು.
ಅಂಚೆ ಮತಗಳನ್ನು ಅಮಾನ್ಯ ಮಾಡುವಂತೆ ಜಿಲ್ಲಾಧಿಕಾರಿ, ಚುನಾವಣಾಧಿಕಾರಿಯ ಮೇಲೆ ಕೇಂದ್ರದಿಂದ ಒತ್ತಡ ಇರಬಹುದು. ಯಾರೇ ಅಧಿಕಾರಿಗಳು ಇರಲಿ, ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು ಎಂದರು.
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ನ್ಯಾಯಾಲಯದ ಆದೇಶದಂತೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ 201 ಮತಗಳ ಅಂತರದಿಂದ ಗೆದ್ದಿದ್ದರು. ರಾಜೇಗೌಡಗೆ 59.170 ಮತಗಳು ಬಂದಿದ್ದವು, ಎದುರಾಳಿ ಜೀವರಾಜ್ ಗೆ 58,970 ಮತಗಳು ಬಂದಿತ್ತು.
ಚುನಾವಣಾ ಏಜೆಂಟರು, ರಿಟರ್ನಿಂಗ್ ಆಫೀಸರ್ ಗಳು ಸಹಿ ಮಾಡಿ ಫಲಿತಾಂಶ ಘೋಷಣೆ ಮಾಡಿದ್ದರು. ನಂತರ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಮರು ಎಣಿಕೆ ಮಾಡಬೇಕೆಂದು ಹೈಕೋರ್ಟ್ ಗೆ ಹೋಗಿದ್ದರು. ಅಂಚೆ ಮತಗಳ ಮರುಎಣಿಕೆ ಮಾಡಿ ಲೋಪ ಆಗಿದ್ದರೆ ಪತ್ತೆ ಹಚ್ಚುವಂತೆ ಕೋರ್ಟ್ ಸೂಚಿಸಿತ್ತು.
ಕೋರ್ಟ್ ಆದೇಶದಂತೆ ಮರು ಎಣಿಕೆ ನಡೆಯಿತು. ಅಂಚೆ ಮತಗಳ ಮರುಎಣಿಕೆಯಲ್ಲಿ ರಾಜೇಗೌಡಗೆ ಲಭಿಸಿದ್ದ 250 ಮತಗಳು ಅಮಾನ್ಯವಾಗಿವೆ. ಇದು ಹೇಗೆ ಅಮಾನ್ಯ ಆಗುತ್ತದೆ? ಇದನ್ನು ನೋಡಿದಾಗ ಬಿಜೆಪಿಯವರು ಓಟ್ ಚೋರಿ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತೆ' ಎಂದರು.
ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಬಿಜೆಪಿಯವರು. ಹೀಗಾಗಿ ಅಪರಾಧಗಳನ್ನು ಮಾಡಲು ಹಿಂದೆ ಮುಂದೆ ನೋಡೋದಿಲ್ಲ. ಕೇಂದ್ರದ ಮಂತ್ರಿಗಳು, ವಿರೋಧ ಪಕ್ಷಗಳ ನಾಯಕರು ಸಮರ್ಥನೆ ಮಾಡಿಕೊಳ್ಳೋದ್ರಲ್ಲಿ ಅರ್ಥ ಇಲ್ಲ. ಮುಂದೆ ಜನರೇ ಇವರಿಗೆ ಪಾಠ ಕಲಿಸುತ್ತಾರೆ. ಇದನ್ನ ಫಾರೆನ್ಸಿಕ್ ಗೆ ಕಳುಹಿಸಬೇಕಿದೆ, ಇದು ಗೊತ್ತಿದ್ದು ಘೋಷಣೆ ಮಾಡಿದ್ದಾರೆ' ಎಂದರು.
ರಾಜೇಗೌಡ ದೂರು ಕೊಟ್ಟಿದ್ದಾರೆ, ಎಫ್ಐಆರ್ ಆಗಿದೆ. ನ್ಯಾಯಾಲಯಕ್ಕೂ ಹೋಗಿದ್ದಾರೆ. ಚುನಾವಣಾ ಅಬ್ಸರ್ವರ್ ಕ್ಲಿಯರೆನ್ಸ್ ಕೊಟ್ಟ ಮೇಲೆಯೇ ಘೋಷಣೆ ಮಾಡಬೇಕು. ಇವರು ಕೇಳದೆಯೇ ಫಲಿತಾಂಶ ಘೋಷಿಸಿದ್ದಾರೆ. ಇದನ್ನು ಆತುರಾತುರವಾಗಿ ಘೋಷಣೆ ಮಾಡಿರೋದು ಸರಿಯಲ್ಲ. ಇದನ್ನು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ. ನಾವು ಕ್ರಿಮಿನಲ್ ಕೇಸ್ ಹಾಕಿದ್ದೇವೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದರು.