ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ನಿನ್ನೆ ಶನಿವಾರ ಸಂಜೆ ಮೂರು ದಿನಗಳ ರಾಜ್ಯ ಭೇಟಿಗೆ ಆಗಮಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ 2028ರ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಅದೃಷ್ಟ ಬದಲಾವಣೆಗೆ ಇದು ಮುನ್ನುಡಿಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಂತರ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ವಿಶೇಷ ಮಹತ್ವ ಪಡೆದಿದೆ. ಆ ಗೆಲುವಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆ (SIR) ಕಾರಣವಾಗಿದೆ ಎಂದು ವಿರೋಧಿಗಳು ಟೀಕಿಸಿದ್ದರು. ಇಂದು ಅವರು ಪಕ್ಷದ SIR ವಿಭಾಗದೊಂದಿಗೆ ಕೂಡ ಚರ್ಚೆ ನಡೆಸಲಿದ್ದಾರೆ.
ಇಂದು ಬಿಜೆಪಿ ಪಕ್ಷದ ಕಚೇರಿಯಲ್ಲಿ ಶಾಸಕರು, ಸಂಸದರು ಸೇರಿದಂತೆ ಹಲವು ಮುಖಂಡರೊಂದಿಗೆ ಸಭೆ ನಡೆಸಲಿದ್ದು, ನಗರದ ಹೊರವಲಯದ ರಿಸಾರ್ಟ್ನಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನಾಳೆ ಸೋಮವಾರ, ನಿತಿನ್ ನಬಿನ್ ಅವರು ಪಕ್ಷದ ಪ್ರಮುಖ ನಾಯಕರು ಮತ್ತು ಆರ್ಎಸ್ಎಸ್ ಕಾರ್ಯಕರ್ತರನ್ನು ಭೇಟಿ ಮಾಡಿ ತಮ್ಮ ಪ್ರವಾಸವನ್ನು ಮುಗಿಸುವ ಸಾಧ್ಯತೆಯಿದೆ. ಅವರ ಭೇಟಿಯ ಪ್ರಮುಖ ಫಲಿತಾಂಶಗಳು ಪಕ್ಷದ ಪುನರ್ಸಂಘಟನೆಗೆ ದಾರಿ ಮಾಡಿಕೊಡಬಹುದು. ಅಗತ್ಯವಿದ್ದರೆ, ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಕರ್ನಾಟಕದಿಂದ ರಾಜ್ಯಸಭೆಗೆ ನಡೆಯುವ ನಾಮನಿರ್ದೇಶನ ವಿಚಾರವೂ ಚರ್ಚೆಯಾಗುವ ಸಾಧ್ಯತೆಯಿದೆ. ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗೆಲ್ಲುವ ಸಾಧ್ಯತೆ ಇರುವುದರಿಂದ ಈ ವಿಚಾರಕ್ಕೆ ಮಹತ್ವ ಬಂದಿದೆ. ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ದೆಹಲಿಯಲ್ಲಿ ನಿತಿನ್ ನಬಿನ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಇಂದು ಬೆಳಗ್ಗೆ ನಿತಿನ್ ನಬಿನ್ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಉಪಾಹಾರ ಸೇವಿಸಲಿದ್ದಾರೆ. ನಂತರ ಪಕ್ಷದ ಕಚೇರಿಗೆ ತೆರಳುವ ಮುನ್ನ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ಕೋರ್ ಸಮಿತಿ ಸಭೆಗೆ ಅಧ್ಯಕ್ಷತೆ ವಹಿಸಿ ರಾಜ್ಯಸಭೆ ನಾಮನಿರ್ದೇಶನ ವಿಚಾರ ಚರ್ಚಿಸಲಿದ್ದಾರೆ.
ಬೆಂಗಳೂರು ಪ್ರವಾಸದ ಅವಧಿಯಲ್ಲಿ ಅವರ ಸಂಚಾರಕ್ಕಾಗಿ ನಾಲ್ಕು ಎಲೆಕ್ಟ್ರಿಕ್ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಅವರ ಭೇಟಿಯನ್ನು ಗುರುತಿಸುವಂತೆ ಯಾವುದೇ ಭವ್ಯ ಸ್ವಾಗತ ಅಥವಾ ರೋಡ್ ಶೋ ನಡೆಸಲಾಗುವುದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಸುಮಾರು 1,000 ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಅವರನ್ನು ಸ್ವಾಗತಿಸಲಿದ್ದಾರೆ.
ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯಭರಿತವಾಗಿ ನಿತಿನ್ ನಬಿನ್ ಅವರನ್ನು ಸ್ವಾಗತಿಸಿ, ಕರ್ನಾಟಕ ಹಾಗೂ ಬೆಂಗಳೂರಿನ ಹವಾಮಾನವನ್ನು ಅನುಭವಿಸಬಹುದು ಎಂದು ಹೇಳಿದ್ದಾರೆ.
ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ಗಳಲ್ಲಿ ಒಂದಾಗಿ ಹೇಗೆ ರೂಪಿಸಿದ್ದೇವೆ ಎಂಬುದನ್ನು ಅವರು ನೋಡಿ ಅನುಭವಿಸಬಹುದು.
ಇಂಧನ, ಔಷಧಿ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಕರ್ನಾಟಕದ ಜನರಿಗೆ ಹಾಗೂ ದೇಶದ ಉಳಿದ ಭಾಗಕ್ಕೆ ಅವರು ಸಂದೇಶ ನೀಡಬೇಕು ಎಂಬುದು ನಮ್ಮ ನಿರೀಕ್ಷೆ. ಬಿಜೆಪಿ ಸರ್ಕಾರದ ವಿದೇಶಾಂಗ ಮತ್ತು ಆರ್ಥಿಕ ನೀತಿಗಳು ಹೇಗೆ ವಿಫಲವಾದವು ಎಂಬುದರ ಬಗ್ಗೆ ಅವರು ನೇರವಾಗಿ ಮಾತನಾಡಬೇಕು. ಜೊತೆಗೆ, ಬಿಜೆಪಿಯೊಳಗಿನ ನಾಯಕತ್ವದ ಸಂಕಷ್ಟವನ್ನೂ ಅವರು ಬಗೆಹರಿಸುತ್ತಾರೆ ಎಂಬ ಆಶಯವಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.