ಬೆಂಗಳೂರು: ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಈ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಿದೆ. ಕೊಟ್ಟಿರುವ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ ಎಂಬ ತೃಪ್ತಿ ಇದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಕೂಡ ನಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿಕೊಂಡು ನಮ್ಮ 5 ಗ್ಯಾರಂಟಿಗಳಿಗೆ ಗೌರವ ನೀಡಿದೆ. ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳು ಸಹ ನಮ್ಮಂತೆ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ. ಸಮಾಜದ ಕಟ್ಟಕಡೆಯ ಜನರನ್ನು ಮೇಲೆತ್ತುವ ರೀತಿಯ ಯೋಜನೆಗಳಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ನಾವು ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಹೈಕಮಾಂಡ್ ದೆಹಲಿಗೆ ಕರೆದಾಗ ಹೋಗುತ್ತೇವೆ, ಜಿಬಿಎ ಚುನಾವಣೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲು ನಾನು ಮತ್ತು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಲಿದ್ದೇವೆ ಎಂದರು.
ನನಗೆ ನಿಷ್ಠಾವಂತ ಶಾಸಕರು ಎಂದೇನಿಲ್ಲ, ಎಲ್ಲಾ ಶಾಸಕರು ನಮ್ಮವರೇ.ಮುಖ್ಯಮಂತ್ರಿಗಳು ಸಹ ನಮ್ಮ ಮುಖ್ಯಮಂತ್ರಿಗಳು ಎಂದರು. ಈ ಬಾರಿ ಏನಾದರೂ ಗುಡ್ ನ್ಯೂಸ್ ತರುತ್ತೀರಾ ಎಂದು ಕೇಳಿದಾಗ ಪ್ರತಿದಿನವೂ ನನಗೆ ಒಳ್ಳೆಯ ದಿನವೇ, ಪ್ರತಿಮುಹೂರ್ತವೂ ನನಗೆ ಒಳ್ಳೆಯ ಮುಹೂರ್ತವೇ ಎಂದರು,