ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್ಗೆ ಸ್ಥಳಾಂತರಿಸಿದ ವಿಚಾರವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತ ಟಿಕೆಟ್ ಮತ್ತು VVIP ಪಾಸ್ಗಳ ಮೇಲಿನ ಜನಪ್ರತಿನಿಧಿಗಳ ಅತಿಯಾದ ಆಸಕ್ತಿಯೇ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಐಪಿಎಲ್ ಫೈನಲ್ ಅನ್ನು ಅಹಮದಾಬಾದ್ಗೆ ಉಡುಗೊರೆಯಾಗಿ ಕೊಟ್ಟ ರಾಜ್ಯ ನಾಯಕರಿಗೆ ಅಭಿನಂದನೆಗಳು” ಎಂದು ವ್ಯಂಗ್ಯವಾಡಿದ್ದಾರೆ.
ಸ್ಟೇಡಿಯಂ ಕ್ರಿಕೆಟ್ ಅಭಿಮಾನಿಗಳಿಗಾಗಿ ಇರಬೇಕೇ ಹೊರತು, VIPಗಳಿಗಾಗಿ ಅಲ್ಲ. ಕೆಲವು ಶಾಸಕರು ಉಚಿತ ಪಾಸ್ಗಳಿಗಾಗಿ ನಡೆಸಿದ ಒತ್ತಡದಿಂದ ಬೆಂಗಳೂರಿನ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಸ್ಟೇಡಿಯಂ ತನ್ನ ಗೌರವ ಕಳೆದುಕೊಂಡಿದೆ ಎಂದು ಆರೋಪಿಸಿದರು.
ಸ್ಟೇಡಿಯಂ ಅನ್ನು ವೈಯಕ್ತಿಕ ಟಿಕೆಟ್ ಕೌಂಟರ್ ಆಗಿ ಬಳಸಿದ ಕೆಲವರ ಬೇಜವಾಬ್ದಾರಿಯುತ ನಡೆ ಕೇವಲ ಒಂದು ಪಂದ್ಯವನ್ನಷ್ಟೇ ಅಲ್ಲ, ಬೆಂಗಳೂರಿನ ರಾಷ್ಟ್ರೀಯ ಪ್ರತಿಷ್ಠೆಯನ್ನೂ ಕಸಿದುಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತೆಗೆದುಕೊಂಡಿರುವ ನಿರ್ಧಾರ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ,
ಆದಾಗ್ಯೂ, ನಿಖಿಲ್ ಅವರ ಜೆಡಿಎಸ್ ಸೇರಿದಂತೆ ಮೂರು ಪ್ರಮುಖ ರಾಜಕೀಯ ಪಕ್ಷಗಳ ಶಾಸಕರು ಕೆಎಸ್ಸಿಎಯಲ್ಲಿ ಪಾಸ್ಗಳಿಗಾಗಿ ಸಾಲುಗಟ್ಟಿ ನಿಂತಿದ್ದರು ಎಂದು ಮೂಲಗಳು ತಿಳಿಸಿವೆ.