ರಾಮನಗರ: ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪತ್ನಿಯ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರು, ತಾಕತ್ತಿದ್ದರೆ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ ಮಾಡಲಿ ಎಂದು ಜೆಡಿಎಸ್ ಮಾಜಿ ಶಾಸಕ ಎ. ಮಂಜುನಾಥ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಕುಮಾರಸ್ವಾಮಿ ಅವರು ಯಾವತ್ತೂ ಅಂತಹ ಕೆಲಸ ಮಾಡಿದವರಲ್ಲ. ತಮ್ಮ ಸಹಿ ಮಾರಿಕೊಂಡವರಲ್ಲ. ನಮ್ಮ ನಾಯಕನ ವಿರುದ್ಧ ವೈಯಕ್ತಿಕ ದಾಳಿ ಮಾಡಿದರೆ, ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಆದ ಗತಿಯೇ ಬಾಲಕೃಷ್ಣ ಅವರಿಗೂ ಆಗಲಿದೆ. ಕಾರ್ಯಕರ್ತರು ಸಿಕ್ಕ ಸಿಕ್ಕ ಕಡೆ ಅಡ್ಡ ಹಾಕಿಕೊಂಡು ಪ್ರಶ್ನಿಸುತ್ತಾರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಬಾಲಕೃಷ್ಣ ಅವರು ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಕುಟುಂಬವನ್ನು ಬೈದುಕೊಂಡು ಸಚಿವರಾಗಿದವರು. ಅವರ ಕುಟುಂಬವನ್ನು ಬೈದುಕೊಂಡು ಓಡಾಡಿದರೆ ಹೆಚ್ಚಿನ ಗೌರವ ಸಿಗುತ್ತದೆ ಅಂದುಕೊಂಡಿದ್ದಾರೆ. ಕುಮಾರಸ್ವಾಮಿ ಕುಟುಂಬ ದೂಷಿಸಿದರೆ ಬಾಲಕೃಷ್ಣ ಅವರಿಗೆ ಯಾವುದೇ ಕಿರೀಟ ಸಿಗುವುದಿಲ್ಲ. ಅವರ ಮನೆಯಲ್ಲಿ ಉಂಡು ಅಧಿಕಾರ ಅನುಭವಿಸಿ, ಈಗ ಯಾರನ್ನೋ ಒಲೈಕೆ ಮಾಡಲು ಅವರ ಕುಟುಂಬದ ವಿರುದ್ಧವೇ ಮಾತನಾಡುತ್ತಿದ್ದಾರೆ. ಅವರ ಸುಳ್ಳು ಮತ್ತು ಪೊಳ್ಳು ಹೇಳಿಕೆಗಳಿಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.
ಎಚ್.ಸಿ. ಬಾಲಕೃಷ್ಣ ಅವರು ₹10 ಕೋಟಿಗೆ ತನ್ನ ತಲೆ ಮಾರಿಕೊಂಡು ಕಾಂಗ್ರೆಸ್ಗೆ ಹೋಗಿ ಜೆಡಿಎಸ್ ಬೆನ್ನಿಗೆ ಚೂರಿ ಹಾಕಿದವರು. ಅವರಂತಹ ಹೀನ ರಾಜಕಾರಣ ಯಾರೂ ಮಾಡುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಮಾಗಡಿ ರಂಗಯ್ಯ ಎಂಬ ದಲಿತ ವ್ಯಕ್ತಿಯ ಭೂಮಿಯನ್ನು ಬಾಲಕೃಷ್ಣ ಲೂಟಿ ಹೊಡೆದಿದ್ದಾರೆ. ನೆಲಮಂಗಲದಲ್ಲಿ ರೌಶಿಶೀಟರ್ ಇಟ್ಟುಕೊಂಡು ವ್ಯಕ್ತಿಯೊಬ್ಬರನ್ನು ಬಂದೂಕಿನಿಂದ ಬೆದರಿಸಿದ್ದಾರೆ. ಬಾಲಕೃಷ್ಣ ಅವರ ಪತ್ನಿ ಮೇಲೂ ಪ್ರಕರಣ ದಾಖಲಾಗಿದ್ದು, ಡಾ. ಜಿ. ಪರಮೇಶ್ವರ್ ಗೃಹ ಸಚಿವರಾಗಿದ್ದಾಗ ಕೈ ಕಾಲು ಹಿಡಿದು ಪ್ರಕರಣ ವಜಾ ಮಾಡಿಸಿಕೊಂಡರು ಎಂದು ಆರೋಪಿಸಿದರು.
ಬರ ಅಧ್ಯಯನ ಮಾಡುವುದಕ್ಕೆ ತಾಲ್ಲೂಕುಗಳಿಗೆ ಹೋದಾಗ ಸೇಬಿನ ಹಣ್ಣಿನ ಹಾರ ಹಾಕಿಸಿಕೊಂಡು ವಿಜೃಂಭಣೆಯ ಸ್ವಾಗತ ಮಾಡಿಸಿಕೊಂಡಿರುವ ಸಚಿವ ಬಾಲಕೃಷ್ಣ ಅವರು, ಬರವನ್ನು ಸಹ ವಿಜೃಂಭಣೆಯಿಂದ ಅಧ್ಯಯನ ಮಾಡಿದ್ದಾರೆ. ಅಂತಹವರು ನಮ್ಮ ನಾಯಕರ ವಿರುದ್ಧ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
‘ಬಾಲಕೃಷ್ಣ ಅವರು ಜೆಡಿಎಸ್ನಲ್ಲಿ ಶಾಸಕರಾಗಿದ್ದಾಗ ₹600 ಕೋಟಿ ಹಗರಣ ನಡೆಸಿರುವುದು ಸತ್ಯ. ಬಾಲಕೃಷ್ಣ ಮತ್ತು ಅವರ ಕುಟುಂಬ ಹಗರದಣದ ದುಡ್ಡು ತಿಂದಿದೆ. ಇದು ಸುಳ್ಳಾದರೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಆಣೆ ಮಾಡಲಿ. ಹಗರಣದಲ್ಲಿ ಯಾರ್ಯಾರು ಜೈಲಿಗೆ ಹೋದರು, ಅಧಿಕಾರಿಗಳ ಕಥೆ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಬಾಲಕೃಷ್ಣ ಅವರು ಹಣ ತಿಂದು ಗುತ್ತಿಗೆದಾರರನ್ನು ಬಲಿ ಕೊಟ್ಟರು. ಇವೆಲ್ಲಾ ಸುಳ್ಳಾಗಿದ್ದರೆ ಬಹಿರಂಗ ಚರ್ಚೆಗೆ ಬರಲಿ’ ಎಂದು ಮಂಜುನಾಥ್ ಸವಾಲು ಹಾಕಿದ್ದಾರೆ.