ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಕಳೆದ ಸೋಮವಾರ ಬೆಂಗಳೂರಿನ ಇಂಧನ ಸಚಿವ ಕೆ ಜೆ ಜಾರ್ಜ್ ಅವರ ನಿವಾಸದಲ್ಲಿ ನಡೆಸಿದ ಮಧ್ಯಾಹ್ನದ ಭೋಜನ ಕೂಟ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿ ತಿರುವನಂತಪುರಂನಿಂದ ಬೆಂಗಳೂರಿಗೆ ಬಂದ ತಕ್ಷಣ, ಜಾರ್ಜ್ ಅವರು ಖರ್ಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ತಮ್ಮ ನಿವಾಸಕ್ಕೆ ಊಟಕ್ಕೆ ಕರೆದೊಯ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್ ಮುನಿಯಪ್ಪ, ಮುಖ್ಯ ಸಚೇತಕ ಅಶೋಕ ಎಂ ಪಟ್ಟಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ ಎಸ್ ಪೊನ್ನಣ್ಣ ಮತ್ತು ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಕೂಡ ಉಪಸ್ಥಿತರಿದ್ದರು. ಮಾಹಿತಿ ಮೂಲಗಳ ಪ್ರಕಾರ, ಈ ಭೋಜನ ಕೂಟ ಸುಮಾರು 45 ನಿಮಿಷಗಳ ಕಾಲ ನಡೆಯಿತು.
ಊಟ ಮುಗಿದ ಬಳಿಕ ಡಿ ಕೆ ಶಿವಕುಮಾರ್ ತಿರುಪತಿಗೆ ತೆರಳಿದರು. ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ಪುನಾರಚನೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ ನಿನ್ನೆ ಮಂಗಳವಾರ ಬೆಳಗ್ಗೆ ಸಿದ್ದರಾಮಯ್ಯ ಬಣದ ಸದಸ್ಯರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಉಪಾಹಾರ ಸಭೆ ನಡೆಸಿದರು.
ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ, ವಸತಿ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್, ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಆಪ್ತರೆಂದು ಪರಿಗಣಿಸಲ್ಪಡುವ ಮಾಜಿ ಎಂಎಲ್ಸಿ ಎಂ ಸಿ ವೇಣುಗೋಪಾಲ್ ಸಭೆಯಲ್ಲಿ ಭಾಗವಹಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷದ ಸಂಭ್ರಮಾಚರಣೆಯ ಅಂಗವಾಗಿ ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಮೊದಲು ಅವರು ಈ ಸಭೆ ನಡೆಸಿದರು.
ಸಿದ್ದರಾಮಯ್ಯ ಬಣವು ಮುಖ್ಯಮಂತ್ರಿ ಸ್ಥಾನ ಬದಲಾವಣೆ ಅನಿವಾರ್ಯವಾದರೆ ಡಾ. ಪರಮೇಶ್ವರ್ ಅವರಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಹೀಗಾಗಿ ಡಾ. ಪರಮೇಶ್ವರ್ ಅವರು ಸಿಎಂ ಹುದ್ದೆಗೆ ಸಂಭವನೀಯ ಅಭ್ಯರ್ಥಿ ಆಗಿ ಹೊರಹೊಮ್ಮುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ತುಮಕೂರಿನ ಗೊಲ್ಲಹಳ್ಳಿಯಲ್ಲಿರುವ ಡಾ. ಪರಮೇಶ್ವರ್ ನಿವಾಸಕ್ಕೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡಿದರು. ಕೆಪಿಸಿಸಿ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿರುವುದು, ಸಿದ್ದರಾಮಯ್ಯ ಬಣದೊಂದಿಗೆ ಹೊಂದಾಣಿಕೆ ಮತ್ತು ಮೂಲ ಕಾಂಗ್ರೆಸ್ ನಾಯಕ ಎಂಬ ಗುರುತು ಡಾ. ಪರಮೇಶ್ವರ್ ಪರವಾಗಿದೆ. ಹೊಸ ಸಿಎಲ್ ಪಿ ನಾಯಕನ ಆಯ್ಕೆ ಪರಿಸ್ಥಿತಿ ಬಂದರೆ ಸಿದ್ದರಾಮಯ್ಯ ಬಣ ಖಂಡಿತವಾಗಿಯೂ ಅವರಿಗೆ ಬೆಂಬಲ ನೀಡಲಿದೆ ಎಂದು ಒಬ್ಬ ಶಾಸಕ ಹೇಳಿದ್ದಾರೆ.
ಮಾಜಿ ಸಚಿವ ಕೆ ಎನ್ ರಾಜಣ್ಣ ಕೂಡ ಸಿದ್ದರಾಮಯ್ಯ ಸ್ಥಾನ ತ್ಯಜಿಸುವ ಪರಿಸ್ಥಿತಿ ಬಂದರೆ ಡಾ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಬೆಂಬಲಿಸುವುದಾಗಿ ಪುನರುಚ್ಚರಿಸಿದರು.
ರಾಜಕೀಯ ವಿಶ್ಲೇಷಕರ ಪ್ರಕಾರ, ಡಾ. ಪರಮೇಶ್ವರ್ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಮುಂದಿರಿಸುವುದು ಡಿ ಕೆ ಶಿವಕುಮಾರ್ ಅವರನ್ನು ಎದುರಿಸಲು ಸಿದ್ದರಾಮಯ್ಯ ಬಣದ ತಂತ್ರವಾಗಿರಬಹುದು. ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಅನುಮೋದನೆ ಪಡೆಯುವುದು ಅವರ ಪ್ರಮುಖ ಉದ್ದೇಶ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ರ್ಯಾಲಿಯಲ್ಲಿ ಭಾಗವಹಿಸಿದ ಬಳಿಕ, ಮದರ ಮಹಾಸಭಾ ಅಧ್ಯಕ್ಷರಾಗಿ ಮುನಿಯಪ್ಪ ತಮ್ಮ ಸಮುದಾಯದ ಸದಸ್ಯರೊಂದಿಗೆ ಸಭೆ ನಡೆಸಿದರು.
ಸಿದ್ದರಾಮಯ್ಯ ಬಣ ಡಾ. ಪರಮೇಶ್ವರ್ ಪರ ಯಾವುದೇ ಚಟುವಟಿಕೆ ನಡೆಸಿದರೆ, ನಾವು ಅದನ್ನು ವಿರೋಧಿಸಿ ಹಿರಿಯ ನಾಯಕ ಹಾಗೂ ಏಳು ಬಾರಿ ಸಂಸದರಾಗಿರುವ ಮುನಿಯಪ್ಪ ಅವರನ್ನು ದಲಿತ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮುಂದಿರಿಸುತ್ತೇವೆ ಎಂದು ಒಬ್ಬ ಶಾಸಕರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಪತ್ರಿಕೆಗೆ ತಿಳಿಸಿದ್ದಾರೆ.