ಬೆಂಗಳೂರು: ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಆದರೆ ಇದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ ಎಂದು ರಾಜ್ಯ ಬಿಜೆಪಿ ಗುರುವಾರ ಟೀಕಾ ಪ್ರಹಾರ ನಡೆಸಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಚಾರ ಹಂಚಿಕೊಂಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ಸರ್ಕಾರದ ದ ಮೂರು ವರ್ಷಗಳ ಸಾಧನೆ ಎಂದರೆ ಅದು ದಲಿತರ ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ಹಣ ಲೂಟಿ, ಯುವಕರಿಗೆ ಟೋಪಿ, ರೈತರಿಗೆ ನೇಣು ಕುಣಿಕೆ, ಜನಸಾಮಾನ್ಯರಿಗೆ ಬೆಲೆ ಏರಿಕೆ, ಕರ್ನಾಟಕಕ್ಕೆ ಸಾಲದ ಶೂಲ ಹೊದಿಕೆ ಎಂದು ಆರೋಪಿಸಿದೆ.
ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಸ್ತಬ್ಧಗೊಳಿಸಿ, ಕಲೆಕ್ಷನ್-ಕರಪ್ಷನ್-ಕಮಿಷನ್ನಲ್ಲಿಯೇ ಮೂರು ವರ್ಷ ದೂಡಿ, ಈಗ ರಾಜೀನಾಮೆ ಎಂಬ ಅಲ್ಪ ವಿರಾಮ ಇಟ್ಟಿದ್ದಾರೆ ಎಂದು ಟೀಕಿಸಿದೆ.
ನೂತನವಾಗಿ ಯಾರೇ ಸಿಎಂ ಆಗಿ ಬಂದರೂ, ಕನ್ನಡಿಗರಿಗಾಗಲಿ, ಕರ್ನಾಟಕಕ್ಕಾಗಲಿ ನಯಾಪೈಸೆ ಪ್ರಯೋಜನ ಇಲ್ಲ. ಬಡವರು, ಶ್ರಮಿಕರು, ರೈತರು, ಯುವಕರು, ಮಹಿಳೆಯರು, ದೀನ-ದಲಿತರು, ಹಿಂದುಳಿದವರನ್ನು ಹಿಂಸಿಸಿ, ಶೋಷಿಸಿ ಸರ್ಕಾರ ನಡೆಸುವ ಇವರ ಪ್ರವೃತ್ತಿ ಮುಂದುವರೆಯುತ್ತದೆ ಹೊರತು ಬದಲಾಗುವುದಿಲ್ಲ ಎಂದು ಹೇಳಿದೆ.
ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಹಾಗೂ ಕಾಂಗ್ರೆಸ್ ಹೈಕಮಾಂಡಿಗೆ ಕರ್ನಾಟಕವನ್ನು ಎಟಿಎಂ ಮಾಡುವುದು ಎರಡೇ ಇವರ ಅಜೆಂಡಾ. ಹಾಗಾಗಿ, ಆದಷ್ಟು ಬೇಗ ಈ ಜನವಿರೋಧಿ ಸರ್ಕಾರ ತೊಲಗಿದರೆ ಕನ್ನಡಿಗರಿಗೆ ನೆಮ್ಮದಿಯ ದಿನ ಸಿಗಲಿದೆ ಎಂದು ಬಿಜೆಪಿ ಬಯಸಿದೆ.